ವಿಜಯಪುರ: ಜಿಲ್ಲೆಯ ವಿಜಯಪುರ, ಬಸವನ ಬಾಗೇವಾಡಿ, ಇಂಡಿ ತಾಲ್ಲೂಕಿನ ಗ್ರಾಮೀಣ ಜನ ವಸತಿಗಳು ಹಾಗೂ ಇಂಡಿ ಪಟ್ಟಣ, ಚಡಚಣ, ಮನಗೂಳಿ, ನಿಡಗುಂದಿ ಮತ್ತು ಕೊಲ್ಹಾರ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಜಲ ಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.
ಒಟ್ಟು ₹ 1431 ಕೋಟಿ ವೆಚ್ಚದ ಸ್ಕೀಂ–1 ಹಾಗೂ ₹ 954.51 ಕೋಟಿ ಮೊತ್ತದ ಸ್ಕೀಂ–2 ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದು ಅವರು ಹೇಳಿದರು.
ಸ್ಕೀಂ–1ರಡಿ ಆಲಮಟ್ಟಿ ಜಲಾಶಯದಿಂದ ವಿಜಯಪುರ, ಬಸವನ ಬಾಗೇವಾಡಿ ಮತ್ತು ಇಂಡಿ ತಾಲ್ಲೂಕಿನ ಗ್ರಾಮೀಣ ಜನ ವಸತಿ, ಇಂಡಿ ಪಟ್ಟಣ, ಚಡಚಣ, ಮನಗೂಳಿ, ನಿಡಗುಂದಿ ಮತ್ತು ಕೊಲ್ಹಾರ ಪಟ್ಟಣಕ್ಕೆ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಲಾಗಿದೆ ಎಂದರು.
ಸ್ಕೀಂ–2ರಡಿ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲ್ಲೂಕಿನ ಎಲ್ಲ ಗ್ರಾಮೀಣ ಜನ ವಸತಿಗಳು ಹಾಗೂ ಮುದ್ದೇಬಿಹಾಳ, ಸಿಂದಗಿ ಪಟ್ಟಣ, ದೇವರ ಹಿಪ್ಪರಗಿ, ಆಲಮೇಲ, ತಾಳಿಕೋಟೆ ಹಾಗೂ ನಾಲತವಾಡಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಜಲಜೀವನ್ ಮಿಷನ್ ವತಿಯಿಂದ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಿಂದ ವರ್ಷಪೂರ್ತಿ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.