ADVERTISEMENT

ಮುದ್ದೇಬಿಹಾಳ: ಗಜಾನನೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 14:38 IST
Last Updated 8 ಸೆಪ್ಟೆಂಬರ್ 2024, 14:38 IST
ಮುದ್ದೇಬಿಹಾಳ ಪಟ್ಟಣದ ಎಪಿಎಂಸಿಯಲ್ಲಿ ಬೃಹತ್ ಗಣೇಶ ಮೂರ್ತಿಯನ್ನು ಕ್ರೇನ್ ಸಹಾಯದಿಂದ ಟ್ರ್ಯಾಕ್ಟರ್‌ನಲ್ಲಿ ಕೂರಿಸಲಾಯಿತು
ಮುದ್ದೇಬಿಹಾಳ ಪಟ್ಟಣದ ಎಪಿಎಂಸಿಯಲ್ಲಿ ಬೃಹತ್ ಗಣೇಶ ಮೂರ್ತಿಯನ್ನು ಕ್ರೇನ್ ಸಹಾಯದಿಂದ ಟ್ರ್ಯಾಕ್ಟರ್‌ನಲ್ಲಿ ಕೂರಿಸಲಾಯಿತು   

ಮುದ್ದೇಬಿಹಾಳ: ಐದು ದಿನಗಳ ಕಾಲ ನಡೆಯಲಿರುವ ಗಣೇಶ ಉತ್ಸವಕ್ಕೆ ತಾಲ್ಲೂಕಿನಾದ್ಯಂತ ಶನಿವಾರ ಅದ್ದೂರಿ ಚಾಲನೆ ದೊರೆತಿದೆ.

ಪಟ್ಟಣದ ಎಪಿಎಂಸಿ, ಸರಾಫ್ ಬಜಾರ್, ತಂಗಡಗಿ ರಸ್ತೆ, ತಾಳಿಕೋಟಿ ರಸ್ತೆ ಮೊದಲಾದೆಡೆಗಳಲ್ಲಿ ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಇರಿಸಲಾಗಿತ್ತು. ಅಲ್ಲಿಂದ ತಾಲ್ಲೂಕಿನ ಗ್ರಾಮೀಣ ಭಾಗದ ಗಜಾನನ ಯುವಕ ಮಂಡಳಗಳು ತಮ್ಮ ಗಣಪತಿ ಮೂರ್ತಿಯನ್ನು ಕೊಂಡೊಯ್ಯಲು ಕೋಲಾಟ ತಂಡ, ಡೊಳ್ಳು ವಾದ್ಯ, ನಿಷೇಧ ಇದ್ದರೂ ಡಿಜೆ ಹಾಡು ಹಾಕಿ ಗಣಪತಿ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕರೆದೊಯ್ದರು. ಗಣೇಶ ಉತ್ಸವದ ಮೆರವಣಿಗೆಯಲ್ಲಿ ಕಿರಿಕ್ ಮಾಡಿದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ಪಟ್ಟಣದ ಪುರಸಭೆ, ಹೆಸ್ಕಾಂ, ತಾ.ಪಂ, ಪೊಲೀಸ್ ಠಾಣೆ, ಪಿಡಬ್ಲೂಡಿ, ಜಿ.ಪಂ, ಸೇರಿದಂತೆ ಶಾಲೆ, ಕಾಲೇಜು, ಸಂಘ ಸಂಸ್ಥೆಗಳಲ್ಲಿ ಗಣೇಶ ಮೂರ್ತಿ ಇಟ್ಟು ಪೂಜಿಸಲಾಗುತ್ತಿದೆ.

ADVERTISEMENT

ಗಮನ ಸೆಳೆದ ಹುಡ್ಕೋ ಗಣಪತಿ ಮೆರವಣಿಗೆ: ಪಟ್ಟಣದ ಹುಡ್ಕೋದ ಪಲ್ಲವಿ ಹೋಟೆಲ್ ಬಳಿ ಇರುವ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಪ್ರತಿಷ್ಠಾಪಿಸಲು ಕರೆದೊಯ್ದ ಗಣೇಶ ಮೂರ್ತಿ ಮೆರವಣಿಗೆ ಸಾರ್ವನಿಕರ ಗಮನ ಸೆಳೆಯಿತು. ಸೊಲ್ಲಾಪೂರದ ವಿಶೇಷ ಡೋಲು ವಾದನ ತಂಡದವರು ವಿವಿಧ ಬಗೆಯ ವಾದ್ಯಗಳ ವಾದನವನ್ನು ಪ್ರದರ್ಶಿಸಿ ಗಣೇಶೋತ್ಸವದ ಮೆರವಣಿಗೆಯ ಕಳೆಯನ್ನು ಹೆಚ್ಚಿಸಿದರು.

ಹುಡ್ಕೋ ಗಣೇಶ ಮೂರ್ತಿಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿ.ಎಂ.ನಾಗಠಾಣ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಬರಮಾಡಿಕೊಂಡರು.

ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ರಾತ್ರಿ ಹುಡ್ಕೋದಲ್ಲಿ ಪ್ರತಿಷ್ಠಾಪಿಸಲು ಕರೆದೊಯ್ದ ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಸೋಲ್ಲಾಪುರದ ಡೋಲ್ ವಾದನ ತಂಡದ ಪ್ರದರ್ಶನ ಗಮನ ಸೆಳೆಯಿತು

ಡಿಜೆ ನಿಷೇಧ ಎಂದು ಗಣೇಶ ಹಬ್ಬದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಹೇಳಿದ್ದರೂ ಕೆಲವು ಕಡೆ ಅಬ್ಬರದ ಡಿಜೆ ಹಾಡುಗಳು ಕೇಳಿ ಬಂದವು. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ ಗಣೇಶೋತ್ಸವ ಮೆರವಣಿಗೆ ಸುಗಮವಾಗಿ ನಡೆಯುವಂತೆ ಬಿಗಿ ಬಂದೋಬಸ್ತ್ ವಹಿಸಿದ್ದರು.

ಮುದ್ದೇಬಿಹಾಳ ಬಜಾರ್ ಗಜಾನನ ಕಮಿಟಿ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ ಗಮನ ಸೆಳೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.