ADVERTISEMENT

‘ಭೀಮಾತೀರ’: ಮಹಾದೇವ ಬೈರಗೊಂಡ ಕೊಲೆ ಯತ್ನ ಆರೋಪಿಗಳು ಶರಣಾಗತಿ– ಎಸ್‌ಪಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 2:33 IST
Last Updated 3 ಆಗಸ್ಟ್ 2022, 2:33 IST
ಎಚ್‌.ಡಿ.ಆನಂದಕುಮಾರ್‌
ಎಚ್‌.ಡಿ.ಆನಂದಕುಮಾರ್‌   

ವಿಜಯಪುರ: ‘ಭೀಮಾ ತೀರದ ಹಂತಕ’ ಕುಖ್ಯಾತಿಯ ಮಲ್ಲಿಕಾರ್ಜುನ ಚಡಚಣ ಪತ್ನಿ ವಿಮಾಲಾಬಾಯಿ ಚಡಚಣ(58) ಮತ್ತು ಸಹಚರ ಸೋನಿಯ ರಾಠೋಡ ಮಂಗಳವಾರ ವಿಜಯಪುರ ಜಿಲ್ಲಾ ಸೆಷನ್ಸ್‌ ಕೋರ್ಟ್‌ಗೆ ಶರಣಾಗಿದ್ದಾರೆ.

ಶರಣಾಗಿರುವ ವಿಮಾಲಾಬಾಯಿ(ಧರ್ಮರಾಜ ಚಡಚಣ ತಾಯಿ) ಮತ್ತು ಸಹಚರ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆಗಾಗಿ ಜಿಲ್ಲಾ ಪೊಲೀಸರು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಮಹಾದೇವ ಬೈರಗೊಂಡ(ಸಾಹುಕಾರ) ಮೇಲೆ ನಡೆದ ಕೊಲೆ ಯತ್ನ ಪ್ರಕರಣ ಸೇರಿದಂತೆ ಎಂಟಕ್ಕೂ ಅಧಿಕ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮಲ್ಲಿಕಾರ್ಜುನ ಚಡಚಣ ತಂಡದ ಪತ್ತೆಗಾಗಿ ಪೊಲೀಸರ ಎರಡು ತಂಡಗಳು ಪುಣೆಯಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಅಲ್ಲದೇ, ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅಂತಿಮ ಸಿದ್ಧತೆ ನಡೆಸಲಾಗಿತ್ತು. ಈ ಭಯದಿಂದ ಕೋರ್ಟ್‌ಗೆ ಶರಣಾಗಿದ್ದಾರೆ ಎಂದು ತಿಳಿಸಿದರು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ 40 ಜನ ಆರೋಪಿಗಳಲ್ಲಿ ಇದುವರೆಗೆ 38 ಜನರನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿ ಮಲ್ಲಿಕಾರ್ಜುನ ಚಡಚಣ ಮತ್ತು ಆತನಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಸಹಚರ ಸಿಂಗ್‌ ಎಂಬಾತ ತಲೆ ಮರೆಸಿಕೊಂಡಿದ್ದು,ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.