ADVERTISEMENT

ಚಬನೂರ: ಮೂಲ ಸೌಕರ್ಯಗಳ ಕೊರತೆ

ಅಮೋಘಸಿದ್ಧೇಶ್ವರ ತಾಣದಲ್ಲಿ ನೀರಿನ ಕೊರತೆ; ಚರಂಡಿ ವ್ಯವಸ್ಥೆ ಇಲ್ಲ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 3:09 IST
Last Updated 4 ಮಾರ್ಚ್ 2026, 3:09 IST
ತಾಳಿಕೋಟೆ ತಾಲ್ಲೂಕಿನ ಚಬನೂರ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ್ದರಿಂದ ಬಳಕೆ ನೀರು ರಸ್ತೆಯಲ್ಲಿ ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ
ತಾಳಿಕೋಟೆ ತಾಲ್ಲೂಕಿನ ಚಬನೂರ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ್ದರಿಂದ ಬಳಕೆ ನೀರು ರಸ್ತೆಯಲ್ಲಿ ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ   

ತಾಳಿಕೋಟೆ: ತಾಲ್ಲೂಕಿನ ಸುಕ್ಷೇತ್ರವೆನ್ನಿಸಿಕೊಂಡಿರುವ ಚಬನೂರ ಗ್ರಾಮ ಹಲವು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಐದಾರು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ನೀರಿನ ಸಮಸ್ಯೆಗೆ ಜನ ಹೈರಾನಾಗಿದ್ದಾರೆ. ಕೃಷಿಕರಿಂದ ತುಂಬಿರುವ ಗ್ರಾಮ ಜಾನುವಾರುಗಳಿಗೆ ಹಾಗೂ ನಿತ್ಯ ಬಳಕೆಗೆ ನೀರಿನ ಕೊರತೆಯಿಂದ ಪರದಾಡುತ್ತಿದ್ದಾರೆ.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆ, ಜಲಜೀವನ ಮಿಶನ್‌ ಅಡಿ ಗ್ರಾಮಕ್ಕೆ ಎಂಟು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತದೆ. ಅಗತ್ಯ ನೀರಿನ ಸಂಗ್ರಹದ ವ್ಯವಸ್ಥೆ ಹೆಚ್ಚಿನ ಬಡಕುಟುಂಬಗಳಲ್ಲಿ ಇಲ್ಲವಾದ್ದರಿಂದ ಗ್ರಾಮದ ಸೇದುಬಾಯಿಯೇ ಆಸರೆ. ಆದರೆ ಹೊಲಮನೆ ಕೆಲಸಗಳಿಗೆ ಹೋಗುವವರು, ಶಾಲೆಗೆ ಹೋಗುವ ಮಕ್ಕಳು, ಮನೆಯ ನೀರಿನ ತಾಪತ್ರಯಕ್ಕೆ ಕೆಲಸ ಬಿಟ್ಟು ಬಾವಿಗೆ ಮನೆಗೆ ಹಗ್ಗ, ಕೊಡ ಹಿಡಿದು ಓಡಬೇಕಾದ ಸ್ಥಿತಿಯಿದೆ.

ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲ. ಮನೆ ಬಳಕೆಯ ನೀರು ರಸ್ತೆ ತುಂಬೆಲ್ಲ ಹರಿಯುತ್ತದೆ. ಕೆಲವೆಡೆ ನಿಂತು ಸಂಚಾರಕ್ಕೂ ಅಡ್ಡಿಯಾಗುತ್ತದೆ. ನಿಂತ ಮಲೀನ ನೀರಿನ ಗಬ್ಬುವಾಸನೆ, ಸೊಳ್ಳೆ ಕಾಟವೂ ಹೆಚ್ಚುತ್ತಿದೆ. ಗ್ರಾಮದಲ್ಲಿ ಸಿಸಿ ರಸ್ತೆ ಅಪೂರ್ಣವಾಗಿದೆ.

ADVERTISEMENT

ಗ್ರಾಮವು ಅಮೊಘಸಿದ್ಧೇಶ್ವರ ದೇವಸ್ಥಾನದಿಂದ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಪ್ರತಿ ಅಮವಾಸ್ಯೆಗೆ ಐದಾರು ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ ಊರಿನ ಈ ಸ್ಥಿತಿ ಬಂದವರಿಗೆ ಸಂತಸದ ಬದಲು ಬೇಸರ ಹುಟ್ಟಿಸುತ್ತಿದೆ ಎನ್ನುವುದು ಗ್ರಾಮಸ್ಥರ ಅಳಲು.

‘ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕವಿದೆ. ಗ್ರಾಮದ ಜನಸಂಖ್ಯೆಗೆ ಇನ್ನೊಂದು ಶುದ್ಧ ಕುಡಿಯುವ ನೀರಿನ ಘಟಕ ಬೇಕು. ಗ್ರಾಮದಲ್ಲಿ ಜಿಲ್ಲೆಗೆ ಪ್ರಥಮವಾಗಿರುವ ಮಾದರಿ ಕನ್ನಡ ಶಾಲೆಯಿದ್ದು, ಶಿಕ್ಷಕರ ಕೊರತೆ ಇದೆ. ಗ್ರಾಮದಲ್ಲಿ ಮಹಿಳೆಯರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಬೇಕು. ಮಹಿಳೆಯರಿಗೆ ಬಟ್ಟೆ ಒಗೆಯಲು ದೋಬಿಘಾಟ ದುರಸ್ತಿಯಾಗಿ ಅಲ್ಲಿಗೆ ನೀರಿನ ವ್ಯವಸ್ಥೆಯಾಗಬೇಕು’ ಎಂದು ಗ್ರಾಮದ ಮಹಾಂತೇಶ ಹಿರೇಕುರುಬರ ಆಗ್ರಹಿಸಿದರು.

ಗ್ರಾಮದ ನಿತ್ಯದ ಅವಶ್ಯಕತೆಗಳಿಗೆ ಪಿಡಿಒ ಸ್ಪಂದಿಸುತ್ತಾರೆ. ಆದರೆ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.

ಕರ್ನಾಟಕ ಲೊಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಗ್ರಾಮಕ್ಕೆ ಭೇಟಿಯಾಗಿ ಹೋದ ನಂತರ ₹9 ಕೋಟಿ  ಗ್ರಾಮಾಭಿವೃದ್ಧಿಗೆ ಮಂಜೂರಾಗಿದೆ. ಅದರಿಂದ ಮೂಲ ಸಮಸ್ಯೆಗಳೆಲ್ಲ ಪರಿಹಾರವಾಗಲಿವೆ ಎಂದು ಪಿಡಿಒ ಪರಶುರಾಮ ಕಸನಕ್ಕಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.