ADVERTISEMENT

ಇಟ್ಟಂಗಿಹಾಳ ಕೊಲೆ ಪ್ರಕರಣ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 15:48 IST
Last Updated 19 ಏಪ್ರಿಲ್ 2021, 15:48 IST

ವಿಜಯಪುರ: ನಗರ ಹೊರ ವಲಯದ ಇಟ್ಟಂಗಿಹಾಳದಲ್ಲಿ ಇತ್ತೀಚೆಗೆ ನಡೆದಿದ್ದ ರೌಡಿಶೀಟರ್ ದಸ್ತಗಿರಸಾಬ್ ಮಮದಾಪುರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪಣ್ಣಗೌಡ ಬಾಗಾಯತ, ಸಂತೋಷ ರಾಠೋಡ, ಶ್ಯಾಮರಾಯ ರಾಠೋಡ, ವಿಲಾಸ ರಾಠೋಡ, ಸಂತೋಷ ಚವ್ಹಾಣ ಬಂಧಿತ ಆರೋಪಿಗಗಳಾಗಿದ್ದಾರೆ ಎಂದರು.

ಆರೋಪಿ ಅಪ್ಪಣ್ಣಗೌಡನ ಹೆಂಡತಿ ಜೊತೆಗೆ ದಸ್ತಗಿರ ಅನೈತಿಕ ಸಂಬಂಧ ಹೊಂದಿರುವುದೇ ಕೊಲೆಗೆ ಕಾರಣವಾಗಿದೆ ಎಂದು ತಿಳಿಸಿದರು.

ADVERTISEMENT

ಕೊಲೆಗೆ ಬಳಸಿದ್ದ ಒಂದು ಚಾಕು, ಒಂದು ಸ್ಕೂಟರ್ ಹಾಗೂ ₹2400 ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ದರೋಡೆಕೋರರ ಬಂಧನ:

ಉತ್ನಾಳ ಕ್ರಾಸ್ ಹತ್ತಿರ ದ್ರಾಕ್ಷಿ ತರಲು ಹೊರಟಿದ್ದ ವೇಳೆಯಲ್ಲಿ ವಾಹನಕ್ಕೆ ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದ ಆರು‌ ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಅಗರವಾಲ್‌ ತಿಳಿಸಿದರು.

ಆರೋಪಿಗಳಾದ ಮಲ್ಲಿಕಾರ್ಜುನ ಪಾಟೀಲ, ಪ್ರಶಾಂತ ಕೆಂಪವಾಡ, ಸುನೀಲ ವಳಸಂಗ, ಅರುಣ ಜಾಧವ, ವಿಜಯಕುಮಾರ ಮುತ್ತಗಿ, ರವಿ ಬೈರವಾಡಗಿ ಬಂಧಿಸಿ, ಅವರಿಂದ ಎರಡು ಕಾರು, 6 ಮೊಬೈಲ್, ₹ 1.20 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.

ಕಳೆದ ಏಪ್ರಿಲ್‌ 7 ರಂದು ಉತ್ನಾಳ ಹತ್ತಿರ ಅಕ್ರಂಪಾಶ ಬಾಬು ಲಾಲ್ ಹಾಗೂ ಮಹ್ಮದ ತಬರಿಜ್ ಎಂಬುವರ ವಾಹನಕ್ಕೆ ಅಡ್ಡಗಟ್ಟಿ ₹3.50 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.