ADVERTISEMENT

ಸ್ಥಳೀಯ ಸಂಸ್ಥೆಗಳ ಸದಸ್ಯರೇ ನನ್ನ ಕಾರ್ಯಪಡೆ: ಮಲ್ಲಿಕಾರ್ಜುನ ಎಸ್.ಲೋಣಿ

ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಎಸ್.ಲೋಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 15:06 IST
Last Updated 3 ಡಿಸೆಂಬರ್ 2021, 15:06 IST
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಂಗಡಗೇರಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ  ಸ್ವಾಭಿಮಾನಿ ಸದಸ್ಯರ ಸಭೆ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಂಗಡಗೇರಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ  ಸ್ವಾಭಿಮಾನಿ ಸದಸ್ಯರ ಸಭೆ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು   

ಕೊಲ್ಹಾರ: ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರ ಸ್ವಾಭಿಮಾನದ ಪ್ರತೀಕವಾಗಿ ಸ್ಪರ್ಧಿಸಿದ್ದೇನೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪಕ್ಷದ ಕಾರ್ಯಕರ್ತರ ಪಡೆ ಹಾಗೂ ಆಡಳಿತಯಂತ್ರದ ಶ್ರೀರಕ್ಷೆಯಿದ್ದರೆ ನನಗೆ ಸ್ಥಳೀಯ ಸಂಸ್ಥೆಗಳ ಸ್ವಾಭಿಮಾನಿ ಸದಸ್ಯರೇ ನನ್ನ ಕಾರ್ಯಪಡೆ ಹಾಗೂ ಶ್ರೀರಕ್ಷೆಯಾಗಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಎಸ್.ಲೋಣಿ ಹೇಳಿದರು.

ಸಮೀಪದ ಅಂಗಡಗೇರಿಯ ಪವಾಡ ಬಸವೇಶ್ವರ ಮಠದಲ್ಲಿ ಶುಕ್ರವಾರ ಬಸವನ ಬಾಗೇವಾಡಿ ಮತಕ್ಷೇತ್ರದ ಬಾಗೇವಾಡಿ, ಕೊಲ್ಹಾರ ಹಾಗೂ ನಿಡಗುಂದಿ ತಾಲ್ಲೂಕುಗಳ ಸ್ಥಳೀಯ ಸಂಸ್ಥೆಗಳ ‘ಸ್ವಾಭಿಮಾನಿ ಸದಸ್ಯರ ಸಭೆ’ಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಒಳ ಒಪ್ಪಂದ ಮಾಡಿಕೊಂಡು ಸ್ಥಳೀಯ ಸಂಸ್ಥೆಗಳ ಸದಸ್ಯರ ಮತದಾನ ಹಕ್ಕನ್ನು ಮೊಟಕುಗೊಳಿಸಿ ಅವಿರೋಧವಾಗಿ ಆಯ್ಕೆಯಾಗುವ ಹುನ್ನಾರ ನಡೆಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ನನಗೆ ಎರಡೂ ರಾಷ್ಟ್ರೀಯ ಪಕ್ಷಗಳ ಹಿರಿಯ ಮುಖಂಡರಿಂದ ಸಾಕಷ್ಟು ಒತ್ತಡ, ಆಸೆ, ಆಮಿಷಗಳು ಬಂದರೂ ಯಾವುದಕ್ಕೂ ಬಗ್ಗದೇ ಸ್ಥಳೀಯ ಸಂಸ್ಥೆಗಳ ಸ್ವಾಭಿಮಾನದ ಪ್ರತೀಕವಾದ ಸಂವಿಧಾನಬದ್ದವಾಗಿ ಬಂದಿರುವ ಮತದಾನ ಹಕ್ಕನ್ನು ದೊರಕಿಸಿಕೊಡುವ ಸದುದ್ದೇಶದಿಂದ ಕಣದಲ್ಲಿದ್ದೇನೆ ಎಂದರು.

ADVERTISEMENT

ಚಿಂತಕರ ಚಾವಡಿಯಂದೇ ಗೌರವಿಸಲ್ಪಡುವ ವಿಧಾನ ಪರಿಷತ್‌ ಹಾಗೂ ಅದರ ಘನತೆಯ ಗಂಧಗಾಳಿಯೂ ಗೊತ್ತಿಲ್ಲದಂತವರು ಒಂದು ರಾಷ್ಡ್ರೀಯ ಪಕ್ಷದ ಅಭ್ಯರ್ಥಿಯಾಗಿದ್ದಾರೆ ಎಂದರು.

ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸ್ವಾಭಿಮಾನಿ ಸದಸ್ಯರು ಮತದಾನ ದಿನಂದು ಕ್ರಮ ಸಂಖ್ಯೆ 6ಕ್ಕೆ ತಮ್ಮ ಪ್ರಥಮ ಪ್ರಾಶಸ್ತ್ಯ ಮತ ನೀಡುವ ಮೂಲಕ ಹಣ ಹಾಗೂ ಅಧಿಕಾರ ದರ್ಪದಿಂದ ಮಾತ್ರ ರಾಜಕಾರಣ ಸಾಧ್ಯ ಎಂಬ ಭ್ರಮೆಯಲ್ಲಿರುವವರಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಪಕ್ಷಾತೀತ ಬೆಂಬಲ:

ಲೋಣಿ ಅವರು ಚುನಾಯಿತರಾದರೆ ಪರಿಷತ್ತಿಗೆ ಗೌರವ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಬಲ ಬರುತ್ತದೆ. ಲೋಣಿಯವರಿಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕುವ ಮೂಲಕ ನಮ್ಮ ಸ್ವಾಭಿಮಾನ ಎತ್ತಿಹಿಡಿಯುತ್ತೇವೆ ಎಂದು ತಳೇವಾಡ ಗ್ರಾ.ಪಂ ಸದಸ್ಯ ಮಲ್ಲಿಕಾರ್ಜುನ ಕುಂಬಾರ, ಮುತ್ತಗಿ ಗ್ರಾ.ಪಂ ಉಪಾಧ್ಯಕ್ಷ ಕನಕಪ್ಪ ಬಂಡಿವಡ್ಡರ, ಹಣಮಾಪುರ ಗ್ರಾ.ಪಂ ಸದಸ್ಯ ಮಹೇಶ ತೋಟಗೇರ, ನರಸಲಗಿ ಗ್ರಾ.ಪಂ ಸದಸ್ಯ ನಾಮದೇವ ರಾಠೋಡ, ಮಸೂತಿ ಗ್ರಾ.ಪಂ ಅಧ್ಯಕ್ಷ ಸಂತೋಷ ಗಣಾಚಾರಿ ಹಾಗೂ ಕೂಡಗಿ ಗ್ರಾ.ಪಂ ಸದಸ್ಯೆ ಕಾಶಿಬಾಯಿ ಉಳ್ಳಾಗಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.