
ವಿಜಯಪುರ: ಕಲಕೇರಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕೆಲವು ಸಂಘಟನೆಗಳ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ಕಲಕೇರಿ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಸಿಇಒ ರಿಷಿ ಆನಂದ್ ಅವರನ್ನು ಶುಕ್ರವಾರ ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದರು.
ಗ್ರಾಮದ ಮುಖಂಡ ರಮೇಶ ಹೊಸಮನಿ ಮಾತನಾಡಿ, ಕಲಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಹಾಗೂ ಸರ್ಕಾರಿ ಆಸ್ತಿ ಸೃಜನೆ ಸಮರ್ಪಕವಾಗಿ ನಡೆಯುತ್ತಿವೆ. ರಿಸರ್ವೆ ನಂ.1ರ 38 ಗುಂಟೆ ಜಾಗವನ್ನು ಸ್ವಚ್ಛಗೊಳಿಸಿ ಮಹಾತ್ಮ ಗಾಂಧಿ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ಸುಮಾರು 30 ವರ್ಷಗಳಿಂದ ಅಂಗಡಿಗಳನ್ನು ನಡೆಸುತ್ತಿದ್ದವರಿಗೆ ಆದ್ಯತೆ ನೀಡಿ, 37 ಅಂಗಡಿಗಳನ್ನು ಅವರೇ ಭೂಬಾಡಿಗೆ ಹಣದಲ್ಲಿ ನಿರ್ಮಿಸಿಕೊಂಡಿದ್ದು, ಗ್ರಾಮ ಪಂಚಾಯತಿಯಿಂದ 11 ಅಂಗಡಿಗಳನ್ನು ನಿರ್ಮಿಸಿ ಸ್ಥಳೀಯರಿಗೆ ಅವಕಾಶ ನೀಡಲಾಗಿದೆ ಎಂದರು.
ಪ್ರವೀಣ್ ಜಗಶೆಟ್ಟಿ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಭ್ರಷ್ಟಾಚಾರ ಕಂಡುಬಂದಿಲ್ಲ. 21 ಸಾವಿರ ಜನಸಂಖ್ಯೆ ಹಾಗೂ 28 ಸದಸ್ಯರನ್ನು ಹೊಂದಿರುವ ಈ ಪಂಚಾಯಿತಿ ಪಟ್ಟಣ ಮಟ್ಟಕ್ಕೆ ಏರಲು ಸಜ್ಜಾಗಿದೆ. ಆದರೆ ಕೆಲವರು ವೈಯಕ್ತಿಕ ಸ್ವಾರ್ಥಕ್ಕಾಗಿ ಆಡಳಿತಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಗದೀಶ್ ವಡವಡಗಿ, ಸಲೀಂ ನಾಯ್ಕೋಡಿ, ಬಸವರಾಜ್ ಉತಾಳೆ, ಸಿದ್ದಪ್ಪ ಹೂಗಾರ, ಎಂ.ಎಸ್. ಗುಡಗುಂಟಿ, ಮಹಿಬೂಬ್ ಬಾಗವಾನ, ಇಮಾಂಬಿ ಮುಲ್ಲಾ, ರೇಣುಕಾ ಸುಂಕದ, ದೇವೇಂದ್ರ ಬಡಿಗೇರ, ರಾಜ್ಅಹ್ಮದ್ ಶಿರಸಗಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.