ADVERTISEMENT

ಹೃದಯರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಳ

ವಿಶ್ವ ಹೃದಯ ದಿನಾಚರಣೆ; ಬೃಹತ್ ಜಾಥಾ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 16:01 IST
Last Updated 29 ಸೆಪ್ಟೆಂಬರ್ 2022, 16:01 IST
ವಿಜಯಪುರ ನಗರದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಸಿದ್ದೇಶ್ವರ ಗುಡಿಯಿಂದ ಆರಂಭವಾದ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಶ ಚವ್ಹಾಣ ಮತ್ತು ಅಶ್ವಿನಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಚಿಕ್ಕಮಕ್ಕಳ ತಜ್ಞ ಡಾ.ಎಲ್.ಎಚ್.ಬಿದರಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು 
ವಿಜಯಪುರ ನಗರದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಸಿದ್ದೇಶ್ವರ ಗುಡಿಯಿಂದ ಆರಂಭವಾದ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಶ ಚವ್ಹಾಣ ಮತ್ತು ಅಶ್ವಿನಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಚಿಕ್ಕಮಕ್ಕಳ ತಜ್ಞ ಡಾ.ಎಲ್.ಎಚ್.ಬಿದರಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು    

ವಿಜಯಪುರ: ದಶಕದ ಈಚೆಗಿನ ಅಂಕಿ-ಅಂಶಗಳನ್ನು ನೋಡಿದಾಗ ಹೃದಯರೋಗಕ್ಕೆ ತುತ್ತಾಗಿ ಮರಣ ಹೊಂದುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಇದಕ್ಕೆ ಸಂಯಮವಿಲ್ಲದ ಜೀವನ ಶೈಲಿ, ಆಹಾರ ಪದ್ಧತಿ, ಧೂಮಪಾನ, ಒತ್ತಡದ ಬದುಕು ಕಾರಣವಾಗಿವೆ ಎಂದುಹೃದಯರೋಗ ತಜ್ಞ ಡಾ.ಶಂಕರಗೌಡ ಪಾಟೀಲ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಶ್ವ ಹೃದಯ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ಹೃದಯದ ಕಾಳಜಿ ಮತ್ತು ಸಂರಕ್ಷಣೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವಾಯುಮಾಲಿನ್ಯದಿಂದ ಕೂಡ ಹೆಚ್ಚಿನ ಪ್ರಮಾಣದಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತಿದ್ದು, ಇದಕ್ಕೆ ಚಿಕ್ಕಮಕ್ಕಳು ಕೂಡಾ ಬಲಿಯಾಗುತ್ತಿದ್ದಾರೆ ಎಂದರು.

ADVERTISEMENT

ಈ ವರ್ಷದ ಘೋಷವಾಕ್ಯವಾದ ‘ಹೃದಯವನ್ನು ಸಂಪರ್ಕಿಸಲು ಹೃದಯವನ್ನು ಬಳಸಿ’ ಈಗಿನ ಪರಿಸ್ಥಿತಿಗೆ ಅತ್ಯಂತ ಸೂಕ್ತವಾಗಿದೆ, ಪ್ರತಿಯೊಬ್ಬರು ದಿನನಿತ್ಯ ಕನಿಷ್ಟ 30 ನಿಮಿಷಗಳ ಬಿರುಸು ನಡಿಗೆ, ವ್ಯಾಯಾಮ, ಹಣ್ಣು-ಹಂಪಲು-ತರಕಾರಿಗಳು-ಮೊಳಕೆ ಕಾಳುಗಳ ಸೇವನೆಯಿಂದ ಹೃದಯದ ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ ಎಂದರು.

ಚಿಕ್ಕಮಕ್ಕಳ ವೈದ್ಯ ಡಾ. ಎಚ್.ಎಚ್.ಬಿದರಿ, ದಿನವಿಡಿ ಚೈತನ್ಯದಿಂದಿರುವ ಮೂಲಕ ಹೃದಯರೋಗವನ್ನು ದೂರವಿಡಬಹುದು, ನಿಯಮಿತವಾಗಿ ಧ್ಯಾನ, ಲಘು ವ್ಯಾಯಾಮ, ಉತ್ತಮ ಆಹಾರಗಳ ಸೇವನೆ, ತಮ್ಮನ್ನು ತಾವು ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಖಂಡಿತಾ ಹೃದಯರೋಗ ಸಮೀಪ ಸುಳಿಯದು ಎಂದರು.

ಜಾಥಾಕ್ಕೆ ಚಾಲನೆ:ಸಿದ್ದೇಶ್ವರ ಗುಡಿಯಿಂದ ಆರಂಭವಾದ ಜಾಥಾಕ್ಕೆಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಶ ಚವ್ಹಾಣ ಮತ್ತು ಅಶ್ವಿನಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಚಿಕ್ಕಮಕ್ಕಳ ತಜ್ಞ ಡಾ.ಎಲ್.ಎಚ್.ಬಿದರಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕವಿತಾ ದೊಡ್ಡಮನಿ, ಮಕ್ಕಳ ಆರೋಗ್ಯ ಅಧಿಕಾರಿ ಡಾ. ಗುಂಡಬಾವಡಿ ಕೆ.ಡಿ., ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜೈಬುನ್ನಿಸಾ ಬೀಳಗಿ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ವರಿ ಗೊಲಗೇರಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ. ಪ್ರಿಯದರ್ಶಿನಿ ಪಾಟೀಲ, ಡಾ.ಸುರೇಶ ಪಾಶ್ಚಾಪೂರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪರಶುರಾಮ ಹಿಟ್ನಳ್ಳಿ, ಅಶ್ವಿನಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವಹಿತಾ ಖಾನಂ, ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಕಾರ್ಯದರ್ಶಿ ಮುರನಾಳ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಾರ್ವಜನಿಕರು, ವೈದ್ಯಕೀಯ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.

ಹೃದಯದ ಕಾಳಜಿ ಮಾಡಿಕೊಳ್ಳಲು ಬೇಕಾದ ಮಾಹಿತಿ ಇರುವ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು. ಉತ್ತಮ ಆಹಾರ ಪದ್ಧತಿ, ಮುನ್ನೆಚ್ಚರಿಕೆಗಳ ಕುರಿತು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಯಿತು.

****

40 ವರ್ಷ ಮೇಲ್ಪಟ್ಟ ಎಲ್ಲ ಪುರುಷರು-ಮಹಿಳೆಯರು ಪ್ರತಿ ವರ್ಷ ಹೃದಯದ ತಪಾಸಣೆ ಮಾಡಿಸಿಕೊಂಡು ಮುಂದೆ ಬರುವ ಅಪಾಯವನ್ನು ತಪ್ಪಿಸಬಹುದು.
–ಡಾ.ಶಂಕರಗೌಡ ಪಾಟೀಲ,ಹೃದಯರೋಗ ತಜ್ಞ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.