ಮಹಿಳಾ ಆಯೋಗ
ವಿಜಯಪುರ: ‘ಮಗಳ ಮದುವೆಗೆ ₹3 ಲಕ್ಷ ಸಾಲ ಮಾಡಿದ್ದೆ. ತಾಳಿ ಮಾರಿ ಒಂದಷ್ಟು ಸಾಲ ತೀರಿಸಿರುವೆ. ಇನ್ನುಳಿದ ಸಾಲ ತೀರಿಸಲು ಸಮಯ ಕೇಳಿದರೂ ಬಿಡುತ್ತಿಲ್ಲ. ಫೈನಾನ್ಸ್ ಕಂಪನಿಯ ಸಿಬ್ಬಂದಿ ಮನೆಗೆ ಬಂದು ಕೂರುತ್ತಾರೆ. ಬೇರೆ ಬೇರೆ ಸ್ವರೂಪದಲ್ಲಿ ಕಿರುಕುಳ ನೀಡುತ್ತಾರೆ. ನನಗೆ ದಿಕ್ಕೇ ತೋಚುತ್ತಿಲ್ಲ’ ಎಂದು ಸಿಂದಗಿ ತಾಲ್ಲೂಕಿನ ಮಾಡಬಾಳ ಗ್ರಾಮದ ಮಹಿಳೆ ನಿಂಬೆವ್ವ ಅವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಎದುರು ನೋವು ತೋಡಿಕೊಂಡರು.
ಫೈನಾನ್ಸ್ನವರ ಕಂಪನಿಗಳ ಕಿರುಕುಳ ತಾಳಲಾರದೇ ಮನೆ ಬಿಟ್ಟು 15 ದಿನಗಳಿಂದ ಅಡವಿ ಸೇರಿದ್ದೇನೆ. ಈಗ ಸಾಯುವುದಷ್ಟೇ ಬಾಕಿ ಇದೆ. ನನಗೆ ರಕ್ಷಣೆ ನೀಡಿ’ ಎಂದು ಅವರು ಕೋರಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಹಿಳೆಯ ಆಹವಾಲು ಆಲಿಸಿ, ಧೈರ್ಯ ತುಂಬಿ ಮಾತನಾಡಿದ ನಾಗಲಕ್ಷ್ಮಿ ಚೌಧರಿ, ‘ಯಾವುದೇ ಕಾರಣಕ್ಕೂ ಫೈನಾನ್ಸ್ ಕಂಪನಿಯವರು ಮಹಿಳೆಯರಿಗೆ ಕಿರುಕುಳ ನೀಡಬಾರದು. ಸಾಲ ಮರು ಪಾವತಿಸಲು ಸಮಯ ನೀಡಬೇಕು’ ಎಂದು ಸೂಚಿಸಿದರು.
ಕಿರುಕುಳಕ್ಕೆ ಒಳಗಾದವರ ಅಹವಾಲು ಆಲಿಸಿ, ಅವರ ಸಮಸ್ಯೆ ಇತ್ಯರ್ಥ ಪಡಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ್ ಒಳಗೊಂಡ ಕಣ್ಗಾವಲು ಸಮಿತಿ ರಚಿಸುವಂತೆ ಚೌಧರಿ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.