ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ಚೌತಿಯ ಏಳನೇ ದಿನವಾದ ಗುರುವಾರ ವಿಸರ್ಜಿಸಲಾಯಿತು.
ವಾಹನಗಳಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಿ, ವಾದ್ಯ ಮೇಳ, ಪಟಾಕಿಗಳ ಸಿಡಿತದ ನಡುವೆ ಘೋಷಣೆಗಳನ್ನು ಹಾಕುತ್ತಾ ಕೆರೆ, ನದಿ, ಬಾವಿ ಹಾಗೂ ಕೃತಕ ಹೊಂಡಗಳಲ್ಲಿ ವಿಸರ್ಜಿಸಿದರು.
ಕೋವಿಡ್ ಹಿನ್ನೆಲೆಯಲ್ಲಿಏಳು ದಿನದಗಣೇಶೋತ್ಸವಕ್ಕೆ ಮಾತ್ರ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದರಿಂದ ಬಹುತೇಕ ಸಂಘ, ಸಂಸ್ಥೆಗಳು, ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗಳನ್ನು ಗುರುವಾರ ವಿಸರ್ಜಿಸಿದರು. ಆದರೆ, ನಗರದ ಶಿವಾಜಿ ಸರ್ಕಲ್ನಲ್ಲಿ ಶ್ರೀ ಗಜಾನನ ಉತ್ಸವ ಮಹಾಮಂಡಳ ಪ್ರತಿಷ್ಠಾಪಿಸಿರುವ ಗಣೇಶ ಸೇರಿದಂತೆ ನಾಲ್ಕೈದು ಪ್ರಮುಖ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಒಂಬತ್ತನೇ ದಿನದಂದು ಮಾಡಲು ನಿರ್ಧರಿಸಿದ್ದಾರೆ.
ಈ ನಡುವೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಗಣೇಶ ಪ್ರತಿಷ್ಠಾಪಿಸಿರುವ ಸ್ಥಳದಲ್ಲಿ ಉಚಿತ ಕೋವಿಡ್ ಲಸಿಕೆ, ಪ್ರಸಾದ ವ್ಯವಸ್ಥೆ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದವು.
ಗಣೇಶ ವಿಸರ್ಜನೆ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಕೆಲ ಸಂಘಟನೆಗಳು ಗಾಳಿಗೆ ತೂರಿರುವುದು ಗುರುವಾರ ಕಂಡುಬಂದಿತು. ಮಾಸ್ಕ್ ಧರಿಸಿದೇ, ಅಂತರ ಕಾಪಾಡದೇ, ಸ್ಯಾನಿಟೈಸ್ ಮಾಡದೇ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ತೆರಳಿದರು. ಆದರೆ, ಅಧಿಕಾರಿಗಳು ಮಾತ್ರ ಮೌನವಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.