ADVERTISEMENT

ಸತ್ಯ, ಅಹಿಂಸೆ ಗಾಂಧೀಜಿ ಜೀವನ ಸಂದೇಶ: ಹಿರಿಯ ಗಾಂಧಿವಾದಿ ಸುಧೀಂದ್ರ ಕುಲಕರ್ಣಿ

ಹಿರಿಯ ಗಾಂಧಿವಾದಿ ಸುಧೀಂದ್ರ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 5:13 IST
Last Updated 6 ಅಕ್ಟೋಬರ್ 2025, 5:13 IST
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಮಹಾತ್ಮ ಗಾಂಧಿಯವರ ಜೀವನ ಮತ್ತು ಸಂದೇಶ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿಂತಕ ಸುಧೀಂದ್ರ ಕುಲಕರ್ಣಿ ಮಾತನಾಡಿದರು
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಮಹಾತ್ಮ ಗಾಂಧಿಯವರ ಜೀವನ ಮತ್ತು ಸಂದೇಶ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿಂತಕ ಸುಧೀಂದ್ರ ಕುಲಕರ್ಣಿ ಮಾತನಾಡಿದರು   

ಪ್ರಜಾವಾಣಿ ವಾರ್ತೆ

ವಿಜಯಪುರ: ಸತ್ಯ ಮತ್ತು ಅಹಿಂಸೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜೀವನ ಸಂದೇಶಗಳಾಗಿವೆ. ನನ್ನ ಜೀವನ ಕ್ರಮವೇ ನನ್ನ ಜೀವನ ಸಂದೇಶ ಎಂದು ಗಾಂಧೀಜಿ ಅವರು ಯಾವಾಗಲೂ ಹೇಳುತ್ತಿದ್ದರು ಎಂದು ಹಿರಿಯ ಗಾಂಧಿವಾದಿ ಸುಧೀಂದ್ರ ಕುಲಕರ್ಣಿ ಹೇಳಿದರು.

ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಗಸ್ಟ್‌ ಕ್ರಾಂತಿ ಟ್ರಸ್ಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಾತ್ಮ ಗಾಂಧೀಜಿ ಅವರ ಜೀವನ ಸಂದೇಶಗಳು’ ಕುರಿತು ಅವರು ಮಾತನಾಡಿದರು.

ADVERTISEMENT

‘ನಾನು ಬರೆದದ್ದು, ನನ್ನ ಬಗೆಗೆ ಬೇರೆಯವರು ಬರೆದಿರುವುದಕ್ಕಿಂತ ನನ್ನ ಬದುಕೇ ನನ್ನ ಜೀವನ ಸಂದೇಶ ಎಂದು ಹೇಳುತ್ತಿದ್ದ ಗಾಂಧೀಜಿಯವರ ವಿಚಾರ-ಆಚಾರಗಳಲ್ಲಿ ಯಾವುದೇ ಅಂತರವಿರುತ್ತಿರಲಿಲ್ಲ. ಇಂಥ ಮಹಾನ್ ವ್ಯಕ್ತಿಯ ಆದರ್ಶ ಇಡೀ ಜಗತ್ತಿಗೇ ಮಾದರಿ’ ಎಂದು ಬಣ್ಣಿಸಿದರು.

‘ಶಾರೀರಕವಾದ ಹಿಂಸೆ ಅಷ್ಟೇ ಹಿಂಸೆಯಲ್ಲ. ನಮ್ಮ ಅನಿಸಿಕೆ, ಭಾವನೆ, ಮಾತು, ಕೃತಿಗಳಲ್ಲಿಯೂ ಹಿಂಸೆ ಇರಕೂಡದು. ಹೃದಯ, ಮಿದುಳಿನಲ್ಲಿಯೂ ಹಿಂಸೆ ಹುಟ್ಟಬಾರದು. ಹಿಂಸೆಯನ್ನು ಅಲ್ಲಿಂದಲೇ ತೆಗೆದುಹಾಕಬೇಕು. ವೈಯಕ್ತಿಕ ಜೀವನದಲ್ಲಿ ಅಷ್ಟೇ ಅಲ್ಲ, ಸಾಮೂಹಿಕ ಜೀವನದಲ್ಲಿಯೂ ಹಿಂಸೆ ಇರಬಾರದು. ಅಂದಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ಮಹಾತ್ಮ ಗಾಂಧಿ ಫೌಂಡೇಶನ್ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಗಾಂಧೀಜಿಯು ಕಲಿಯುಗದ ಬುದ್ಧ ಎಂದು ಕುವೆಂಪು ಅವರು ವಿಶ್ಲೇಷಿಸಿದ್ದಾರೆ ಎಂದರು.

ಮಹಿಳಾ ಸಬಲೀಕರಣ ಹಾಗೂ ಅಸ್ಪೃಶ್ಯತೆ ನಿವಾರಣೆಗಾಗಿ ಗಾಂಧೀಜಿಯವರು ವಿಜಯಪುರಕ್ಕೂ ನಾಲ್ಕು ಬಾರಿ ಭೇಟಿ ನೀಡಿದ್ದರು ಎಂದು ನೆನಪಿಸಿದರು.

ಗಾಂಧೀಜಿಯ ಗ್ರಂಥಗಳನ್ನು ಓದುವುದರಿಂದ ಸಹಿಷ್ಣುತೆ, ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಬದುಕುವ ಶಕ್ತಿ ದೊರೆಯುತ್ತದೆ ಎಂದರು.

ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಗಾಂಧೀಜಿಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದ ಅವರಿಗೆ ನೀಡುವ ನಿಜವಾದ ಗೌರವವಾಗಿದೆ. ಪ್ರತಿಯೊಬ್ಬರೂ ಶಿಸ್ತುಬದ್ಧ ಜೀವನ ನಡೆಸಿದರೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪ್ರಗತಿ ಸಾಧ್ಯವಾಗುತ್ತದೆ ಎಂದರು.

ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ವಿತರಿಸಲಾಯಿತು.

ಆಗಸ್ಟ್ ಕ್ರಾಂತಿ ಟ್ರಸ್ಟ್‌ ಸದಸ್ಯೆ ರೇವತಿ ಕಟ್ಟಿ, ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್. ಲಕ್ಕಣ್ಣವರ ಉಪಸ್ಥಿತರಿದ್ದರು.

ಗಾಂಧೀಜಿಯವರ ಜೀವನದ ಪ್ರಮುಖ ಘಟನಾವಳಿಗಳ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಗಾಂಧಿ ಭಜನೆ ಮಾಡಿದರು. ಮಹಿಳಾ ವಿವಿಯ ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿ ಪ್ರೊ.ಅಶೋಕ ಕುಮಾರ ಸುರಪುರ, ಗಾಂಧಿ ಜಯಂತಿ ಸಮಿತಿ ಅಧ್ಯಕ್ಷ ಪ್ರೊ.ಮಹೇಶ ಚಿಂತಾಮಣಿ,  ಎನ್.ಎಸ್.ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಕಲಾವತಿ ಎಚ್. ಕಾಂಬಳೆ, ಗಾಂಧಿ ಅಧ್ಯಯನ ಕೇಂದ್ರ ಸಂಯೋಜಕ ಡಾ.ಅಮರನಾಥ ಪ್ರಜಾಪತಿ  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.