ವಿಜಯಪುರ: ದೂರದ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ನೋಡಲು ಸಾಧ್ಯವಾಗದೇ ಅಸಹಾಯಕರಾಗಿದ್ದ ನಗರದ ವೈದ್ಯ ವಿದ್ಯಾರ್ಥಿನಿ ವಸುಂಧರಾ ಚಕ್ರವರ್ತಿ ಅವರಿಗೆ ಜಿಲ್ಲಾಡಳಿತದ ಮೂಲಕ ತುರ್ತು ಪಾಸ್ ಒದಗಿಸಿ, ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಮಾನವೀಯತೆ ಮೆರೆದಿದೆ.
ವಸುಂಧರಾ ಎಂ.ಬಿ.ಬಿ.ಎಸ್ ಮುಗಿಸಿ, ಒಂದು ವರ್ಷದ ಇಂಟರ್ನ್ ಶಿಫ್ ಅನ್ನು ಮಾರ್ಚ್ 21ಕ್ಕೆ ಪೂರ್ಣಗೊಳಿಸಿದ್ದರು. ಬಳಿಕ ತಮ್ಮ ಊರಾದ ಕೊಲ್ಕತ್ತಾ ಸಮೀಪದ ಬರಸಾಥ್ ಗ್ರಾಮಕ್ಕೆ ತೆರಳುವ ಸಮಯದಲ್ಲಿ ಕೊರೊನಾ ಲಾಕ್ಡೌನ್ ಘೋಷಣೆಯಾಯಿತು. ಅನಿವಾರ್ಯವಾಗಿ ಇಲ್ಲಿಯೇ ಉಳಿಯುವಂತಾಗಿತ್ತು.
ಈ ನಡುವೆ ಅವರ ತಂದೆ ಭೀಮು ಪ್ರಸಾದ ಅನಾರೋಗ್ಯದಿಂದ ಆಸ್ಪತ್ರೆ ಸೇರಿ ಚಿಂತಾಜನಕ ಸ್ಥಿತಿಯಲ್ಲಿರುವ ಸುದ್ದಿ ತಿಳಿದು, ಗಾಬರಿಯಾಗಿದ್ದರು. ವಿಷಯ ತಿಳಿದ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ್ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತಂದು, ಪಾಸ್ ಕಲ್ಪಿಸಿದರು. ಇದರಿಂದ ವಿದ್ಯಾರ್ಥಿನಿ ಶುಕ್ರವಾರ ತಮ್ಮ ಊರಿಗೆ ಸುರಕ್ಷಿತವಾಗಿ ತೆರಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.