ವಿಜಯಪುರ: ಜಿಲ್ಲೆಯಲ್ಲಿರುವ 335 ಜನವಸತಿಗಳಲ್ಲಿ ಇರುವ 1,65,270 ಮನೆಗಳಿಗೆಜಲಜೀವನ ಮಿಷನ್ ಯೋಜನೆಯಡಿ ನಳ ಸಂಪರ್ಕ ಕಲ್ಪಿಸಲು ₹309.43 ಕೋಟಿ ಮೊತ್ತದ ಕ್ರಿಯಾಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
2020–21ನೇ ಸಾಲಿನಲ್ಲಿ 298 ಜನವಸತಿಗಳಲ್ಲಿ 1,15,569 ಮನೆಗಳಿಗೆ ಕಾರ್ಯತ್ಮಕ ನಳ ಸಂಪರ್ಕ ಹಾಗೂ ಪೈಪ್ ಲೈನ್ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ನೀರನ್ನು ಪಡೆದುಕೊಂಡು ಗ್ರಾಮಗಳಲ್ಲಿ ಮನೆ ಮನೆಗಳ ನಳ ಸಂಪರ್ಕವನ್ನು ನೀಡುವ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ತಿಳಿಸಿದರು.
2021-22ನೇ ಸಾಲಿನ ಜಲ ಜೀವನ ಮಿಷನ್ ಯೋಜನೆಯಡಿ 335 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಈ ಎಲ್ಲ ಜನವಸತಿಗಳಲ್ಲಿ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಿಂದ ನೀರನ್ನು ಪೂರೈಸಲಾಗುವುದು ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಹಾಗೂ ವಿಭಾಗಿಯ ಅರಣ್ಯ ಅಧಿಕಾರಿ ಗಿರೀಶ್ ಹಾಲಕುಡೆ, ಕೃಷಿ ಜಂಟಿ ನಿರ್ದೇಶಕ ಡಿ.ಡಬ್ಲ್ಯೂ.ರಾಜಶೇಖರ್, ಆರಿಫಾ ಬಿರಾದಾರ, ಪಿ.ಎಸ್.ನಾಯಕ್, ದಿವಾಕ್ಷಿ ಜಾನಕಿ, ಎಸ್. ಆರ್. ರುದ್ರವಾಡಿ, ಜೆ.ಪಿ.ಶೆಟ್ಟಿ ಹಾಗೂ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.