ADVERTISEMENT

ವಿಜಯಪುರ: ಉದ್ಯೋಗಾಕಾಂಕ್ಷಿಗಳಿಗೆ ಉತ್ಸಾಹ ತುಂಬಿದ ‘ಗೈಡಿಂಗ್‌ ಫೋರ್ಸ್‌’

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಿಂದ ಆಯೋಜನೆ; ಇನ್‌ಸೈಟ್ಸ್ ಸಂಸ್ಥೆ ಸಹಭಾಗಿತ್ವ

ಬಸವರಾಜ ಸಂಪಳ್ಳಿ
Published 14 ನವೆಂಬರ್ 2025, 3:33 IST
Last Updated 14 ನವೆಂಬರ್ 2025, 3:33 IST
<div class="paragraphs"><p>ವಿಜಯಪುರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ&nbsp;‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಹಾಗೂ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌ ಸಂಸ್ಥೆ ಸಹಭಾಗಿತ್ವದಲ್ಲಿ&nbsp; &nbsp;ಉದ್ಯೋಗಾಕಾಂಕ್ಷಿಗಳಿಗಾಗಿ ಏರ್ಪಡಿಸಿದ್ದ ‘ಗೈಡಿಂಗ್‌ ಫೋರ್ಸ್‌’ ತರಬೇತಿ ಕಾರ್ಯಾಗಾರವನ್ನು&nbsp;ಜಿಲ್ಲಾಧಿಕಾರಿ ಡಾ.ಆನಂದ್‌&nbsp; ಉದ್ಘಾಟಿಸಿದರು.&nbsp;&nbsp;</p></div>

ವಿಜಯಪುರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಹಾಗೂ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌ ಸಂಸ್ಥೆ ಸಹಭಾಗಿತ್ವದಲ್ಲಿ   ಉದ್ಯೋಗಾಕಾಂಕ್ಷಿಗಳಿಗಾಗಿ ಏರ್ಪಡಿಸಿದ್ದ ‘ಗೈಡಿಂಗ್‌ ಫೋರ್ಸ್‌’ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಡಾ.ಆನಂದ್‌  ಉದ್ಘಾಟಿಸಿದರು.  

   

ವಿಜಯಪುರ: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು ಹಾಗೂ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌ ಸಂಸ್ಥೆ ಸಹಭಾಗಿತ್ವದಲ್ಲಿ ಇಲ್ಲಿನ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ‘ಗೈಡಿಂಗ್‌ ಫೋರ್ಸ್‌’ ತರಬೇತಿ ಕಾರ್ಯಾಗಾರವು ಸಾವಿರಾರು ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಕನಸಗಳನ್ನು ಬಿತ್ತಿ, ಸಾಕಾರದ ಭರವಸೆ ಮೂಡಿಸಿತು. 

ಯುಪಿಎಸ್‌ಸಿ, ಕೆಪಿಎಸ್‌ಸಿ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಹೇಗೆ ನಡೆಸಬೇಕು? ತರಬೇತಿಯನ್ನು ಎಲ್ಲಿ ಮತ್ತು ಹೇಗೆ ಪಡೆಯಬೇಕು? ಯಾವ ಪುಸ್ತಕಗಳನ್ನು ಓದಬೇಕು? ಅಣಕು ಪರೀಕ್ಷೆಗಳು ಎಷ್ಟು ಮುಖ್ಯ? ಸಂದರ್ಶನಕ್ಕೆ ಸಿದ್ಧತೆ ಹೇಗೆ ಮಾಡಬೇಕು? ಯಾವೆಲ್ಲ ವಿಷಯವಾಗಿ ಪ್ರಶ್ನೆಗಳು ಎದುರಾಗುತ್ತವೆ?  ಪ್ರತಿ ದಿನ ಎಷ್ಟು ಗಂಟೆ ಅಧ್ಯಯನ ಮಾಡಬೇಕು? ಓದಿದ ವಿಷಯವನ್ನು ನೆನಪಿಟ್ಟುಕೊಳ್ಳುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆ, ಸಂದೇಹಗಳಿಗೆ ವಿಶೇಷ ಭಾಷಣಕಾರರಾಗಿ ಬಂದಿದ್ದ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ್‌ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥಾಪಕ ಮತ್ತು ನಿರ್ದೇಶಕರಾದ ವಿನಯ್‌ ಕುಮಾರ್‌ ಜಿ.ಬಿ. ಉತ್ತರವಾದರು.

ADVERTISEMENT

ಪರೀಕ್ಷಾರ್ಥಿಗಳಿಗೆ ದೈಹಿಕ, ಮಾನಸಿಕ ಆರೋಗ್ಯ ಎಷ್ಟು ಮುಖ್ಯ? ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಕುಟುಂಬ, ಬಂಧು ಬಳಗ, ಸ್ನೇಹಿತರು, ಸಮಾಜ ನಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗಳು ಎಂಥವು? ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಶಾಲಿಯಾದರೆ ಸಿಗುವ ಗೌರವ ಎಷ್ಟು? ಸೋಲಾದರೆ ಎದುರಿಸಬೇಕಾದ ಟೀಕೆ, ಟಿಪ್ಪಣಿ, ಮಾನಸಿಕ ಒತ್ತಡ ಹೇಗಿರುತ್ತದೆ? ಅದನ್ನು ಎದುರಿಸುವುದು ಹೇಗೆ? ಆಡಳಿತ ಸೇವೆಗೆ ಸೇರಿದ ಮೇ ಲೆ ಎದುರಾಗಬಹುದಾದ ಸವಾಲುಗಳೇನು? ಅವುಗಳನ್ನು ನಿವಾರಿಸುವುದು ಹೇಗೆ? ಐಎಎಸ್‌, ಐಪಿಎಸ್‌ ಅಧಿಕಾರಿಗಳ ಗತ್ತು, ಜೀವನಾನುಭವ ಹೇಗಿರುತ್ತದೆ? ಸಿಗುವ ಗೌರವ, ಮರ್ಯಾದೆ ಎಂಥದ್ದು ಎಂಬ ತಮ್ಮ ಅನುಭವದ ಮಾತುಗಳನ್ನು  ಜಿಲ್ಲಾಧಿಕಾರಿ ಡಾ.ಆನಂದ್‌ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ತಿಳಿಸುವ ಮೂಲಕ ವಿದ್ಯಾರ್ಥಿ, ಯುವಜನರ ಐಎಎಸ್‌, ಐಪಿಎಸ್‌ ಕನಸಿಗೆ ನೀರೆರೆದರು. 

ಭಾಷಣಗಳಿಂದ ಪ್ರೇರಿತರಾದ ಸಾವಿರಾರು ವಿದ್ಯಾರ್ಥಿಗಳು ತಾವೂ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳನ್ನು ಎದುರಿಸುವುದಾಗಿ ಸಂಕಲ್ಪ ಮಾಡಿದರು. ಅಲ್ಲದೇ, ತಮ್ಮ ಸಂದೇಹಗಳಿಗೆ ಸ್ಥಳದಲ್ಲೇ ಪರಿಹಾರವನ್ನು ಕಂಡುಕೊಂಡರು. 

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ವಿದ್ಯಾರ್ಥಿ, ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗ್ಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಿಂದ ಹೊಸ ಹೊಸ ವಿಷಯಗಳು ತಿಳಿಯಿತು, ಪರೀಕ್ಷೆಗೆ ಅಣಿಯಾಗಲು ಅನುಕೂಲವಾಯಿತು. ನಮ್ಮ ಹಲವು ಸಂದೇಹಗಳಿಗೆ ಈ ಕಾರ್ಯಾಗಾರದಿಂದ ಉತ್ತರ ಲಭಿಸಿತು ಎಂದು ಅನೇಕರು ಕೃತಜ್ಞತೆ ಸಲ್ಲಿಸಿದರು.

ವಿಜಯಪುರದವರೇ ಆದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾಧಿಕಾರಿ ಡಾ.ಆನಂದ್‌ ಕೆ. ಹಾಗೂ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥಾಪಕ ವಿನಯ್‌ ಕುಮಾರ್‌ ಜಿ.ಬಿ. ಭಾಷಣಗಳಿಂದ ಆಕರ್ಷಿತರಾದ ವಿದ್ಯಾರ್ಥಿ, ಯುವಜನರು ಅವರ ಜೊತೆ ಫೋಟೋ, ಸೆಲ್ಪಿ ತೆಗೆದುಕೊಂಡು, ಖುಷಿಪಟ್ಟರು. ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳಾಗುವ ಕನಸು ಹೊತ್ತು, ಗತ್ತಿನಲ್ಲಿ ಮನೆಯತ್ತ ಹೆಜ್ಜೆ ಹಾಕಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು, ವಿವಿಧ ಸರ್ಕಾರಿ, ಖಾಸಗಿ ಪದವಿ ಕಾಲೇಜುಗಳಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಂಡೋಪತಂಡವಾಗಿ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಜೊತೆಗೆ ನಗರದ ವಿವಿಧ ತರಬೇತಿ ಕೇಂದ್ರಗಳಲ್ಲಿ (ಕೋಚಿಂಗ್‌ ಸೆಂಟರ್‌) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದರು.

ವಿಜಯಪುರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಹಾಗೂ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌ ಸಂಸ್ಥೆ ಸಹಭಾಗಿತ್ವದಲ್ಲಿ ಗುರುವಾರ ಉದ್ಯೋಗಾಕಾಂಕ್ಷಿಗಳಿಗಾಗಿ ಏರ್ಪಡಿಸಿದ್ದ ‘ಗೈಡಿಂಗ್‌ ಫೋರ್ಸ್‌’ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿವಿಧ ಕಾಲೇಜುಗಳ  ವಿದ್ಯಾರ್ಥಿನಿಯರು –ಪ್ರಜಾವಾಣಿ ಚಿತ್ರ
‘ದೈಹಿಕ ಮಾನಸಿಕ ಆರೋಗ್ಯಕ್ಕೆ ಇರಲಿ ಆದ್ಯತೆ’
‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡುವಾಗ ಕೇವಲ ಓದಿಗೆ ಆದ್ಯತೆ ನೀಡಿದರೆ ಸಾಲದು. ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಹಿತಮಿತವಾಗಿ ಊಟ ನಿದ್ರೆ ಮಾಡಬೇಕು. ಕನಿಷ್ಠ ಏಳು ತಾಸಾದರೂ ನಿದ್ರೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಆನಂದ್‌ ಸಲಹೆ ನೀಡಿದರು. ‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರ ಅಧ್ಯಯನ ಸಿದ್ಧತೆ ಇರಬೇಕು. ಪ್ರಪಂಚದಲ್ಲಿ ತಿಳಿದುಕೊಳ್ಳಲು ಬಳಷ್ಟು ವಿಷಯ ವಸ್ತುಗಳಿವೆ.  ಆ ಎಲ್ಲ ವಿಷಯದಲ್ಲಿ ತಜ್ಞರಾಗಲು ಸಾಧ್ಯವಿಲ್ಲ. ಆದರೆ ಆ ಎಲ್ಲ ವಿಷಯಗಳ ಬಗ್ಗೆ ಪ್ರಾಥಮಿಕ ಮಾಹಿತಿ ತಿಳಿದಿರಬೇಕು’ ಎಂದರು. ‘ವಿಶ್ಲೇಷಣಾತ್ಮಕ ಬರವಣಿಗೆ  ಕಲಿಯಬೇಕು ಬರವಣಿಗೆಯಲ್ಲಿ ಸ್ಪಷ್ಟತೆ ಇರಬೇಕು ತಿಳಿದುರುವುದನ್ನೆಲ್ಲ ಬರೆಯುವುದಲ್ಲ ಪ್ರಶ್ನೆಗೆ ಪೂರಕವಾಗಿ ಉತ್ತರವಿರಬೇಕು’‍ ಎಂದರು. ‘ಪ್ರತಿ ವಿಷಯಕ್ಕೂ ಹತ್ತಾರು ಪುಸ್ತಕಗಳು ಇರುತ್ತವೆ. ಆ ಎಲ್ಲ ಪುಸ್ತಕಗಳನ್ನು ಓದುವುದಲ್ಲ ಒಂದು ಪುಸ್ತಕವನ್ನು ಆಳವಾಗಿ ಓದಬೇಕು ಓದಿದ ವಿಷಯವನ್ನು ವಿಶ್ಲೇಷಣೆ ಮಾಡುವ ಸಾಮಾರ್ಥ್ಯ ಬೆಳೆಸಿಕೊಳ್ಳಬೇಕು. ನಿಶ್ಚಿತ ಗುರಿ ತಲುಪುವಲ್ಲಿ ಒಂದು ವೇಳೆ ವಿಫಲವಾದರೆ ಯಾವುದೇ ಕಾರಣಕ್ಕೂ ಧೈರ್ಯಗುಂದಬಾರದು’ ಎಂದರು.
ಡಾ.ಕೆ.ಆನಂದ್‌
- ‘ಆಯ್ಕೆಗಿಂತ ನಿರಾಕರಣೆ ಹೆಚ್ಚು’
‘ಸ್ಪರ್ಧಾತ್ಮಕ ಪರೀಕ್ಷೆಗಳು ಎಂದರೆ ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕಿಂತ ನಿರಾಕರಣೆ ಮಾಡುವ ಪರೀಕ್ಷೆ ಎಂದರ್ಥ. ಅಂದರೆ ಒಂದು ಸಾವಿರ ಆಕಾಂಕ್ಷಿಗಳಲ್ಲಿ 999 ಜನರನ್ನು ಕೈಬಿಟ್ಟು ಒಬ್ಬರನ್ನು ಆಯ್ಕೆ ಮಾಡುವುದಾಗಿದೆ. ಉಳಿವಿಗಾಗಿ ನಡೆಯುವ ಹೋರಾಟ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ವಿಶ್ಲೇಷಿಸಿದರು. ‘ಸ್ಪರ್ಧಾತ್ಮಕ ಪರೀಕ್ಷೆ ಎಂಬುದು ಎಸ್‌ಎಸ್‌ಎಲ್‌ಸಿ ಪಿಯುಸಿ ಪದವಿ ಪರೀಕ್ಷೆಯಂತಲ್ಲ. ಪರೀಕ್ಷಾರ್ಥಿಯ ಶ್ರಮವು ಮೊಲದ ಓಟದಂತಿರದೇ ಆಮೆಯ ನಿರಂತರತೆಯಂತಿರಬೇಕು’ ಎಂದರು. ‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಿಜೆಕ್ಟ್‌ ಆದವರೂ ಜೀವನದಲ್ಲಿ ಯಶಸ್ವಿಯಾಗುವ ಅವಕಾಶ ಇರುತ್ತದೆ. ಆ ವೇಳೆ ಸಿಗುವ ಜೀವನಾನುಭವ ಮುಖ್ಯವಾಗಿರುತ್ತದೆ. ವ್ಯಕ್ತಿತ್ವ ವಿಕಸನವಾಗುತ್ತದೆ. ಸೋಲಿನಲ್ಲೂ ಅನುಭವದ ‍ಪಾಠಗಳಿರುತ್ತವೆ. ಆ ಪಾಠಗಳು ಜೀವನವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತವೆ’ ಎಂದು ಹೇಳಿದರು. ‌‘ಸರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡಾಗ ಕುಟುಂಬ ವರ್ಗದಿಂದ ಸಾಕಷ್ಟು ನಿರೀಕ್ಷೆ ಸಮಾಜದಿಂದ ಟೀಕೆಗಳು ತಿರಸ್ಕಾರಗಳು ಎದುರಾಗುತ್ತವೆ. ಅವುಗಳನ್ನು ಸಮವಾಗಿ ನಿರ್ವಹಿಸಬೇಕು. ವಿಫಲತೆಗಳು ಕಲಿಸುವಷ್ಟು ಪಾಠ ಯಶಸ್ಸು ಕಲಿಸುವುದಿಲ್ಲ. ಒಂದು ವೇಳೆ ವಿಫಲವಾದರೆ ಅದನ್ನು ಆಸ್ವಾಧಿಸಬೇಕು’ ಎಂದರು. 
ಲಕ್ಷ್ಮಣ ನಿಂಬರಗಿ
ಕೆಪಿಎಸ್‌ಸಿ ಕಾರ್ಯ ಪಾರದರ್ಶಕವಿರಲಿ’
- ‘‘ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಭ್ರಷ್ಟಾಚಾರದ ಕೂಪವಾಗಿದೆ. ಈಗಿರುವ ಕೆಪಿಎಸ್‌ಸಿ ವ್ಯವಸ್ಥೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಿ ಹೊಸ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ’ ಎಂದು ಬೆಂಗಳೂರಿನ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥಾಪಕ ಮತ್ತು ನಿರ್ದೇಶಕರಾದ ವಿನಯ್‌ ಕುಮಾರ್‌ ಜಿ.ಬಿ.ಹೇಳಿದರು. ‘ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಯಾರೇ ಮುಖ್ಯಮಂತ್ರಿಯಾದರೂ ಕೆ‍ಪಿಎಸ್‌ಸಿ ಸುಧಾರಣೆಗೆ ಆದ್ಯತೆ ನೀಡುತ್ತಿಲ್ಲ. ಅವರಿಗೆ ವ್ಯವಸ್ಥೆ ಬದಲಾವಣೆಯಾಗುವ ಆಶಯವೂ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಯುಪಿಎಸ್‌ಸಿ ಅತ್ಯಂತ ಪಾರದರ್ಶಕವಾಗಿ ಭ್ರಷ್ಟಾಚಾರ ರಹಿತವಾಗಿ ಯಾರ ಮುಲಾಜಿಗೂ ಪ್ರಭಾವಕ್ಕೂ ಒಳಗಾಗದೇ ಕಾರ್ಯನಿರ್ವಹಿಸುತ್ತಿದೆ. ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವಹಿಸಬೇಕಿದೆ’ ಎಂದರು. ‘ಇನ್‌ಸೈಟ್ಸ್ ಐಎಎಸ್‌ ಸಂಸ್ಥೆಯು ಪ್ರತಿಭಾವಂತರಿಗೆ ಬಡವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ಮಾರ್ಗದರ್ಶನ ನೀಡುತ್ತಿದೆ. ಅಗತ್ಯ ಇರುವವರು ಸಂಸ್ಥೆಗೆ ಭೇಟಿ ನೀಡಿ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು. ‘ಪ್ರತಿವರ್ಷ 150 ಜನರ ಕನ್ನಡಿಗರು ಐಎಎಸ್‌ ಐಪಿಎಸ್‌ಗೆ ಆಯ್ಕೆಯಾಗಬೇಕು ಕನ್ನಡಿಗರು ಟಾಪರ್‌ ಆಗಬೇಕು ಎಂಬುದು ನನ್ನ ಕನಸಾಗಿದೆ. ದೆಹಲಿಮಟ್ಟದಲ್ಲಿ ಕರ್ನಾಟಕದ ಪರವಾಗಿ ಲಾಭಿ ನಡೆಸುವ ಐಎಎಸ್‌ ಐಪಿಎಸ್‌ ಕನ್ನಡಿಗರ ಸಂಖ್ಯೆ ಕ್ಷೀಣವಾಗಿದೆ. ಪರಿಣಾಮ ರಾಜ್ಯಕ್ಕೆ ಕೇಂದ್ರದ ಅನುದಾನ ಯೋಜನೆ ತರುವಲ್ಲಿ ಹಿನ್ನಡೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ವಿನಯ್‌ ಕುಮಾರ್‌ ಜಿ.ಬಿ.

ಆಕಾಂಕ್ಷಿಗಳ ಅಭಿಪ್ರಾಯ

ಸಿದ್ಧತೆ ಬಗ್ಗೆ ಸಮಗ್ರ ಮಾಹಿತಿ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದು ಗೊತ್ತಾಯಿತು. ಐಎಎಸ್ ಮಾಡುವ ಕನಸು ನನಸು ಮಾಡುವ ಉತ್ಸಾಹ ಇನ್ನಷ್ಟು ಇಮ್ಮಡಿಯಾಗಿದೆ. -ವಂದನಾ ಎಂ., ವಿಜಯಪುರ
ಮತ್ತೊಮ್ಮೆ ಪ್ರಯತ್ನಿಸುವ ಸ್ಫೂರ್ತಿ
ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರ ಸ್ಫೂರ್ತಿದಾಯಕ ಮಾತುಗಳಿಂದ ನಾನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಖಂಡಿತವಾಗಿಯೂ ಯಶಸ್ಸು ಗಳಿಸುವೆ ಎಂಬ ಧೃಡಸಂಕಲ್ಪ ಮಾಡಿರುವೆ. ಪುನಃ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಮೂಡಿದೆ. - ಐಶ್ವರ್ಯ ಅಹಿರವಾಡಗಿ, ವಿಜಯಪುರ
ಸ್ಫೂರ್ತಿದಾಯಕ ಭಾಷಣ
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸ್ಫರ್ಧಾತ್ಮಕ ತರಬೇತಿಯಲ್ಲಿ ನುರಿತ ಶಿಕ್ಷಣ ತಜ್ಞರ ಭಾಷಣಗಳು ನನ್ನಲ್ಲಿ ಸಾಧನೆ ಮಾಡುವ ಸ್ಫೂರ್ತಿ ಮೂಡಿಸಿವೆ.  -ಸೌಜನ್ಯ ಮುಳಸಾವಳಗಿ, ವಿಜಯಪುರ
ಅನುಭವದ ಬುತ್ತಿ
ಅಧಿಕಾರಿಗಳು ತಮ್ಮ ಸಾಧನೆಯ ಹಾದಿಯ ಅನುಭವದ ಬುತ್ತಿಯನ್ನು ನಮಗೆ ಉಣಬಡಿಸಿದ್ದಾರೆ. ಅವರು ಪರೀಕ್ಷೆಗೆ ಹೇಗೆ ತಯಾರಿ ಮಾಡಿದರು ಎಂಬ ಪರೀಕ್ಷೆಯ ಸಿದ್ಧತೆಯ ಪಥವನ್ನು ವಿವರಿಸಿದ್ದು ನಮಗೆ ಅನುಕೂಲವಾಯಿತು.  - ವರ್ಷಾ ಉಭಾಳೆ, ವಿಜಯಪುರ 
ಜ್ಞಾನದ ಕಣಜ
ಇಂದಿನ ಗೈಡಿಂಗ್ ಫೋರ್ಸ್ ಕಾರ್ಯಕ್ರಮ ಸಮಗ್ರ ಮಾಹಿತಿ ಹಾಗೂ ಜ್ಞಾನದ ಕಣಜದಂತಿತ್ತು. ಅಧಿಕಾರಿಗಳ ಅನುಭವದ ಮಾತು ನಮಗೆ  ಸ್ಫೂರ್ತಿ  ನೀಡಿದೆ. ಹೆಚ್ಚಿನ ಮಾಹಿತಿ ಸಿಕ್ಕಿದೆ. -ಐಶ್ವರ್ಯ ದೊಡ್ಡಮನಿ, ವಿಜಯಪುರ
ಸ್ಫೂರ್ತಿಯ ಪಾಠ
ಜೀವನದಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ಅವಶ್ಯ. ಸಾಧನೆ ಮಾಡುವ ನಿಟ್ಟಿನಲ್ಲಿ ಇಂದು ಅಧಿಕಾರಿಗಳು ನಮಗೆ ನೀಡಿದ ಪ್ರೇರಣೆ ಒಂದು ರೀತಿ ಸ್ಪೂರ್ತಿಯ ಪಾಠವಾಗಿದೆ. -ಸೌಂದರ್ಯ ಗಾಣಿಗೇರ, ವಿಜಯಪುರ 
ಆತ್ಮಸ್ಥೈರ್ಯ ವೃದ್ಧಿ
ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಧಿಕಾರಿಗಳು ನೀಡಿದ ಟಿಪ್ಸ್ ನನಗೆ ಮಹತ್ವವಾಯಿತು. ಯಾವ ರೀತಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಸಿಕ್ಕಿತು. -ಕೀರ್ತಿ ಬಿರಾದಾರ, ವಿಜಯಪುರ
ಕನಸು ಚಿಗುರೊಡೆಯಿತು 
  ಅಧಿಕಾರಿಗಳು ತಿಳಿಪಡಿಸಿದ ಮಹೋನ್ನತ ವಿಚಾರಗಳಿಂದ ನಾನು ಸಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಅಧಿಕಾರಿಯಾಗುವ ಕನಸು ಚಿಗುರೊಡೆದಿದೆ.   - ದೇವರಾಜ ಕೂಡ್ಲಗಿ , ವಿಜಯಪುರ 
ಗುರಿ ದೊಡ್ಡದಾಗಿದೆ...
ಪಿಎಸ್‌ಐ ಆಗುವ ಗುರಿ ಹೊಂದಿದ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧಿಕಾರಿಗಳ ಮಾತಿನಿಂದ ಪ್ರೇರಣೆ ಪಡೆದು ನನ್ನ ಗುರಿ ವಿಸ್ತರಿಸಿಕೊಂಡಿದ್ದೇನೆ. ನಿಜಕ್ಕೂ ಉಪಯುಕ್ತ ಕಾರ್ಯಕ್ರಮ. - ಸೋಮರಾಯ ಸಾಲಿಮನಿ, ವಿಜಯಪುರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.