ADVERTISEMENT

ವಿಜಯಪುರ | ಬೀನ್ಸ್, ಹೀರೇಕಾಯಿ ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 15:00 IST
Last Updated 15 ಆಗಸ್ಟ್ 2019, 15:00 IST
ವಿಜಯಪುರದ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರೊಬ್ಬರು ಗುರುವಾರ ತರಕಾರಿ ಖರೀದಿಸಿದರು
ವಿಜಯಪುರದ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರೊಬ್ಬರು ಗುರುವಾರ ತರಕಾರಿ ಖರೀದಿಸಿದರು   

ವಿಜಯಪುರ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ತರಕಾರಿ ದರ ಯಥಾಸ್ಥಿತಿ ಇದೆ. ಆದರೆ, ಬೀನ್ಸ್ ಮತ್ತು ಹೀರೇಕಾಯಿ ದರದಲ್ಲಿ ಏರಿಕೆಯಾಗಿದೆ.

ಕೆ.ಜಿ ಟೊಮೆಟೊ ₹15, ಮೆಣಸಿನಕಾಯಿ ₹30, ಹೀರೇಕಾಯಿ ₹40, ಬೀನ್ಸ್ ₹60, ದೊಣ್ಣೆ ಮೆಣಸಿನಕಾಯಿ ₹40, ಈರುಳ್ಳಿ ₹25, ಫ್ಲಾವರ್ ₹30, ಕ್ಯಾಬೇಜ್ ₹30 ದರ ಇದೆ.

ವಾರದ ಹಿಂದಿನ ದರಕ್ಕೆ ಹೋಲಿಸಿದರೆ ಈ ವಾರ ಯಥಾಸ್ಥಿತಿ ಇದೆ. ಆದರೆ, ಟೊಮೆಟೊ ದರದಲ್ಲಿ ಇಳಿಕೆಯಾಗಿದೆ. ಟೊಮೆಟೊ ಕೆ.ಜಿಗೆ ₹40 ದರ ಇತ್ತು. ಈಗ ₹15ಕ್ಕೆ ಇಳಿಕೆಯಾಗಿದೆ. ಸೊಪ್ಪಿನ ದರದಲ್ಲೂ ವ್ಯತ್ಯಾಸವಾಗಿಲ್ಲ. ಕೊತ್ತಂಬರಿ, ಪಾಲಕ್, ಮೆಂತೆ, ಸಬ್ಬಸಗಿ, ಕರಿಬೇವು ಸೇರಿದಂತೆ ಎಲ್ಲಾ ಸೊಪ್ಪುಗಳ 4 ಕಂತೆಗೆ ₹10 ದರವಿದೆ.

ADVERTISEMENT

‘ಶ್ರಾವಣ ಮಾಸದಲ್ಲಿ ತರಕಾರಿ ದರ ಇಳಿಕೆಯಾಗಬೇಕು. ಆದರೆ, ಆಗಿಲ್ಲ. ಪ್ರತಿ ವರ್ಷ ಶ್ರಾವಣ ಮಾಸಕ್ಕೆ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿತ್ತು. ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದೆ. ಅಲ್ಲದೆ, ಪ್ರವಾಹ ಬಂದು ನೀರು ನುಗ್ಗಿದ್ದರಿಂದ ತರಕಾರಿ ಫಸಲು ಹಾಳಾಗಿದೆ. ಹೀಗಾಗಿ ತರಕಾರಿ ದರ ಯಥಾಸ್ಥಿತಿ ಇದ್ದು, ಕೆಲವು ತರಕಾರಿಗಳ ಬೆಲೆ ಮಾತ್ರ ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಮಲ್ಲಮ್ಮ ಹೂಗಾರ ಹೇಳಿದರು.

‘ಮಾರುಕಟ್ಟೆಯಲ್ಲಿ ಬದನೆಕಾಯಿ ಸಿಗುತ್ತಿಲ್ಲ. ಕೆ.ಜಿಗೆ ಬದನೆಕಾಯಿಗೆ ₹40 ದರ ಇದೆ. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುವುದರಿಂದ ತರಕಾರಿ ಖರೀದಿಸಲೇಬೇಕು. ಬೆಲೆ ಏರಿಕೆಯಾಗಿದ್ದರೂ ಖರೀದಿ ಅನಿವಾರ್ಯ’ ಎಂದು ಗ್ರಾಹಕ ಬಸವರಾಜ ಭತಗುಣಕಿ ಹೇಳಿದರು.

‘ಮಳೆ ಆಗದ್ದರಿಂದ ದರ ಇಳಿಕೆಯಾಗಿಲ್ಲ. ಮಾರುಕಟ್ಟೆಯಲ್ಲಿ ದುಡ್ಡು ಕೊಟ್ಟರೂ ಅಗತ್ಯದಷ್ಟು ತರಕಾರಿ ಸಿಗುತ್ತಿಲ್ಲ’ ಎಂದು ಶಾಪೇಟೆಯ ವ್ಯಾಪಾರಿ ಈರಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.