ADVERTISEMENT

ವಿಜಯಪುರ: ಆನಂದ ಮಹಲ್‌ನಲ್ಲಿ ‘ಜನಪರ ಉತ್ಸವ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 14:02 IST
Last Updated 23 ಸೆಪ್ಟೆಂಬರ್ 2022, 14:02 IST
ಬಿ.ನಾಗರಾಜ
ಬಿ.ನಾಗರಾಜ   

ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೆಪ್ಟೆಂಬರ್‌ 24ರಂದು ಸಂಜೆ 6ಕ್ಕೆ ನಗರದ ಆನಂದ ಮಹಲ್‌ ಆವರಣದಲ್ಲಿ ‘ಜನಪರ ಉತ್ಸವ’ ಆಯೋಜಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉತ್ಸವಕ್ಕೂ ಮುನ್ನಾ ನಗರದ ಸಿದ್ದೇಶ್ವರ ದೇವಸ್ಥಾನದ ಬಳಿಯಿಂದ ಆನಂದ ಮಹಲ್‌ ವರೆಗೆ ಜಾನಪದ ಕಲಾತಂಡಗಳಿಂದ ಮೆರವಣಿಗೆ ನಡೆಯಲಿದೆ ಎಂದರು.

ಲಂಬಾಣಿ ನೃತ್ಯ, ತಾಷಾರಂ ಡೋಲು, ಪೂಜಾ ಕುಣಿತ, ಜಗ್ಗಲಗಿ, ಕಹಳೆವಾದನ, ಹಗಲು ವೇಷ, ಮರಗಾಲ ಕುಣಿತ, ಹಲಗೆ ಮೇಳ, ಗೊಂಬೆ ಕುಣಿತ ಮತ್ತು ಮಹಿಳಾ ಉರುಮೆವಾದ್ಯ ತಂಡಗಳು ಜನಪರ ಉತ್ಸವದ ಅಂಗವಾಗಿ ನಡೆಯುವ ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.

ADVERTISEMENT

ಸಂಜೆ 6ಕ್ಕೆ ನಡೆಯುವ ಜನಪರ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಹನಾಯ್‌ ವಾದನ, ಸಮೂಹ ನೃತ್ಯ, ಜಾನಪದ ಗೀತೆ, ಚೌಡಕಿ ಪದ, ಗೀಗಿ ಪದ, ಜಾನಪದ ನೃತ್ಯ, ಕೃಷ್ಣಾ ರುಕ್ಮಿಣಿ ಶ್ರೀಕೃಷ್ಣ ಪಾರಿಜಾತ ಕಾರ್ಯಕ್ರಮಗಳ ಪ್ರದರ್ಶನ ಇರಲಿದೆ ಎಂದರು.

ಯುವ ಪೀಳಿಗೆಗೆ ಜಾನಪದ ಕಲಾಪ್ರಕಾರಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗಿದೆ.ಈ ಜನಪರ ಉತ್ಸವದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 10 ಕಲಾತಂಡಗಳ 98 ಕಲಾವಿದರು ಭಾಗವಹಿಸಲಿದ್ದಾರೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್‌.ಪಾಟೀಲ ನಡಹಳ್ಳಿ, ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ, ದೇವಾನಂದ ಚವ್ಹಾಣ, ರಮೇಶ ಭೂಸನೂರ, ಸುನೀಲ್‌ಗೌಡ ಪಾಟೀಲ, ಹಣಮಂತ ನಿರಾಣಿ, ಪಿ.ಎಚ್‌.ಪೂಜಾರ, ಸಂಸದ ರಮೇಶ ಜಿಗಜಿಣಗಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌, ಜಿ.ಪಂ.ಸಿಇಒ ರಾಹುಲ್‌ ಶಿಂಧೆ, ಎಸ್‌ಪಿ ಆನಂದಕುಮಾರ್‌, ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ ಭಾಗವಹಿಸಲಿದ್ದಾರೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಗವಿಸಿದ್ಧ ಹೊಸಮನಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.