ADVERTISEMENT

ವಿಜಯಪುರ: ಹಿಟ್ಟಿನಹಳ್ಳಿ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ತೆರೆ

ಐದು ಪ್ರಮುಖ ನಿರ್ಣಯ ಅಂಗೀಕಾರ: ಹಾಸಿಂಪೀರ ವಾಲಿಕಾರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:13 IST
Last Updated 22 ಜನವರಿ 2026, 2:13 IST
ವಿಜಯಪುರ ತಾಲ್ಲೂಕಿನ ಹಿಟ್ಟಿನಹಳ್ಳಿಯಲ್ಲಿ ಬುಧವಾರ ನಡೆದ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಬುತ್ತಿ ಜಾತ್ರೆ ಮೆರವಣಿಗೆ ಗಮನ ಸೆಳೆಯಿತು 
ವಿಜಯಪುರ ತಾಲ್ಲೂಕಿನ ಹಿಟ್ಟಿನಹಳ್ಳಿಯಲ್ಲಿ ಬುಧವಾರ ನಡೆದ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಬುತ್ತಿ ಜಾತ್ರೆ ಮೆರವಣಿಗೆ ಗಮನ ಸೆಳೆಯಿತು    

ವಿಜಯಪುರ: ಹಿಟ್ಟಿನಹಳ್ಳಿಯಲ್ಲಿ ಎರಡು ದಿನಗಳ ಕಾಲ ಗ್ರಾಮೀಣ ಸೊಗಡಿನೊಂದಿಗೆ ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ನಡೆದ ವಿಜಯಪುರ ತಾಲ್ಲೂಕು ಎಂಟನೇ ಸಾಹಿತ್ಯ ಸಮ್ಮೇಳನ ಬುಧವಾರ ಸಂಜೆ ತೆರೆಕಂಡಿತು.

ವಿದ್ಯಾರ್ಥಿಗಳ ಕೊರತೆ ನೆಪವೊಡ್ಡಿ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಸೇರಿದಂತೆ ಒಟ್ಟು ಐದು ಪ್ರಮುಖ ನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ತಿಳಿಸಿದರು.

ವಿಜಯಪುರ ಜಿಲ್ಲೆಯ ವಿವಿಧೆಡೆ ಇದುವರೆಗೆ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನ  ಸ್ಥಳಗಳಲ್ಲಿ ಜಿಲ್ಲಾಡಳಿತದಿಂದ ಭುವನೇಶ್ವರಿ ದೇವಿ ಮೂರ್ತಿ ಸ್ಥಾಪಿಸಬೇಕು, ವಿಜಯಪುರ ಜಿಲ್ಲೆಗೆ ಹೊಸದಾಗಿ ಸಾಮಾನ್ಯ (ಕೋ ಎಜುಕೇಶನ್‌) ವಿಶ್ವವಿದ್ಯಾಲಯ ಸ್ಥಾಪಿಸಬೇಕು, ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಬೇಕು, ಸರ್ಕಾರಿ ಕನ್ನಡ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿ, ಸರ್ವತೋಮುಖ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯಗಳನ್ನು ಕಸಾಪ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಬಿ.ಎಂ. ಆಜೂರ ಸೂಚಿಸಿದರು. ವಿಜಯಪುರ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಕುಲಕರ್ಣಿ ಅನುಮೋದಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಸೋಮಲಿಂಗ ಗೆಣ್ಣೂರ ಇದ್ದರು.

ADVERTISEMENT

ಸರ್ವಕಾಲಿಕ ಸತ್ಯ: ಶರಣ ಸಾಹಿತ್ಯ ಗೋಷ್ಠಿಯಲ್ಲಿ ಮಾತನಾಡಿದ ಬಸವನ ಬಾಗೇವಾಡಿ ವಿರಕ್ತಮಠ ಸಿದ್ದಲಿಂಗ ಸ್ವಾಮೀಜಿ, ಶರಣರ ವಿಚಾರಗಳು ಸರ್ವಕಾಲಿಕ ಸತ್ಯ. ನಾವು ವಚನಗಳನ್ನು ಕೇಳುವುದಷ್ಟೇ ಅಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

‘ಶಿವ ಬೆಳಗು’ ಹಾಗೂ ‘ಸಿಂಧು’ ಗ್ರಂಥಗಳು ಬಿಡುಗಡೆ ಮಾತನಾಡಿದ ಡಾ.ಮಧುಮಾಲಾ ಲಿಗಾಡೆ ಮಾತನಾಡಿ, ಶರಣರು ನುಡಿದಂತೆ ನಡೆದರು ಎಂದು ಹೇಳಿದರು.

ಉಪನ್ಯಾಸಕಿ ಶೋಭಾ ಮೇಡೆದಾರ ಮಾತನಾಡಿ, ಶರಣ ಸಾಹಿತ್ಯಕ್ಕೆ ಶಿವಶರಣೆಯರ ಕೊಡುಗೆ ಅಪಾರ. ಶರಣೆಯರು ಕುಟುಂಬ ಮತ್ತು ಕಾಯಕ ಹಾಗೂ ಸಮಾಜ ಸೇವೆ ಎಲ್ಲವನ್ನು ಸರಿದೂಗಿಸಿಕೊಂಡು ಹೋದವರು ಎಂದು ಹೇಳಿದರು.

ಸಮ್ಮೇಳನದಲ್ಲೇ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯಲ್ಲಿ ಮಾತನಾಡಿದ ಸಾಹಿತಿ ಡಾ. ಸಂಗಮೇಶ ಮೇತ್ರಿ, 12ನೇ ಶತಮಾನದ ಶ್ರೇಷ್ಠ ಕಾಯಕ ಶರಣರಲ್ಲಿ ಒಬ್ಬರಾದ ನೇರ, ನಿಷ್ಠುರ ನಡೆಯ ಪ್ರಮುಖ ಕಾಯಕ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಒಬ್ಬರು ಎಂದು ಅಭಿಪ್ರಾಯಪಟ್ಟರು.

ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಮಾಧವ ಎಚ್. ಗುಡಿ,  ಕವಿಗಳು ಸಮಾಜವನ್ನು ತಿದ್ದುವ ಕಣ್ಮಣಿಗಳಿದ್ದಂತೆ ಎಂದು ಹೇಳಿದರು.

ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ, ಸಮ್ಮೇಳನದ ಸರ್ವಾಧ್ಯಕ್ಷ ಸೋಮಲಿಂಗ ಗೆಣ್ಣೂರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಹೊನವಾಡದ ಬಾಬುರಾವ ಮಹಾರಾಜರು, ರಾಜಶ್ರೀ ಮೋಪಗಾರ, ರವಿ ಕಿತ್ತೂರ, ಕಮಲಾ ಮುರಾಳ, ಮಡಿವಾಳಮ್ಮ ನಾಡಗೌಡ, ಅಂಬಿಕಾ ಕರಕಪ್ಪಗೋಳ, ಶಾಂತಲಾ ಪಾಟೀಲ, ಭೌರಮ್ಮ ಪತಂಗೆ, ಭಾಗ್ಯಜ್ಯೋತಿ ಭಗವಂತಗೌಡರ, ಲತಾ.ಕೆ.ಪಿ. ಸಾಹುಕಾರ, ಅಭಿಷೇಕ ಚಕ್ರವರ್ತಿ, ಜಗದೀಶ ಬೋಳಸೂರ, ಸಂಗಮೇಶ ಕವಡಿಮಟ್ಟಿ ಇದ್ದರು.

ವಿಜಯಪುರ ತಾಲ್ಲೂಕಿನ ಹಿಟ್ಟಿನಹಳ್ಳಿಯಲ್ಲಿ ಬುಧವಾರ ನಡೆದ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು 

ಗಮನಸೆಳೆದ ಬುತ್ತಿ ಜಾತ್ರೆ

ವಿಜಯಪುರ: ತಾಲ್ಲೂಕಿನ ಹಿಟ್ಟಿನಹಳ್ಳಿಯಲ್ಲಿ ಬುಧವಾರ ನಡೆದ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಮೂಹಿಕ ಬುತ್ತಿ ಜಾತ್ರೆ ಗಮನ ಸೆಳೆಯಿತು. ಹಿಟ್ಟಿನಹಳ್ಳಿ ಗ್ರಾಮದ ಮಹಿಳೆಯರು ಮನೆಯಿಂದಲೇ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ಬುಟ್ಟಿಯಲ್ಲಿ ಕಟ್ಟಿಕೊಂಡು ಮೆರವಣಿಗೆ ಮೂಲಕ ಬಂದು ಜಾತಿ ಮತ ಬೇಧ ಮರೆತು ಎಲ್ಲರೂ ಒಟ್ಟಾಗಿ ಸೇರಿ ಸಾಮೂಹಿಕ ಭೋಜನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.