ವಿಜಯಪುರ: ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಅಕ್ಟೋಬರ್29 ರಿಂದ ಜನವರಿ 15 ರ ವರೆಗೆ ನಡೆಯಲಿರುವ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಜನಜಾಗೃತಿ ಮತ್ತು ಶ್ರೀಕ್ಷೇತ್ರ ಯಡೂರದಿಂದ ಶ್ರೀಕ್ಷೇತ್ರ ಶ್ರೀಶೈಲದವರೆಗೆ ನಡೆಯುವ 650 ಕಿ.ಮೀ ಪಾದಯಾತ್ರೆ ಕಾರ್ಯಕ್ರಮದ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷರನ್ನಾಗಿ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಗಿದೆ.
ದಾವಣಗೆರೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಶಾಸಕ ನಡಹಳ್ಳಿ ಅವರನ್ನು ನೇಮಕ ಮಾಡಿದ ಶ್ರೀಕ್ಷೇತ್ರ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಶಾಲು ಹೊದಿಸಿ, ಫಲಪುಷ್ಪ ನೀಡಿ ಆಶೀರ್ವದಿಸಿದರು.
ಜವಾಬ್ಧಾರಿ ಸ್ವೀಕರಿಸಿ ಮಾತನಾಡಿದ ನಡಹಳ್ಳಿ, ಪೂಜ್ಯರು ವಹಿಸಿದ ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ. ವೀರಶೈವ ಲಿಂಗಾಯತ ಸಮಾಜದ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಮತ್ತು ಎಲ್ಲ ಮಠಾಧೀಶರ, ಸಮಾಜದ ಬಂಧುಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ ಎಂದರು.
ಕೇವಲ ಪಲ್ಲಕ್ಕಿ ಉತ್ಸವ ಮಾತ್ರವಲ್ಲ, ಜನಕಲ್ಯಾಣಕ್ಕಾಗಿ ಪಂಚ ಪೀಠಾಧೀಶರು ಪಾದಯಾತ್ರೆಯನ್ನೂ ಮಾಡ್ತಾರೆ ಅನ್ನುವುದು ಈ ಕಾರ್ಯಕ್ರಮದಿಂದ ಪ್ರಚುರವಾಗಲಿದೆ. ಈ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿಯಾಗಿ ನಿರ್ವಹಿಸುವುದಾಗಿ ವಾಗ್ದಾನ ಮಾಡಿದರು.
ವೀರಶೈವ ಮಠಗಳು, ಪರಂಪರೆ ಉಳಿದು ಬಂದಿದ್ದು ದಾಸೋಹ ಪದ್ಧತಿಯಿಂದ. ಪ್ರತಿಯೊಂದು ಮನೆಯಿಂದ ತಲಾ ಒಂದು ರೊಟ್ಟಿಯನ್ನು ದಾಸೋಹವಾಗಿ ಪಾದಯಾತ್ರೆಯೊಂದಿಗೆ ತರಬೇಕು. ಇದು ಒಂದು ಸಂದೇಶವಾಗಲಿ. ಮನೆಯ ತಾಯಿ ತನಗೆ ಬರಲಾಗದಿದ್ದರೂ ಮುಂಜಾನೆದ್ದು, ಸ್ನಾನ ಮಾಡಿ ಶುಚಿರ್ಭೂತಳಾಗಿ ಮಾಡಿದ ಮೊದಲ ರೊಟ್ಟಿಯನ್ನು ಜಗದ್ಗುರುಗಳ ಜೋಳಿಗೆಗೆ ಹಾಕಿದರೆ ಅದು ಕೃತಾರ್ಥವಾದಂತೆ ಎಂದು ಶಾಸಕರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.