
ವಿಜಯಪುರ: ಮೆಕ್ಕೆಜೋಳ ಖರೀದಿಗೆ ವಿಧಿಸಿದ ಮಾನದಂಡ ಹಾಗೂ ಅಸಮರ್ಪಕ ನಿಯಮಾವಳಿಗಳನ್ನು ರದ್ದುಪಡಿಸಿ ಆಯಾ ಜಿಲ್ಲೆಗಳಲ್ಲಿಯೇ ಖರೀದಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮಾನದಂಡಗಳನ್ನು ವಿಧಿಸುವ ಮೂಲಕ ಸರ್ಕಾರ ರೈತರ ಬದುಕನ್ನು ಬೀದಿಗೆ ತರಲು ಹೊರಟಿದೆ. ಆಯಾ ಜಿಲ್ಲಾ ವ್ಯಾಪ್ತಿಯ ಪ್ರತಿಯೊಂದು ಪಿಕೆಪಿಎಸ್ನಲ್ಲಿಯೇ ಮೆಕ್ಕೆಜೋಳ ಖರೀದಿಸುವುದನ್ನು ಬಿಟ್ಟು ಧಾರವಾಡದಲ್ಲಿ ಖರೀದಿಸಲು ಸರ್ಕಾರ ನಿರ್ಧರಿಸುವುದು ರೈತ ವಿರೋಧಿಯಾಗಿದೆ ಎಂದರು.
ಮಾರಾಟ ಮಾಡುವ ಮೊದಲು ರೈತರಿಂದ ಮೆಕ್ಕೆಜೋಳ ಮಾದರಿ ಪರಿಷ್ಕರಣೆಗಾಗಿ ಪ್ರತಿಯೊಬ್ಬ ರೈತನಿಂದ ಒಂದು ಕೆ.ಜಿ. ಮೆಕ್ಕೆಜೋಳವನ್ನು ಕೆಎಂಎಫ್ ಅಧಿಕಾರಿಗಳ ಮುಖಾಂತರ ಧಾರವಾಡಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷಿಸಿ ನಂತರ ಗುಣಮಟ್ಟದ ಮೆಕ್ಕೆಜೋಳ ಇವೆ ಎಂದು ತಿಳಿದಾಗ ಮಾತ್ರ ರೈತರಿಂದ ಖರೀದಿಸಲು ಸರ್ಕಾರ ತೀರ್ಮಾನಿಸಿರುವುದು ಅವೈಜ್ಞಾನಿಕ ಕ್ರಮ ಎಂದು ದೂರಿದರು.
ರೈತರು ಬೆಳೆದ ಎಲ್ಲ ಮೆಕ್ಕೆಜೋಳವನ್ನು ಖರೀದಿಸಲು ಸರ್ಕಾರ ಮಂದಾಗಬೇಕು ಎಂದು ಒತ್ತಾಯಿಸಿದರು.
ಸದಾಶಿವ ಬಟರಗಿ, ಹೊನ್ನಪ್ಪ ಗೋಟ್ಯಾಳ, ಶಿವು ಬಿರಾದಾರ, ಲಕ್ಷ್ಮಣ ಕುಂಬಾರ, ಜಗನ್ನಾಥ ಮಸರಕಲ್ಲ, ಶಿವರಾಜ ಡೋರಗಿಹಳ್ಳಿ, ಗುರು ಕೋಟ್ಯಾಳ, ಮಲ್ಲು ಕೊಕಟನೂರ, ಪ್ರಹ್ಲಾದ ನಾಗರಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.