
ವಿಜಯಪುರ: ‘ಗ್ರಾಮೀಣರು ಧರ್ಮವಂತರು. ಜಾನಪದ ಶೈಲಿಯ ಜೀವನಕ್ಕೆ ಪ್ರಾಧ್ಯಾನತೆ ನೀಡಿದವರು. ಭಕ್ತಿ ಮತ್ತು ಶ್ರದ್ಧೆಯಿಂದ ಜೀವನದ ಮೌಲ್ಯಗಳನ್ನು ಕಾಪಾಡಿದ ಕೀರ್ತಿ ಗ್ರಾಮೀಣರಿಗೆ ಸಲ್ಲುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಕಾಖಂಡಕಿ ಗ್ರಾಮದಲ್ಲಿ ಬುಧವಾರ ಶಿವನ ದೇವಾಲಯದ ಕಳಸಾರೋಹಣ ಹಾಗೂ ನೂತನ ತೇರ ಉದ್ಘಾಟನೆ ಅಂಗವಾಗಿ ನಡೆದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
‘ಸೌಹಾರ್ದ ಸಂಬಂಧಗಳನ್ನು ಬೆಸೆಯುವ ಮಹೋನ್ನತ ಕಾರ್ಯ ಕಾಖಂಡಕಿ ಗ್ರಾಮದಲ್ಲಿ ಜರುಗುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಮಹಿಪತಿ ದಾಸರು ನೆಲೆಸಿರುವ ಕಾಖಂಡಕಿ ಐತಿಹಾಸಿಕವಾಗಿ ಪ್ರಸಿದ್ಧ ಹೊಂದಿದ ಗ್ರಾಮವಾಗಿದೆ’ ಎಂದರು.
‘ಮನುಷ್ಯನಲ್ಲಿ ಹುದುಗಿಕೊಂಡಿರುವ ಕಾಮ, ಮೋಹ, ಮದ, ಮತ್ಸರ ಮುಂತಾದವುಗಳೆ ನಮ್ಮಲ್ಲಿನ ರಾಕ್ಷಸರು. ಶರಣ ಸಂಸ್ಕೃತಿಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧರ್ಮದಿಂದಲೆ ಮಾನವ ಕುಲಕ್ಕೆ ಶಾಂತಿ’ ಎಂದರು.
ಕಾಖಂಡಕಿ ಗ್ರಾಮದ ಹಿರಿಯರಾದ ಅಲಿಸಾಬ ಖಡಕೆ ಮಾತನಾಡಿ, ‘ಶಿವನ ದೇವಾಲಯ ಪುನರುಜ್ಜೀವನ ಗೊಳಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರ. ಗ್ರಾಮದ ಶಿವನ ದೇವಾಲಯಕ್ಕೆ ಹೊಸ ತೇರು ತಂದಿರುವುದು ಗ್ರಾಮದ ಜನರಿಗೆ ಸಂತೋಷವನ್ನುಂಟು ಮಾಡಿದೆ. ಧರ್ಮಣ್ಣ ಕುಂಬಾರ ಅವರು ತೇರನ್ನು ದೇಣಿಗೆ ನೀಡಿದ್ದು, ಶ್ಲಾಘನೀಯ ಕಾರ್ಯ’ ಎಂದರು.
ರಾಜುಕುಮಾರ ಚನ್ನೂರ, ರಾಜುಕುಮಾರ ಉಪ್ಪಾರ, ಬಸವಂತಪ್ಪ ಮಾಳಿ ಸಂಗೀತ ಸೇವೆ ಸಲ್ಲಿಸಿದರು. ಅಶೋಕ ಶೇಗುಣಸಿ, ಪ್ರಕಾಶ ಬಡಿಗೇರ, ಶಿವಕುಮಾರ ಶೇಗುಣಸಿ, ಈರಣ್ಣ ಮಾಡಲಗಿ, ವಿಜಯಕುಮಾರ ತೇಲಿ, ಲಕ್ಷ್ಮಣ ಸಂಗಾತಿ, ಕಿರಣ ಬಿದರಿ, ಕಮಲವ್ವ ಸಿದರಡ್ಡಿ, ಯಾಶೀನ್ ಇನಾಮದಾರ, ಅಶೋಕ ಕುಂಬಾರ, ಮಡ್ಡೆಸಾಬ ಬಾಗವಾನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.