ವಿಜಯಪುರ: ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಿಸಾನ್, ಮಜ್ದೂರ್ ಬಚಾವೊ ದಿವಸ ಆಚರಿಸಲಾಯಿತು.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ರೈತ, ಕಾರ್ಮಿಕ ವಿರೋಧಿ ಕಾಯ್ದೆ ಜಾರಿ ವಿರೋಧಿಸಲಾಯಿತು.
ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದಯುವತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಸಂಸದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಅಲ್ಲಿಯ ಪೊಲೀಸರು ತಡೆದು, ದೌರ್ಜನ್ಯ ಎಸಗಿರುವುದನ್ನು ಖಂಡಿಸಲಾಯಿತು.
ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಕೇಂದ್ರದ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ, ರೈತರ ಬದುಕನ್ನು ಮೂರಾಬಟ್ಟೆ ಮಾಡಲು ಹೊರಟಿವೆ. ಬಂಡವಾಳ ಶಾಹಿಗಳ ಕೈಗೊಂಬೆಯಾಗಿವೆ ಎಂದು ಆರೋಪಿಸಿದರು.
ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಯುವತಿಯ ಶವವನ್ನು ಪೊಲೀಸರು ರಾತ್ರೋರಾತ್ರಿ ಸುಟ್ಟು ಹಾಕಿ, ಅನ್ಯಾಯ ಮಾಡಿದ್ದು ಖಂಡನೀಯ ಎಂದರು.
‘ಯಾವತ್ತು ನಮ್ಮ ದೇಶದಲ್ಲಿ ಒಂಟಿ ಮಹಿಳೆ ನಿರ್ಭಯವಾಗಿ ಸಂಚರಿಸುತ್ತಾಳೋ ಅಂದೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ ಎಂಬ ಗಾಂಧಿ ಕಂಡ ಕನಸನ್ನು ಬಿಜೆಪಿ ನುಚ್ಚುನೂರಾಗಿಸಿದೆ ಎಂದರು.
ರಾಷ್ಟ್ರಪತಿ ತಕ್ಷಣ ಉತ್ತರಪ್ರದೇಶ ಸರ್ಕಾರವನ್ನು ವಜಾಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷಿಸಬೇಕು ಹಾಗೂ ಯುವತಿ ಮೇಲೆ ಅತ್ಯಾಚಾರವೆಸಗಿ, ಕೊಲೆಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಅಬ್ದುಲ್ ಖಾದರ್ ಖಾದಿಂ, ಜ್ಯೋತಿರಾಮ ಪವಾರ, ವಿದ್ಯಾರಾಣಿ ತುಂಗಳ, ಡಿ.ಎಚ್.ಕಲಾಲ, ವೈಜನಾಥ ಕರ್ಪೂರಮಠ, ಶಬ್ಬೀರ ಜಾಗೀರದಾರ, ಚಾಂದಸಾಬ ಗಡಗಲಾವ, ಜಮೀರ್ ಬಕ್ಷಿ, ಆರತಿ ಶಹಾಪೂರ, ಶಹಜಹಾನ ದುಮಸಿ, ಜಯಶ್ರೀ ಭಾರತೆ, ವಿನೋದ ವ್ಯಾಸ, ಪೀರಪ್ಪ ನಡುವಿನಮನಿ, ಜಮೀರ್ಅಹ್ಮದ್ ಬಾಗಲಕೋಟ, ಸಂತ ಹೊನಮೊಡೆ, ಅನ್ನಪೂರ್ಣ ಬೀಳಗೀಕರ, ಮಂಜುಳಾ ಗಾಯಕವಾಡ, ಮಂಜುಳಾ ಜಾಧವ, ಆಶೀಮಾ ಕಾಲೇಬಾಗ, ಕುಸುಮಾ ಪವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.