ADVERTISEMENT

ಸಾಮಾಜಿಕ ಮೌಲ್ಯ ಪಾಲನೆ ಅಗತ್ಯ: ಮಾತಾ ಕೈವಲ್ಯಮಯಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 13:47 IST
Last Updated 3 ಡಿಸೆಂಬರ್ 2021, 13:47 IST
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ   

ಸತ್ಯಪ್ರಿಯತೆ, ನ್ಯಾಯ ಪರತೆ, ಪರೋಪಕಾರ ಬುದ್ಧಿ, ಆತ್ಮಸಂಯಮ ಈ ಗುಣಗಳನ್ನು ಎಲ್ಲ ಧರ್ಮ ಬೋಧಕರೂ ಕೊಂಡಾಡುತ್ತಾರೆ. ಎಲ್ಲ ಧರ್ಮಗ್ರಂಥಗಳೂ ಬೋಧಿಸುತ್ತವೆ. ಧರ್ಮಗಳೇ ಏಕೆ? ಕೌಟುಂಬಿಕ, ಸಾಂಘಿಕ, ಸಾಮಾಜಿಕ ಹಿತ ಚಿಂತನೆ ಮಾಡುವ ಯಾವನೂ, ಬುದ್ಧಿ ಎನ್ನುವ ವಿವೇಚನಾಶಕ್ತಿ ಇರುವವನೂ ಈ ಗುಣಗಳನ್ನು ಮೂಢನಂಬಿಕೆ ಎನ್ನಲಾರ. ಯಾವ ವಿಚಾರವಾದಿ ನಾಸ್ತಿಕನೂ, ವೈಜ್ಞಾನಿಕ ಮನೋವೃತ್ತಿಯವನೂ ಮೇಲಿನ ಸದ್ಗುಣಗಳನ್ನು ವಿರೋಧಿಸಲಾರ.

ವ್ಯಕ್ತಿಯ ಅಭ್ಯುದಯ, ಸಮಾಜದ ಕಲ್ಯಾಣ ಎಂಬ ಎರಡು ಫಲಗಳನ್ನು ನೀಡುವ, ಅನುಷ್ಠಾನ ಯೋಗ್ಯವಾದ ಮುಖ್ಯ ನಿಯಮಗಳು ಯೋಗಶಾಸ್ತ್ರದಲ್ಲಿ ಯಮ, ನಿಯಮಗಳೆಂದು ಕರೆಯಲ್ಪಡುವ ಈ ಹತ್ತು ಸದ್ಗುಣಗಳು ಅಥವಾ ಮೌಲ್ಯಗಳು. ತಾನು ಚೆನ್ನಾಗಿ ಬದುಕಿ ಇತರರನ್ನು ಚೆನ್ನಾಗಿ ಬದುಕಗೊಡುವ, ಇತರರ ಸ್ವಾತಂತ್ರ್ಯ ಹಾಗೂ ಬೆಳವಣಿಗೆಗೆ ಮಾರಕವಾಗದಂತೆ ನಡೆದುಕೊಳ್ಳುವ ಸಂಸ್ಕಾರ ಈ ಗುಣಗಳ ಬೆಳವಣಿಗೆಯಿಂದ ಸಾಧ್ಯವಾಗುವುದು.

ಆದ್ದರಿಂದ ಈ ಗುಣಗಳನ್ನು ಸಾಮಾಜಿಕ ಮೌಲ್ಯಗಳು ಎನ್ನಬಹುದು. ಮನಸ್ಸು, ಮಾತು, ಕೃತಿಗಳಿಂದ ಯಾರಿಗೂ ಕೇಡನ್ನು ಬಯಸದೇ ಎಲ್ಲರೆಡೆಗೂ ಶುಭ ಚಿಂತನೆಯನ್ನು ಹರಿಯಬಿಡುವ ಮನೋವೃತ್ತಿಯೇ ಅಹಿಂಸೆ. ಅಂತೆಯೇ ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಪರರ ವಸ್ತುಗಳನ್ನು ಬಯಸದೇ ಇರುವ ಗುಣ ಮುಂತಾದ ಗುಣಗಳು. ಬೇರೆ ಬೇರೆ ವ್ಯಕ್ತಿಗಳ ಸಾಂಘಿಕ ಜೀವನದ ಸುವ್ಯವಸ್ಥೆಗೆ ಇವುಗಳ ಪಾಲನೆ ಅತ್ಯಗತ್ಯ.

- ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.