ADVERTISEMENT

ತಿಕೋಟಾ| ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ: ಸಚಿವ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:50 IST
Last Updated 23 ನವೆಂಬರ್ 2025, 6:50 IST
ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ತಾಂಡಾದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು 
ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ತಾಂಡಾದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು    

ತಿಕೋಟಾ: ಸೋಮದೇವರಹಟ್ಟಿ ತಾಂಡಾ ದುರ್ಗಾದೇವಿ ಮಂದಿರ ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಒಂದು ಎಂಬ ಖ್ಯಾತಿ ಗಳಿಸಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ತಾಲ್ಲೂಕಿನ‌ ಸೋಮದೇವರಹಟ್ಟಿ ತಾಂಡಾದಲ್ಲಿ ಶುಕ್ರವಾರ ಮಹಾದ್ವಾರದಿಂದ ದೇವಸ್ಥಾನದ ವರೆಗೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ₹50 ಲಕ್ಷ ಅನುದಾನದಲ್ಲಿ ಕೈಗೊಳ್ಳಲಿರುವ ಸಿ.ಸಿ ರಸ್ತೆ ನಿರ್ಮಾಣಕ್ಕೆ ಚಾಲನೆ, ಅರವಿಂದ ನಾಯಿಕರವರ ಮನೆಯಿಂದ ಹೀರು ವೇಣು ರಾಠೋಡರ ಮನೆವರೆಗಿನ ಮಾರ್ಗಕ್ಕೆ ₹20 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ, ದೇವಸ್ಥಾನದ ಸಮೀಪ ಪಿ.ಆರ್.ಇ.ಡಿ ನಿಧಿಯಲ್ಲಿ ₹11 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಯೊಜನೆಗೆ ಚಾಲನೆ ಹಾಗೂ ₹5 ಲಕ್ಷ ವೆಚ್ಚದ ಹೈಮಾಸ್ಟ್‌ ದೀಪ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವಸ್ಥಾನದ ಜಗನು ಮಹಾರಾಜರು ಸೋಮದೇವರಹಟ್ಟಿ ತಾಂಡಾದಲ್ಲಿರುವ ದುರ್ಗಾದೇವಿ ದೇವಸ್ಥಾನವನ್ನು ಇಡೀ ದೇಶಕ್ಕೆ ಪರಿಚಯಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಏಕಾಂಗಿ ಸೈನಿಕ ಮತ್ತು ಸೇನಾಧಿಕಾರಿ(ಒನ್ ಮ್ಯಾನ್ ಆರ್ಮಿ) ರೀತಿಯಲ್ಲಿ ಶ್ರಮಿಸಿದ್ದಾರೆ. ₹75 ಲಕ್ಷ ವೆಚ್ಚದ ಅನುದಾನದಲ್ಲಿ ಮಂಟಪವನ್ನು ನಿರ್ಮಿಸಿದ್ದಾರೆ. ರಾಮರಾವ ಮಹಾರಾಜರ ಮಾದರಿಯಲ್ಲಿ‌ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರ ಇನ್ನೂ ಶೇ 100ರಷ್ಟು ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.

ADVERTISEMENT

ಮುಖಂಡ ಬಾಬುರಾಜೇಂದ್ರ ನಾಯಕ‌ ಮಾತನಾಡಿ, ಸಚಿವ ಎಂ.ಬಿ. ಪಾಟೀಲರ ನೀರಾವರಿ ಮತ್ತಿತರ ಅಭಿವೃದ್ಧಿ ಕೆಲಸಗಳಿಂದ ತಾಂಡಾಗಳ ಜನ ಗುಳೆ ಹೋಗುವುದು ತಪ್ಪಿದೆ. ಜೋಳ ಬೆಳೆಯದ ಹೊಲದಲ್ಲಿ ದ್ರಾಕ್ಷಿ ಬೆಳೆಯುವಂತಾಗಿದೆ. ಜಿಲ್ಲೆಗೆ ಕೈಗಾರಿಕೆಗಳನ್ನು ತರುತ್ತಿದ್ದಾರೆ. ಸಿ.ಎಸ್.ಆರ್ ಅನುದಾನ ಬಳಸಿ ಶಾಲೆಗಳ ಅಭಿವೃದ್ಧಿ ಮಾಡುತ್ತಿದ್ದಾರೆ. ಸೋಮದೇವರಹಟ್ಟಿ‌ ತಾಂಡಾಕ್ಕೆ ದ್ವಿಪಥ ರಸ್ತೆ ಮಾಡಿಸುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುಂಚೆ ಗ್ರಾಮಕ್ಕೆ ಆಗಮಿಸಿದ ಸಚಿವ ಎಂ.ಬಿ. ಪಾಟೀಲ ಅವರನ್ನು ತಾಂಡಾದ ಜನತೆ ಡೊಳ್ಳು ಬಾರಿಸುತ್ತ ಪಟಾಕಿ ಸಿಡಿಸಿ ಸ್ವಾಗತಿಸಿದರು. ಸಚಿವರು ದೇವಸ್ಥಾನಕ್ಕೆ ತೆರಳಿ ಮಾತಾ ದುರ್ಗಾದೇವಿಯ ಆಶೀರ್ವಾದ ಪಡೆದರು.

ಮುಖಂಡರಾದ ಜಗನು ಮಹಾರಾಜ, ತಾಲ್ಲೂಕು ಪಂಚಾಯಿತಿ ಇಒ ಬಸವಂತರಾಯಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಗುರು ಮಾಳಿ, ಸುರೇಶ ಪವಾರ, ಭೀಮು ರಾಥೋಡ, ಅರವಿಂದ್ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.