ನಿಡಗುಂದಿ: ‘ನಾನು ಚುನಾವಣೆ ಸಂದರ್ಭದಲ್ಲಿ ಬಸವನಬಾಗೇವಾಡಿ ಕ್ಷೇತ್ರದ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಅದರ ಭಾಗವಾಗಿ ಇದೀಗ ನಿಡಗುಂದಿ ಪಟ್ಟಣದಲ್ಲಿ ಬಡವರ ಹಸಿವು ನೀಗುವ ಇಂದಿರಾ ಕ್ಯಾಂಟಿನ್ ಆರಂಭಿಸಲಾಗಿದೆ’ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್, ಸಿದ್ಧರ ಕಾಲೊನಿಯಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಲೋಕಾರ್ಪಣೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕೊಠಡಿಗಳ ದುರಸ್ತಿ ಕಾಮಗಾರಿ ಹಾಗೂ ಮುದ್ದೇಶ್ವರಪ್ರಭು ದೇವಸ್ಥಾನದ ಬಳಿ ರಂಗ ಮಂಟಪ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಇಂದಿರಾ ಕ್ಯಾಂಟಿನ್ ಪೌರಾಡಳಿತ ಇಲಾಖೆ, ಸ್ಥಳೀಯ ಆಡಳಿತದ ನೆರವಿನಿಂದ ₹1.45 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಹಸಿದವರ ಹೊಟ್ಟೆ ತುಂಬಲಿದೆ’ ಎಂದರು.
ಪಟ್ಟಣದಲ್ಲಿ ಶತಮಾನದ ಶಾಲೆ ಎಂದೇ ಕರೆಸಿಕೊಳ್ಳುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕಟ್ಟಡದ ದುರಸ್ತಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಶತಮಾನದ ಶಾಲೆಯ ಕಾಯಕಲ್ಪಕ್ಕೆ ಮುಂದಾಗಿರುವುದಾಗಿ ಹೇಳಿದರು.
ಮುದ್ದೇಶ್ವರಪ್ರಭು ದೇವಸ್ಥಾನದ ಬಳಿ ರಂಗ ಮಂಟಪ ನಿರ್ಮಾಣ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದು, ಈ ಭಾಗದ ಜನರ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲದೇ ಮದುವೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಮಾಡುವಲ್ಲಿ ಸಹಕಾರಿ ಆಗಲಿದೆ. ಈ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಇರುವ ಆರ್ಥಿಕ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು.
ಪಟ್ಟಣದ ಮುಖಂಡರಾದ ಸಿದ್ದಣ್ಣ ನಾಗಠಾಣ, ಸಂಗಮೇಶ ಕೆಂಭಾವಿ, ಶೇಖರ ದೊಡಮನಿ ಸೇರಿದಂತೆ ನಿಡಗುಂದಿ ಪಟ್ಟಣದ ಪಂಚಾಯಿತಿ ಸದಸ್ಯರು ಮತ್ತು ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.