ADVERTISEMENT

ಐಟಿಐ ಪರೀಕ್ಷಾ ಗೊಂದಲ ನಿವಾರಣೆಗೆ ಆಗ್ರಹ

ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗ್‍ನೈಸೇಷನ್ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 13:24 IST
Last Updated 19 ಫೆಬ್ರುವರಿ 2021, 13:24 IST
ಐಟಿಐ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ ನಡೆಸದೇ ಪರೀಕ್ಷೆ ನಡೆಸಲು ಸರ್ಕಾರ ಮಂದಾಗಿರುವ ಕ್ರಮವನ್ನು ವಿರೋಧಿಸಿ ಎಐಡಿವೈಒ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಐಟಿಐ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ ನಡೆಸದೇ ಪರೀಕ್ಷೆ ನಡೆಸಲು ಸರ್ಕಾರ ಮಂದಾಗಿರುವ ಕ್ರಮವನ್ನು ವಿರೋಧಿಸಿ ಎಐಡಿವೈಒ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ವಿಜಯಪುರ:ಐಟಿಐ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ ನಡೆಸದೇ ಪರೀಕ್ಷೆ ನಡೆಸಲು ಸರ್ಕಾರ ಮಂದಾಗಿರುವ ಕ್ರಮವನ್ನು ವಿರೋಧಿಸಿ ಎಐಡಿವೈಓ ಹಾಗೂ ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿಗಳ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಸಲಾಯಿತು.

ಎಐಡಿವೈಒನ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, 2019 ಆಗಸ್ಟ್‌ನಲ್ಲಿ ದಾಖಲಾದ ಐಟಿಐ ತರಬೇತುದಾರರಿಗೆ ಕೊರೊನಾ ಹಿನ್ನೆಲೆಯಲ್ಲಿ ಮೊದಲ ವರ್ಷದ ಪರೀಕ್ಷೆಗಳನ್ನು ರದ್ದುಗೊಳಿಸಿ ಅವರನ್ನು ದ್ವಿತೀಯ ವರ್ಷಕ್ಕೆ ಉತ್ತೀರ್ಣಗೊಳಿಸಿ ಫೆ.2 ರಂದು ಡಿಜಿಟಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಫೆ.15 ರಂದು ರಾಜ್ಯ ಸರ್ಕಾರ ಪರೀಕ್ಷೆ ನಡೆಸುವ ಸಂಬಂಧ ಏಕಾಏಕಿ ಒಂದೇ ದಿನದ ಅವಕಾಶ ನೀಡಿ ಪರೀಕ್ಷಾ ಶುಲ್ಕ ತುಂಬಲು ಆದೇಶ ಹೊರಡಿಸಿರುವುದು ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದರು.

ಇಬ್ಬಗೆಯ ನಿಲುವನ್ನು ಇಲಾಖೆ ತೆಗೆದುಕೊಂಡಿರುವುದರಿಂದ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಒಂದೆಡೆ ಏಕಾಏಕಿ ಪರೀಕ್ಷಾ ಶುಲ್ಕ ಹೊಂದಿಸುವುದು ಕಷ್ಟವಾದರೆ, ಇನ್ನೊಂದೆಡೆ ಮಾರ್ಚ್ ಮೊದಲನೇ ವಾರಕ್ಕೆ ಪರೀಕ್ಷಾ ವೇಳಾಪಟ್ಟಿ ಹೊರಡಿಸಿರುವುದರಿಂದ ವಿದ್ಯಾರ್ಥಿಗಳು ದಿಕ್ಕುತೋಚದಂತಾಗಿದ್ದಾರೆ ಎಂದರು.

ADVERTISEMENT

ಕೊರೊನಾದ ಅವಧಿಯಲ್ಲಿ ತರಗತಿಗಳು ನಡೆಯದೇ ಇರುವುದರಿಂದ ವಿಷಯಗಳ ಅಭ್ಯಾಸಕ್ಕೆ ತೊಡಕುಂಟಾಗಿರುತ್ತದೆ. ವಿಷಯಗಳ ಪುನರಾವರ್ತನೆಗೂ ಅವಕಾಶ ಕೊಡದೇ ಏಕಾಏಕಿ ಪರೀಕ್ಷೆ ನಡೆಸಲು ತೀರ್ಮಾನಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಹೇಳಿದರು.

ಐಟಿಐ ವಿದ್ಯಾರ್ಥಿಗಳಾದ ಸತೀಶ ಉಪ್ಪಾರ, ಸಚಿನ್ ತಳವಾರ, ರಾಘವೇಂದ್ರ ರೊಳ್ಳಿ, ಗುರುಪ್ರಸಾದ, ಆಶಿಫ್ ಜಕಾತಿ, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ಕೊಂಡಗೂಳಿ ಹಾಗೂ ನಗರದ ಬಿಎಲ್‍ಡಿಇಎ, ಸರಕಾರಿ ಹಾಗೂ ಖೇಡ್ ಐಟಿಐನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

****

ಕೊರೊನಾ ಹಿನ್ನೆಲೆಯಲ್ಲಿ ವಿಶೇಷವೆಂದು ಪರಿಗಣಿಸಿ ತಮ್ಮ ಹಿಂದಿನ ಆದೇಶದಂತೆ ಮೊದಲನೇ ವರ್ಷದ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷಕ್ಕೆ ಉತ್ತೀರ್ಣಗೊಳಿಸಬೇಕು

-ಸತೀಶ ಉಪ್ಪಾರ, ಐಟಿಐ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.