ADVERTISEMENT

ಎಸ್.ಆರ್.ಪಾಟೀಲ್ ಚಿತ್ರವಿದ್ದ ₹2.65 ಕೋಟಿ ಮೌಲ್ಯದ ವಸ್ತುಗಳು ಜಪ್ತಿ

ಇಡೀ ರಾತ್ರಿ ನಡೆದ ಪಂಚನಾಮೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 18:28 IST
Last Updated 28 ಮಾರ್ಚ್ 2023, 18:28 IST
ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ಲ-ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ್ ಭಾವಚಿತ್ರವುಳ್ಳ ಗಡಿಯಾರ, ಟಿ- ಶರ್ಟ್ ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ, ಎಸ್ಪಿ ಡಾ.ಎಚ್.ಡಿ.ಆನಂದಕುಮಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು
ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ಲ-ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ್ ಭಾವಚಿತ್ರವುಳ್ಳ ಗಡಿಯಾರ, ಟಿ- ಶರ್ಟ್ ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ, ಎಸ್ಪಿ ಡಾ.ಎಚ್.ಡಿ.ಆನಂದಕುಮಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು   

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಯರಗಲ್ಲ– ಮದರಿಯಲ್ಲಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಸಿಕ್ಕಿರುವ, ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರ ಭಾವಚಿತ್ರವುಳ್ಳ ಗಡಿಯಾರ, ಎಸ್.ಆರ್.ಪಿ ಹೆಸರಿನ ಟಿ- ಶರ್ಟ್‌ಗಳ ಮೌಲ್ಯ ₹2.65 ಕೋಟಿ ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಸೋಮವಾರ ಈ ವಸ್ತುಗಳು ಪತ್ತೆಯಾಗುತ್ತಿದ್ದಂತೆ ತಾಳಿಕೋಟಿ, ಮುದ್ದೇಬಿಹಾಳ ಪೊಲೀಸ್ ಠಾಣೆ ಗಳಿಂದ ಸಿಬ್ಬಂದಿಯನ್ನು ಕರೆಸಿ ರಾತ್ರಿ 9 ಗಂಟೆಯಿಂದ ಪಂಚನಾಮೆ ಕಾರ್ಯ ಶುರು ಮಾಡಿದ ನಂತರ ಅದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಪೂರ್ಣಗೊಂಡಿತು ಎಂದು ಮೂಲಗಳು ತಿಳಿಸಿವೆ. ಪತ್ತೆಯಾದ ವಸ್ತುಗಳಲ್ಲಿ ಗೋಡೆ ಗಡಿಯಾರ 36,720, ಟಿ– ಶರ್ಟ್ 55 ಸಾವಿರ ಹಾಗೂ 50,720 ಕ್ಯಾರಿ ಬ್ಯಾಗ್‌ ಪತ್ತೆಯಾಗಿದ್ದು ಅವುಗಳ ಒಟ್ಟು ಮೌಲ್ಯ ₹2,65,96,400 ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಚ್.ಡಿ.ಆನಂದಕುಮಾರ್, ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ನೇತೃತ್ವದ ತಂಡ ರಾತ್ರಿಯೇ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ADVERTISEMENT

ಎಲ್ಲ ಸಾಮಗ್ರಿಗಳನ್ನೂ ಕಾರ್ಖಾನೆಯ ಗೋದಾಮಿನಲ್ಲಿಯೇ ಪಂಚನಾಮೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹16 ಲಕ್ಷ ನಗದು, ಮದ್ಯ ವಶ (ಹಾವೇರಿ ವರದಿ): ದಾಖಲೆ ಇಲ್ಲದೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹16 ಲಕ್ಷ ನಗದನ್ನು ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಾಗಿದೆ. ಹಾವೇರಿ ನಗರದ ಕೊಂಡವಾಡ ಗಲ್ಲಿ ನಿವಾಸಿ ನಟರಾಜ ಬಾಳಿಮಠ (44) ಮತ್ತು ಶ್ರೀಕಂಠಯ್ಯ ಬಾಳಿಮಠ (40) ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

₹ 3.67 ಕೋಟಿ ಮೌಲ್ಯದ ಕುಕ್ಕರ್‌, ಗ್ರೈಂಡರ್ ವಶ

ಬೆಂಗಳೂರು: ಯಲಹಂಕ ಕ್ಷೇತ್ರದ ಜಕ್ಕೂರು ಪ್ರದೇಶದ ವಿದ್ಯಾಶಿಲ್ಪ ಅಕಾಡೆಮಿಯ ಗೋದಾಮಿನಲ್ಲಿ ಮತದಾರರಿಗೆ ಹಂಚಲು ದಾಸ್ತಾನು ಮಾಡಿದ್ದ ₹ 3.67 ಕೋಟಿ ಸಾಮಗ್ರಿ ಗಳನ್ನು ಕೇಂದ್ರ ತೆರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಗೋದಾಮಿನಲ್ಲಿ ಕುಕ್ಕರ್, ಮಿಕ್ಸರ್, ಗ್ರೈಂಡರ್, ಅಡುಗೆ ಪಾತ್ರೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ದಾಸ್ತಾನು ಮಾಡಿರು ವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಗರದ ರಿಟೇಲ್‌ ಸೂಪರ್‌ ಸ್ಟೋರ್ಸ್‌ನ ಕೃಷ್ಣಾ ಮಾಚಾರಿ ಮಂಜುನಾಥ್ ಮೂರು ಗೋದಾಮುಗಳಲ್ಲಿ ಸಾಮಗ್ರಿ ದಾಸ್ತಾನು ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ಎಂಸಿಸಿ ನೋಡಲ್ ಅಧಿಕಾರಿ ಮುನಿಚೆಲುವಯ್ಯ ಅವರು ವಿರುದ್ಧ ದೂರು ನೀಡಿದ್ದು, ಯಲಹಂಕ ಪೊಲೀಸ್‌ ಠಾಣೆಯಲ್ಲಿ ಕೃಷ್ಣಾಮಾಚಾರಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.