ADVERTISEMENT

ಭಾರ ಮಳೆ; 57 ಮನೆಗಳಿಗೆ ಹಾನಿ, 2 ಸಾವಿರ ಹೆಕ್ಟೇರ್‌ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 15:51 IST
Last Updated 24 ಸೆಪ್ಟೆಂಬರ್ 2024, 15:51 IST
ವಿಜಯಪುರ ನಗರದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜಲಾವೃತವಾಗಿರುವ ರಸ್ತೆಯಲ್ಲೇ ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ತೆರಳಿದರು– ಚಿತ್ರ: ರಾಜು ಢವಳಗಿ
ವಿಜಯಪುರ ನಗರದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜಲಾವೃತವಾಗಿರುವ ರಸ್ತೆಯಲ್ಲೇ ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ತೆರಳಿದರು– ಚಿತ್ರ: ರಾಜು ಢವಳಗಿ   

ವಿಜಯಪುರ: ವಿಜಯಪುರ ನಗರ ಮತ್ತು ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ನಿರಂತರ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಸಂಗಮನಾಥ ದೇವಾಲಯದ ಗರ್ಭಗುಡಿಯ ಒಳಗೆ ನೀರು ನುಗ್ಗಿದ್ದರಿಂದ ಪೂಜಾ ಕಾರ್ಯಗಳು ಸ್ಥಗಿತಗೊಂಡಿವೆ.  

ಜಿಲ್ಲೆಯಲ್ಲಿ 57 ಮನೆಗಳು ಭಾಗಶಃ ಹಾನಿಗೀಡಾಗಿವೆ. ಅಂದಾಜು 2,000 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್‌ ತಿಳಿಸಿದ್ದಾರೆ.  

ವಿಜಯಪುರದಲ್ಲಿ 15.8 ಸೆಂ.ಮೀ ಮಳೆ:

ADVERTISEMENT

ವಿಜಯಪುರ ನಗರದಲ್ಲಿ 15.8 ಸೆಂ.ಮೀ. ಮಳೆಯಾಗಿದೆ. ವಿಜಯಪುರ ತಾಲ್ಲೂಕಿನ ತೊರವಿ 10.2, ತಿಕೋಟಾ ತಾಲ್ಲೂಕಿನ ಕೊಟ್ಯಾಳ  13.9, ತಾಜಾಪುರ 11.1, ಸಿದ್ದಾಪುರ(ಕೆ) 9.3, ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ 11.2, ಇಟಗಿ 10.1, ದಿಂಡವಾರ 10.5, ಮುದ್ದೇಬಿಹಾಳ ತಾಲ್ಲೂಕಿನ ಕವಲಗಿಯಲ್ಲಿ 9.1 ಸೆಂ.ಮೀ. ಮಳೆಯಾಗಿರುವುದಾಗಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಜಮಖಂಡಿ(ಬಾಗಲಕೋಟೆ ಜಿಲ್ಲೆ): ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ನೂರಾರು ಮನೆಗಳಿಗೆ ನೀರು ನುಗ್ಗಿ, ತಾಲ್ಲೂಕಿನಲ್ಲಿ 11 ಮನೆಗಳು ಬಿದ್ದಿವೆ.

ನಗರದ ನೆಲಮಹಡಿಯಲ್ಲಿರುವ ಸರ್ವೋದಯ ಕಿವುಡ ಮತ್ತು ಮೂಕ ಮಕ್ಕಳ ವಸತಿ ನಿಲಯ ಹಾಗೂ ಹಳೆ ಕೆಎಲ್ಇ ಆಸ್ಪತ್ರೆಯ ಕೆಳಗಿನ ನೆಲಮಹಡಿಯಲ್ಲಿನ ಬಾಲಕಿಯರ ವಸತಿ ನಿಲಯಕ್ಕೆ ನೀರು ನುಗ್ಗಿ ವಿದ್ಯಾರ್ಥಿಗಳು ಪರದಾಡಿದರು. ಪಠ್ಯಪುಸ್ತಕಗಳು, ಸಾಮಗ್ರಿಗಳು ನೀರಿನಲ್ಲಿ ತೊಯ್ದುಹೋದವು.

ರಬಕವಿ ಬನಹಟ್ಟಿಯಲ್ಲಿ ಸೋಮವಾರ ರಾತ್ರಿ 5.6.ಸೆಂ.ಮೀ ಮಳೆ ದಾಖಲಾಗಿದೆ. ನಗರದ ಬಹಳಷ್ಟು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿತ್ತು.

ಭಟ್ಕಳ ವರದಿ (ಉತ್ತರ ಕನ್ನಡ): ತಾಲ್ಲೂಕಿನಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ನಸುಕಿನವರೆಗೆ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ್ತಗೊಂಡು ಹಲವು ಮನೆಗಳಿಗೆ ನೀರು ನುಗ್ಗಿದೆ. ಕೆಲವೆಡೆ ಮನೆ ಕುಸಿದಿವೆ. ತಾಲ್ಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ತಾಲ್ಲೂಕು ಆಡಳಿತ ಮುಂಜಾಗ್ರತಾ ಕ್ರಮ ವಹಿಸಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ಮಳೆಯಿಂದ ತುಂಬಿ ಸೇತುವೆ ಮೇಲೆ ನೀರು ಹರಿಯಿತು– ಚಿತ್ರ: ಜಿ.ಎಸ್‌. ಪರಮೇಶ್ವರ್‌
ಜಮಖಂಡಿಯ ಹಳೆ ಕೆಎಲ್‌ಇ ಆಸ್ಪತ್ರೆಯ ಕೆಳಗಿನ ನೆಲಮಹಡಿಯಲ್ಲಿನ ಬಾಲಕಿಯರ ವಸತಿ ನಿಲಯದಲ್ಲಿ ನೀರು ನಿಂತಿದೆ 
ಜಮಖಂಡಿಯ ಸರ್ವೋದಯ ಕಿವುಡ ಮತ್ತು ಮೂಕ ಮಕ್ಕಳ ವಸತಿ ನಿಲಯದಲ್ಲಿ ನೀರು ನುಗ್ಗಿ ವಿದ್ಯಾರ್ಥಿಗಳು ಪರದಾಡಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.