ವಿಜಯಪುರ: ‘ವಿಜಯಪುರ ನಗರದಲ್ಲಿ ಇನ್ನು ಮೇಲೆ ಯಾವ ಟಿಪ್ಪು ಸುಲ್ತಾನ್ ಆರಿಸಿ ಬರೋದಿಲ್ಲ, ಶಿವಾಜಿ ಮಹಾರಾಜರ ವಂಶದವರೇ ಆರಿಸಿ ಬರೋದು. ಅಪ್ಪಿತಪ್ಪಿ ಸಹಿತ ಸಾಬ್ರಿಗೆ ವೋಟ್ ಹಾಕಬಾರದು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಭಾನುವಾರ ಇಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗೌಡ್ರೇ, ವಿಜಯಪುರದಲ್ಲಿ ಒಂದು ಲಕ್ಷ ಟಿಪ್ಪು ಸುಲ್ತಾನರಿದ್ದಾರೆ. ಆದರೂ ಶಿವಾಜಿ ಮಹಾರಾಜನ ವಂಶದ ನೀವು ಹೆಂಗೆ ಆರಿಸಿ ಬರುತ್ತೀರಿ? ಎಂದು ರಾಜ್ಯದ ಅನೇಕ ಶಾಸಕರು ನನ್ನನ್ನ ಕೇಳುತ್ತಾರೆ’ ಎಂದರು.
‘ಟಿಪ್ಪು ಸುಲ್ತಾನನ ಮೆರವಣಿಗೆ ಮಾಡುವ ನಾಲಾಯಕ್ ಹಿಂದೂಗಳು ನಮ್ಮ ದೇಶದಲ್ಲಿ ಇದ್ದಾರೆ. ನಾನು ಹಿಂದೂ ಇದ್ದೀನಿ, ಆದರೆ, ಹಿಂದುತ್ವ ಒಪ್ಪಲ್ಲ, ನಾನು ಅಪ್ಪಗೆ ಹುಟ್ಟಿದ್ದು ಖರೆ ಐತಿ, ಆದರೆ, ಗ್ಯಾರಂಟಿ ಇಲ್ಲ. ನಾನು ಕುಂಕುಮ ಹಚ್ಚಿಕೊಳ್ಳಲ್ಲ, ಸಾಬರ ಟೊಪ್ಪಿ ಹಾಕಿಕೊಳ್ಳುತ್ತೇನೆ. ನಾನು ರೇಷ್ಮೆ ಪಟಗಾ ಸುತ್ತಿಕೊಳ್ಳಲ್ಲ, ಸಾಬರು ಹಾಕುವ ಟೊಪ್ಪಿ ಹಾಕಿಕೊಳ್ಳುತ್ತೇನೆ ಎಂದೆಲ್ಲ ವೋಟಿಗಾಗಿ ನಾಟಕ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ವೋಟ್ ನನಗೆ ಹಾಕಿ: ‘ಈ ಚುನಾವಣೆಯಲ್ಲಿ ನನ್ನನ್ನ ಸೋಲಿಸಲು ಬೆಂಗಳೂರಿನಿಂದ ಒಬ್ಬ(ಬಿ.ವೈ.ವಿಜಯೇಂದ್ರ), ಮಗ್ಗಲು ಜಿಲ್ಲೆಯಿಂದ (ಮುರುಗೇಶ ನಿರಾಣಿ) ಇನ್ನೊಬ್ಬ ₹50 ಕೋಟಿ ಹಣ ಕಳುಹಿಸುತ್ತಾರೆ. ಆದರೆ, ನೀವು ಆ ಹಣ ತಗೊಂಡು ಚಲೊ ಊಟ ಮಾಡಿ. ವೋಟ್ ಮಾತ್ರ ನನಗೆ ಹಾಕಿ’ ಎಂದು ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.