ADVERTISEMENT

ಉದ್ಯಾನ ಮೇಲ್ವಿಚಾರಣೆ: ದಿನಗೂಲಿಗಳಿಗೆ ಕೈತುಂಬ ಕೆಲಸ

ಚಂದ್ರಶೇಖರ ಕೊಳೇಕರ
Published 6 ಮೇ 2021, 19:30 IST
Last Updated 6 ಮೇ 2021, 19:30 IST
ಆಲಮಟ್ಟಿಯ ಉದ್ಯಾನದ ನಿರ್ವಹಣೆಯಲ್ಲಿ ನಿರತ ದಿನಗೂಲಿ ಮಹಿಳೆ
ಆಲಮಟ್ಟಿಯ ಉದ್ಯಾನದ ನಿರ್ವಹಣೆಯಲ್ಲಿ ನಿರತ ದಿನಗೂಲಿ ಮಹಿಳೆ   

ಆಲಮಟ್ಟಿ(ವಿಜಯಪುರ): ಆಲಮಟ್ಟಿಯಲ್ಲಿ ಕೋವಿಡ್‌ ಲಾಕ್ ಡೌನ್ ಇದ್ದರೂ ಉದ್ಯಾನಗಳ ನಿರ್ವಹಣೆ ಮಾತ್ರ ನಡೆಯಲೇಬೇಕು. ಅದಕ್ಕಾಗಿ ಕೋವಿಡ್ ನಿಯಮಾವಳಿ ಅಳವಡಿಸಿಕೊಂಡು ನಿತ್ಯವೂ ನೂರಾರು ದಿನಗೂಲಿಗಳಿಗೆ ಇಲ್ಲಿ ಕೈತುಂಬಾ ಕೆಲಸ ಸಿಕ್ಕಿದೆ.

ಉದ್ಯಾನಗಳ ನಿರ್ವಹಣೆ ಮಾಡುವುದು ಅಗತ್ಯ. ಕೇವಲ ಒಂದೇ ವಾರ ನಿರ್ವಹಣೆ ಮಾಡದಿದ್ದರೇ ಒಣ ಎಲೆಗಳ ರಾಶಿ, ನೀರು, ಗೊಬ್ಬರದ ಕೊರತೆ ಹಾಗು ಹುಳು ಬಾಧೆಯಿಂದ ಸಸ್ಯಗಳಿಗೆ ತೊಂದರೆ, ಹುಲ್ಲು, ಕರಕಿ ಸೇರಿ ನಾನಾ ಕಳೆಗಳ ರಾಶಿಯೇ ಬೆಳೆಯುತ್ತವೆ. ಬೇಸಿಗೆಯಲ್ಲಿ ನೀರಿನ ಅಗತ್ಯತೆಯೂ ಸಸ್ಯಗಳಿಗೆ ಹೆಚ್ಚು.

ಆಲಮಟ್ಟಿಯ ಸುಂದರ ಪರಿಸರ ನಿರ್ಮಾಣ ಮಾಡುವಲ್ಲಿ ಅರಣ್ಯ ಇಲಾಖೆ ದಿನಗೂಲಿಗಳ ಪಾತ್ರ ಬಹುದೊಡ್ಡದು. ಅವರ ಪರಿಶ್ರಮದಿಂದಲೇ ಕಲ್ಲು ಬಂಡೆಗಳಿಂದ ಕೂಡಿದ್ದ ಆಲಮಟ್ಟಿಯಲ್ಲಿ ಹಸಿರು ನಳನಳಿಸುತ್ತಿದೆ.

ADVERTISEMENT

ಎಷ್ಟು ಜನ ದಿನಗೂಲಿಗಳು

ಆಲಮಟ್ಟಿಯ ರಾಕ್ ಗಾರ್ಡನ್‌, ಕೃಷ್ಣಾ, ಲವಕುಶ, ಮೊಘಲ್ ಸೇರಿ ನಾನಾ ಉದ್ಯಾನಗಳು, ಸಸಿಗಳನ್ನು ಬೆಳೆಸುವ ಮೂರು ನರ್ಸರಿಗಳು ಸೇರಿ ನಾನಾ ಕಡೆ ಹಸರೀಕರಣ ಕಾರ್ಯಕ್ಕೆ ಸುಮಾರು 400 ಕ್ಕೂ ಅಧಿಕ ದಿನಗೂಲಿಗಳು ನಿತ್ಯ ಇಲ್ಲಿ ದುಡಿಯುತ್ತಾರೆ.

ಹೊರಗುತ್ತಿಗೆ ಹಾಗೂ ಅರಣ್ಯ ಇಲಾಖೆಯ ವತಿಯಿಂದ ತಿಂಗಳಿಗೆ ₹12,500 ರ ವರೆಗೂ ಸಂಬಳ ಪ್ರತಿಯೊಬ್ಬರಿಗೂ ದೊರೆಯುತ್ತದೆ.

ಕೋವಿಡ್ ನಿಯಮಾವಳಿ ಪಾಲನೆ

ಉದ್ಯಾನಗಳು ವಿಸ್ತಾರ ಹೆಚ್ಚಿದೆ. ಪ್ರತಿ 2500 ಚದರ ಅಡಿಗೊಬ್ಬರಂತೆ ದಿನಗೂಲಿಗಳಿಗೆ ಕೆಲಸದ ಹಂಚಿಕೆ ಮಾಡಲಾಗಿದೆ. ಮಾಸ್ಕ್ ಕಡ್ಡಾಯಗೊಳಿಸಲಾಗಿದೆ, ನಿತ್ಯ ಥರ್ಮಲ್ ಸ್ಕ್ಯಾನರ್ ಮೂಲಕ ಜ್ವರ ಪರೀಕ್ಷೆಯೂ ನಡೆಸಲಾಗುತ್ತಿದೆ. ಎಲ್ಲ ದಿನಗೂಲಿಗಳಿಗೂ ಕೋವಿಡ್ ಲಸಿಕೆ ಹಾಕಿಸಿದ್ದು, ವಿಶೇಷ ಎಂದು ಸಹಾಯಕ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ ಹೇಳಿದರು.

ಕೆಲಸ

ನಿಗದಿಗೊಳಿಸಿದ ಪ್ರದೇಶದಲ್ಲಿ ಕಸ ತೆಗೆಯುವುದು, ಗೊಬ್ಬರ ಹಾಕುವುದು, ನೀರುಣಿಸುವುದು, ಗಿಡಗಳಿಗೆ ಆಕಾರ ರೂಪಿಸುವುದು, ಅಗತಿ ಮಾಡುವುದು, ರಾಸಾಯನಿಕ ಸಿಂಪಡಿಸುವುದು ಸೇರಿ ನಾನಾ ಕೆಲಸಗಳನ್ನು ನಾವು ನಿತ್ಯವೂ ಮಾಡುತ್ತೇವೆ ಎನ್ನುತ್ತಾರೆ ಅರಣ್ಯ ಇಲಾಖೆ ದಿನಗೂಲಿಗಳಾದ ಯಮನಪ್ಪ ತುಬಾಕೆ, ಸತೀಶ ಮುಕಾರ್ತಿಹಾಳ, ರಮೇಶ ಅಸ್ಕಿ, ನಿಜವ್ವ ಗಾಂಜಿ, ಯಲ್ಲವ್ವ.

ಕೋವಿಡ್ ಕಾಲಘಟ್ಟವೂ ಸೇರಿ ಕಳೆದ 15 ವರ್ಷದಿಂದಲೂ ನಮಗೆ ನಿತ್ಯವೂ ಕೆಲಸ ದೊರೆತಿದೆ, ಗಿಡಗಳನ್ನೇ ಮಕ್ಕಳಂತೆ ಪೋಷಿಸುತ್ತಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.

ಲಾಕ್ ಡೌನ್ ನಮ್ಮ ಬದುಕಿನ ಮೇಲೆ ಪರಿಣಾಮ ಬೀರಿಲ್ಲ ಎನ್ನುತ್ತಾರೆ ಅವರು.

ಕಟ್ಟಡ ನಿರ್ಮಾಣ ಕಾರ್ಯವನ್ನು ನಿಲ್ಲಿಸಿ ಮುಂದೆ ಕಟ್ಟಡ ಕಟ್ಟಬಹುದು, ಆದರೆ, ಉದ್ಯಾನ, ನರ್ಸರಿಯಲ್ಲಿನ ಸಸಿಗಳಿಗೆ ಕೇವಲ ಒಂದೇ ವಾರ ನಿರ್ವಹಣೆ ಕೈಬಿಡುವಂತಿಲ್ಲ ಎನ್ನುತ್ತಾರೆ ಆರ್ ಎಫ್ ಓ ಮಹೇಶ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.