ವಿಜಯಪುರ: ನಗರದ ಪ್ರತಿ ಗಣೇಶ ಮಹಾಮಂಡಳಿಗಳಿಗೆ ವೈಯುಕ್ತಿಕವಾಗಿ ₹5001 ನೀಡಲಾಗುವುದು. ತಮ್ಮ ತಮ್ಮ ಮಹಾಮಂಡಳಿಗಳ ವೇದಿಕೆಗೆ ಆಗಮಿಸಿ ಹಣ ನೀಡಲಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಶಿವಾನುಭವ ಸಮುದಾಯ ಭವನದಲ್ಲಿ ಸ್ವಾಮಿ ವಿವೇಕಾನಂದ ಸೇನೆ ಶನಿವಾರ ಹಮ್ಮಿಕೊಂಡಿದ್ದ ಗಜಾನನ ಮಹಾಮಂಡಳಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಮಣ್ಣಿನ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಆದ್ಯತೆ ಕೊಡಬೇಕು. ಪೈಬರ್ ಗಣೇಶ ಮೂರ್ತಿಗಳ ಸ್ಥಾಪನೆಗೆ ಮುಂದಾಗಬೇಕು. ನೀರು ಅಮೂಲ್ಯವಾದದ್ದು, ಅದು ಶುದ್ದವಾಗಿರಬೇಕು, ಪವಿತ್ರವಾಗಿರಬೇಕು. ಹೀಗಾಗಿ ಬಾವಿಗಳನ್ನು ಹಾಳು ಮಾಡುವ ಕೆಲಸ ಮಾಡಬಾರದು. ಕೃತಕ ಹೊಂಡದಲ್ಲಿಯೇ ಗಣೇಶ ವಿಸರ್ಜನೆ ಮಾಡಬೇಕು. ಅತ್ಯಂತ ಶಿಸ್ತಿನಿಂದ ಹಾಗೂ ಭವ್ಯ ಮೆರವಣಿಗೆ ಮೂಲಕ ಮಾದರಿಯಾಗಿ ನಗರದಲ್ಲಿ ಗಣೇಶ ಹಬ್ಬ ಆಚರಿಸೋಣ ಎಂದರು.
ಸನಾತನ ಹಿಂದೂ ಧರ್ಮದ ಪ್ರಕಾರ ಸೂರ್ಯೋದಯದಿಂದಲೇ ನಮ್ಮ ಮೊದಲ ದಿನ ಆರಂಭವಾಗುತ್ತದೆ, ಮಧ್ಯರಾತ್ರಿ ಗಣೇಶನ ವಿಸರ್ಜಿಸಿದರೆ ಒಂದು ದಿನ ಹೆಚ್ಚಾಗುತ್ತದೆ. ಹೀಗಾಗಿ ಸಿದ್ದೇಶ್ವರ ಜಾತ್ರೆಯ ನಂದಿಕೋಲು ಮಾದರಿಯಲ್ಲಿ ಹಗಲು ಹೊತ್ತಿನಲ್ಲೇ ಮೆರವಣಿಗೆ ಆರಂಭಿಸಿ, ರಾತ್ರಿ ವೇಳೆಗೆ ಮುಗಿಸಬೇಕು. ಇದರಿಂದ ಜನರಿಗೆ ಮೆರವಣಿಗೆ ಕಣ್ತುಂಬಿಕೊಳ್ಳಲು ಕೂಡ ಅವಕಾಶ ದೊರೆಯುತ್ತದೆ. ಹೀಗಾಗಿ ಈ ವರ್ಷದಿಂದ ಈ ಪದ್ದತಿ ಆರಂಭಿಸೋಣ ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಡಿವೈಎಸ್ಪಿ ಬಸವರಾಜ ಯಲಗಾರ, ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಗಡಗಿ, ರಾಹುಲ್ ಜಾಧವ, ಉಪ ಆಯುಕ್ತ ಮಹಾವೀರ ಬೋರಣ್ಣವರ ಮಾತನಾಡಿದರು. ಸ್ವಾಮಿ ವಿವೇಕಾನಂದ ಸೇನೆಯ ನೂತನ ಅಧ್ಯಕ್ಷ ಚಂದ್ರು ಚೌದರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಸಿದ್ದೇಶ್ವರ ಸಂಸ್ಥೆ ನಿರ್ದೇಶಕ ಗುರುಪಾದಯ್ಯ ಗಚ್ಚಿನಮಠ, ಸಿದ್ರಾಮಪ್ಪ ಉಪ್ಪಿನ, ಮಹಾನಗರ ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ಜವಾಹರ ಗೋಸಾವಿ, ರಾಜಶೇಖರ ಕುರಿಯವರ, ಸಿಪಿಐ ಮಲ್ಲಯ್ಯ ಮಠಪತಿ, ಮುಖಂಡರಾದ ರಾಮನಗೌಡ ಪಾಟೀಲ, ಸಾಯಿಬಣ್ಣ ಭೋವಿ, ವಿಕ್ರಮ ಗಾಯಕವಾಡ, ಲಕ್ಷ್ಮಣ ಜಾಧವ ಬಾಬು ಶಿರಶ್ಯಾಡ, ಸಂತೋಷ ಪಾಟೀಲ, ರಾಜು ಜಾಧವ, ಸಚಿನ ಕುಮಸಿ,ಶಂಕರ ಹೂಗಾರ ಇದ್ದರು.
ಸೇನೆಗೆ ಪದಾಧಿಕಾರಿಗಳ ನೇಮಕ:
2026ನೇ ಸಾಲಿನ ಶ್ರೀ ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷರಾಗಿ ನಂದು ಗಡಗಿ ಉಪಾಧ್ಯಕ್ಷರಾಗಿ ರಾಜಶೇಖರ ಭಜಂತ್ರಿ ಉಮೇಶ ವೀರಕರ ಸುಭಾಷ ಚೌಡಾಪುರ ಬಸವರಾಜ ಗುರಮ್ಮನವರ ಮನೋಜ ಸುರಪುರ ವಿನೋದ ಸಾಳುಂಕೆ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ ಮಾವಿನಗಿಡದ ಅಮೀತ್ ಗರುಡಕರ ಕಾರ್ಯದರ್ಶಿಯಾಗಿ ನಾಗರಾಜ ಮುಳವಾಡ ಕಲ್ಲನಗೌಡ ಬಿರಾದಾರ ಮಲ್ಲನಗೌಡ ಪಾಟೀಲ ಪರಶುರಾಮ ಜಾಧವ ರಂಗನಾಥ ಮುಂದಡಾ ಗೋವಿಂದ ಪವಾರ ಕುಮಾರಗೌಡ ನೇಮಕ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.