ADVERTISEMENT

ವಿಜಯಪುರ: ರಂಗಭೂಮಿ ಕಲಾವಿದೆ ಲಲಿತಾಬಾಯಿಗೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 16:30 IST
Last Updated 30 ಅಕ್ಟೋಬರ್ 2022, 16:30 IST
ಲಲಿತಾಬಾಯಿ ಚನ್ನದಾಸರ
ಲಲಿತಾಬಾಯಿ ಚನ್ನದಾಸರ   

ವಿಜಯಪುರ: ಐದು ದಶಕಗಳ ಕಾಲ ರಂಗಭೂಮಿಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗೆ ಕಲಾವಿದೆ ಲಲಿತಾಬಾಯಿ ಚನ್ನದಾಸರ ಅವರಿಗೆ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕುಗಾಮವಾದ ಚವಡಿಹಾಳದಲ್ಲಿ ಜನಿಸಿದ ಲಲಿತಾಬಾಯಿ, 9ನೇ ವಯಸ್ಸಿಗೆ ಬಣ್ಣ ಹಚ್ಚಿ ಪಾರಿಜಾತದ ಮೂಲಕ ರುಕ್ಮಿಣಿ, ನಾರದ, ದೊರೆಸಾನಿ ಪಾತ್ರಗಳಲ್ಲಿ ಎರಡು ವರ್ಷ ಮಿಂಚಿದರು. ನಂತರ ನಾಟಕ ರಂಗಕ್ಕೆ ಪ್ರವೇಶಿಸಿದ ಅವರು ನಿರಂತರ ಐದು ದಶಕಗಳ ಕಾಲ ಹಲವಾರು ಸಾಮಾಜಿಕ, ಪೌರಾಣಿಕ ನಾಟಕಗಳ ಮೂಲಕ ನಾಡಿನ ಜನರನ್ನು ರಂಜಿಸಿದ್ದಾರೆ.

‘ಬಾಲ ನಟಿಯಾಗಿ ರಂಗ ಕಲಾ ಸೇವೆ ಆರಂಭಿಸಿದ್ದ ನಾನು, ಹಲವಾರು ನಾಟಕಗಳಲ್ಲಿ ಬಣ್ಣ ಹಚ್ಚಿದ್ದೇನೆ. ಜನರನ್ನು ರಂಜಿಸಿದ್ದೇನೆ. ನನ್ನ ಸೇವೆ ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಸಂತಸ ವಿಷಯ. 50 ವರ್ಷಗಳ ಸೇವೆಗೆ ಇದೀಗ ಫಲ ಸಿಕ್ಕಿದಂತಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಕರ್ನಾಟಕ ನಾಟಕ ಅಕಾಡೆಮಿ ಕೂಡ 2021ನೇ ಸಾಲಿನ ವಾರ್ಷಿಕ ರಂಗ ಪ್ರಶಸ್ತಿ ನೀಡಿ ಗೌರವಿಸಿದೆ’ ಎಂದು ಲಲಿತಾಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಎಂದು ಕೂಡ ಹಾಸ್ಯ ಮತ್ತಿತರೆ ಪಾತ್ರದಲ್ಲಿ ಕಾಣಿಸಿಕೊಳ್ಳದೆ ಬರೀ ದುಃಖದ ಪಾತ್ರಗಳಿಗೆ ಜೀವ ತುಂಬಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT