
ಬಬಲೇಶ್ವರ: ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ತೆರವಾದ ಎರಡು ವಾರಗಳ ಬಳಿಕ ಕೊಲ್ಹಾಪುರದ ಕನೇರಿ ಕಾಡಸಿದ್ಧೇಶ್ವರ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಸೋಮವಾರ ನಾಡಿನ ನೂರಾರು ಮಠಾಧೀಶರು, ಸಾವಿರಾರು ಭಕ್ತರೊಡಗೂಡಿ ಬಬಲೇಶ್ವರ ಪಟ್ಟಣದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸುವ ಮೂಲಕ ‘ಬಲ’ ಪ್ರದರ್ಶನ ಮಾಡಿದರು.
ಕನೇರಿ ಶ್ರೀಗೆ ಸ್ವಾಗತ ಕೋರುವ ಬ್ಯಾನರ್, ಕಟೌಟ್ಗಳು, ಸ್ವಾಗತ ಕಮಾನುಗಳು ಬಬಲೇಶ್ವರ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ರಾರಾಜಿಸುತ್ತಿದ್ದವು. ‘ಕರ್ನಾಟಕದ ಯೋಗಿ’ ಎಂಬ ಘೋಷಣೆಗಳನ್ನು ಭಕ್ತರು ಮೊಳಗಿಸಿದರು. ಪುಷ್ಪವೃಷ್ಟಿಗೈಯುವ ಮೂಲಕ ಭಕ್ತರು ವಿಜಯಪುರ ಜಿಲ್ಲೆಗೆ ಅದ್ದೂರಿಯಾಗಿ ಸ್ವಾಗತಿಸಿದರು.
ವಿಜಯಪುರದಿಂದ ಬಬಲೇಶ್ವರದವರೆಗೆ ಸಾವಿರಾರು ಯುವಕರು ಬೈಕ್ ರ್ಯಾಲಿ ನಡೆಸಿದರು. ಬಬಲೇಶ್ವರ ಪಟ್ಟಣದ ಶಾಂತವೀರ ವೃತ್ತದಿಂದ ಸಮಾವೇಶ ಆಯೋಜಿಸಲಾಗಿದ್ದ ಶಾರದಾ ಶಾಲೆಯ ಆವರಣದವರೆಗೆ ಎರಡು ಸಾವಿರಕ್ಕೂ ಅಧಿಕ ಮಹಿಳೆಯರು ಪೂರ್ಣಕುಂಭ ಮೆರವಣಿಗೆ ಮೂಲಕ ಕನೇರಿಶ್ರೀಗಳಿಗೆ ಭವ್ಯವಾಗಿ ಬರಮಾಡಿಕೊಂಡರು.
ಬೃಹತ್ ತೆರೆದ ವೇದಿಕೆಯಲ್ಲಿ ನಾಡಿನ ವಿವಿಧ ಮಠಾಧೀಶರು ಮತ್ತು ಜನಪ್ರತಿನಿಧಿಗಳು, ಮುಖಂಡರು ಬಗೆಬಗೆಯ ಧಾನ್ಯಗಳನ್ನು ಮಡಿಕೆಗೆ ಸುರಿಯುವ ಮೂಲಕ ಉದ್ಘಾಟಿಸಿದರು.
ಕನೇರಿ ಸ್ವಾಮೀಜಿ ಸೇರಿದಂತೆ ಎಲ್ಲ ಸ್ವಾಮೀಜಿಗಳಿಗೆ ಕೇಸರಿ ಶಲ್ಯವನ್ನು ಸಮರ್ಪಿಸಲಾಯಿತು. ಜೈ ಶ್ರೀರಾಮ್, ಭಾರತ ಮಾತಾಕಿ ಜೈ ಘೋಷಣೆಗಳ ಜೊತೆಗೆ ಶಂಖ, ಕಹಳೆ ವಾದನ ಮೊಳಗಿತು.
ಡಾ. ಉಪಾದ್ಯ ಬರೆದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಭಾಷಣ ಧ್ವನಿ ಮುದ್ರಿಕೆ ಪ್ರಸಾರ:
ಬೈಲೂರು ನಿಜಗುಣಾನಂದ ಸ್ವಾಮೀಜಿ, ಸಾಣೆಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿ ಬಸವಲಿಂಗ ಪಟ್ಟದೇವರು ವಿವಿಧ ವೇದಿಕೆಗಳಲ್ಲಿ ಈ ಹಿಂದೆ ಹಿಂದೂ ಧರ್ಮ, ದೇವರನ್ನು ವಿರೋಧಿಸಿ ಮಾಡಿರುವ ಭಾಷಣಗಳ ಧ್ವನಿ ಮುದ್ರಿಕೆಯನ್ನು ಸಮಾವೇಶದಲ್ಲಿ ಭಕ್ತರಿಗೆ ಕೇಳಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆ ಸೇರಿದಂತೆ ನೆರೆಯ ಬಾಗಲಕೋಟೆ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಕಡೆಯಿಂದಲೂ ನೂರಾರು ವಾಹನಗಳಲ್ಲಿ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಭಕ್ತರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.
ಸಿಂದಗಿ ಸಾರಂಗಮಠದ ಸ್ವಾಮೀಜಿ, ಬಳ್ಳಾರಿ ಕಲ್ಯಾಣ ಮಠದ ಸ್ವಾಮೀಜಿ, ಬುರಾಣಪುರದ ಯೋಗೀಶ್ವರ ಮಾತಾ, ಶಿರೋಳದ ಶಂಕರಾರೂಢ ಸ್ವಾಮೀಜಿ, ಯಾದಗಿರಿ ಶೋಭುದೇಶ ಸ್ವಾಮೀಜಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕೋಳಕೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಇದ್ದರು.ವಿಜಯಪುರಕ್ಕೆ ಬರದಂತೆ ಕನೇರಿ ಶ್ರೀಗಳಿಗೆ ನಿರ್ಬಂಧ ಹಾಕಿ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು ಅವಮಾನ ಮಾಡಿದ್ದಾರೆ. ಗುರುಗಳ ಮೇಲೆ ನಿಷೇಧ ಹೇರಿರುವುದು ಖಂಡನೀಯ ಶಶಿಕಲಾ ಜೊಲ್ಲೆ ಶಾಸಕಿ
ಕನೇರಿ ಶ್ರೀಗಳ ಪ್ರವೇಶ ನಿರ್ಬಂಧ ಹಾಕಲು ಅವರೇನು ದೇಶ ದ್ರೋಹ ಕೊಲೆ ಅತ್ಯಾಚಾರ ಮಾಡಿದ್ದರಾ. ಹಿಂದೂ ಧರ್ಮ ರಕ್ಷಣೆಗೆ ಮುಂದಾಗಿರುವ ಕನೇರಿ ಸ್ವಾಮೀಜಿ ಜೊತೆ ಇಡೀ ಹಿಂದೂ ಸಮಾಜ ಇದೆ.ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ
ವಿಜಯಪುರಕ್ಕೆ ಬರದಂತೆ ಕನೇರಿ ಶ್ರೀಗಳಿಗೆ ನಿರ್ಬಂಧ ಹಾಕಿ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು ಅವಮಾನ ಮಾಡಿದ್ದಾರೆ. ಗುರುಗಳ ಮೇಲೆ ನಿಷೇಧ ಹೇರಿರುವುದು ಖಂಡನೀಯ.ಶಶಿಕಲಾ ಜೊಲ್ಲೆ, ಶಾಸಕಿ
ಯಾರನ್ನೂ ಹಣಿಯಲು ಬಂದಿಲ್ಲ: ಕನೇರಿ ಶ್ರೀ
‘ಬಬಲೇಶ್ವರದಲ್ಲಿ ಬಸವಾದಿ ಶರಣ ಸಮಾವೇಶ ಏಕೆ ಮಾಡಿದ್ದೇವೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ನಾವು ಎತ್ತಿಕೊಂಡವರ ಕೂಸು ಹೀಗಾಗಿ ಇಲ್ಲಿಗೆ ಬಂದಿದ್ದೇವೆಯೇ ಹೊರತು ಯಾರನ್ನೋ ಹಣಿಯಲು ಬಂದಿಲ್ಲ ಅವರನ್ನು ದೇವರು ಹಣಿಯುತ್ತಾನೆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ’ ಎಂದು ಕನೇರಿ ಕಾಡಸಿದ್ಧೇಶ್ವರ ಸ್ವಾಮೀಜಿ ಮಾರ್ಮಿಕವಾಗಿ ಹೇಳಿದರು. ‘ಬಸವಾದಿ ಶರಣರನ್ನು ಕೆಲವರು ಪೇಟೆಂಟ್ ಮಾಡಿಕೊಂಡಿದ್ದಾರೆ. ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸಿದ್ದಾರೆ. ಇದನ್ನು ಹೋಗಲಾಡಿಸಲು ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಿದ್ದೇವೆ’ ಎಂದರು. ‘ಕೆಲವರು ನಿಮ್ಮೂರ ಜಾತ್ರೆ ಮಾಡಬೇಡಿ ಮನೆ ದೇವರು ಪೂಜೆ ಮಾಡಬೇಕು ಎನ್ನುತ್ತಾರೆ. ನೀವು ಮಾಡಲು ಒಪ್ಪುತ್ತೀರಾ’ ಎಂದು ಪ್ರಶ್ನಿಸಿದರು. ‘ನಾನು ಬಿಜಾಪುರ ಮಂದಿ. ಹೀಗಾಗಿ ಬಿಜಾಪುರ ಭಾಷೆಯಲ್ಲಿ ಮಾತನಾಡಿದ್ದೇನೆ ನಾನು ಒಂದು ಬಾಂಬು ಒಗೆದಿರುವುದಕ್ಕೆ ಕೆಲವರಿಗೆ ಹಾರ್ಟ್ ಅಟಾಕ್ ಆಗಿದೆ’ ಎಂದರು.
ಹಿಂದೂ ಸಮಾಜದ ಕ್ಷಮೆ ಕೇಳಿ: ಈಶ್ವರಪ್ಪ ‘ಸಚಿವರೊಬ್ಬರು ಕನೇರಿ ಸ್ವಾಮೀಜಿಗಳಿಗೆ ಕ್ಷಮೆ ಕೇಳಲು ಹೇಳಿ ದೊಡ್ಡ ಅಪರಾಧ ಮಾಡಿದ್ದಾರೆ. ದೇವರಿಗೆ ಕ್ಷಮೆ ಕೇಳಲು ಹೇಳಿರುವ ನೀವು ಇಡೀ ಹಿಂದೂ ಸಮಾಜದ ಕ್ಷಮೆ ಕೇಳಬೇಕು’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ‘ಬಬಲೇಶ್ವರ ಜನ ಮುಂದಿನ ಚುನಾವಣೆಯಲ್ಲಿ ನಿಮಗೆ ಬುದ್ದಿ ಕಲಿಸುತ್ತಾರೆ. ಬಬಲೇಶ್ವರದಲ್ಲಿ ನಡೆದಿರುವ ಸಮಾವೇಶ ಟ್ರೇಲರ್ ಮುಂದೆ ಪಿಶ್ಚರ್ ತೋರಿಸುತ್ತೇವೆ’ ಎಂದರು. ಕನೇರಿಯ ಶ್ರೀಕಂಠ ಸ್ವಾಮೀಜಿ ‘ಸನಾತನ ಧರ್ಮ ರಕ್ಷಣೆಗೆ ಸಿದ್ಧವಾಗಿರುವ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರನ್ನು ಮೂಲೆಯಲ್ಲಿ ಕೂರಿಸಲು ಸರ್ಕಾರ ಕೈಗೊಂಡ ಕ್ರಮ ಖಂಡನೀಯ’ ಎಂದರು. ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ‘ಸಮಾವೇಶಕ್ಕೆ ಕೆಲವರು ಅಡ್ಡಿ ಪಡಿಸಲು ಯತ್ನಿಸಿದರು. ಯಾರೂ ಸ್ವಾಮೀಜಿಗಳು ಬರುವುದಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಸ್ವಾಮೀಜಿಗಳು ಬರದಂತೆ ತಡೆಯಲಾಯಿತು. ಆದರೂ ಅಂಜದೇ ಬಂದಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.