ADVERTISEMENT

ಜಾತ್ರೆಗಳು ಏಕತೆ ಸಾರುವ ಮಹೋತ್ಸವಗಳು: ಶಾಸಕ ಯಶವಂತರಾಯಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:48 IST
Last Updated 14 ಫೆಬ್ರುವರಿ 2026, 7:48 IST
ಇಂಡಿ ತಾಲ್ಲೂಕಿನ ಬರಗುಡಿ ಗ್ರಾಮದಲ್ಲಿ ಶುಕ್ರವಾರ ಲಕ್ಷ್ಮಿ ದೇವಸ್ಥಾನದ ಕಳಸಾರೋಹಣದ ಅಂಗವಾಗಿ 501 ಮಹಿಳೆಯರು ಕುಂಭ ಹೊತ್ತು ಮೆರವಣಿಗೆ ಮಾಡಿದರು
ಇಂಡಿ ತಾಲ್ಲೂಕಿನ ಬರಗುಡಿ ಗ್ರಾಮದಲ್ಲಿ ಶುಕ್ರವಾರ ಲಕ್ಷ್ಮಿ ದೇವಸ್ಥಾನದ ಕಳಸಾರೋಹಣದ ಅಂಗವಾಗಿ 501 ಮಹಿಳೆಯರು ಕುಂಭ ಹೊತ್ತು ಮೆರವಣಿಗೆ ಮಾಡಿದರು   

ಇಂಡಿ: ‘ಜಾತ್ರಾ ಮಹೋತ್ಸವಗಳು ಧರ್ಮ, ಸಂಸ್ಕೃತಿ ಮತ್ತು ಭಕ್ತಿ ಭಾವ ಉಳಿಸಿ ಬೆಳೆಸುವ ಮಹತ್ವದ ಜಾತ್ರೆಗಳಾಗಿವೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ಬರಗುಡಿ ಗ್ರಾಮದ ಲಕ್ಷ್ಮೀದೇವಿ ಮಹಾದ್ವಾರದ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸಾವಿರಾರು ಭಕ್ತರು ಭಕ್ತಿ ಭಾವದಿಂದ ಪೂಜೆ, ಅಭಿಷೇಕ, ಹರಕೆ ಸಲ್ಲಿಸಿ ಸೇವೆ ಸಲ್ಲಿಸುತ್ತಾರೆ. ನಿಷ್ಠೆಯಿಂದ ಸೇವೆ ಮಾಡಿದರೆ ಜೀವನದಲ್ಲಿ ಶಾಂತಿ, ಸುಖ, ಸಮೃದ್ಧಿ ದೊರೆಯುವುದಲ್ಲದೆ, ಆತ್ಮಶಾಂತಿ ಮತ್ತು ಮೋಕ್ಷ ಪ್ರಾಪ್ತಿ ಲಭಿಸುತ್ತದೆ ಎಂಬ ಬಲವಾದ ನಂಬಿಕೆ ಇದೆ’ ಎಂದರು.

ADVERTISEMENT

‘ಲಕ್ಷ್ಮಿ ದೇವರ ಸನ್ನಿಧಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಭಕ್ತರಲ್ಲಿ ಧರ್ಮಭಾವನೆ, ಸತ್ಸಂಗ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತದೆ. ಜಾತ್ರೆಯು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ಭಕ್ತಿ ಸೇವಾ ಮನೋಭಾವ ಮತ್ತು ಸಾಮೂಹಿಕ ಏಕತೆ ಸಾರುವ ಮಹೋತ್ಸವವಾಗಿ ರೂಪಗೊಂಡಿವೆ’ ಎಂದರು.

ಬರಗುಡಿ ಅಮೋಘಸಿದ್ದನ ಮಠದ ಮದ್ದಾನಿ ಮಹಾರಾಜರು, ವಿರುಪಾಕ್ಷಯ್ಯ ವಸ್ತ್ರದ, ಧರ್ಮರಾಜ ಮುಜಗೊಂಡ,, ಲಕ್ಷಣ ನಾದ, ಮಲ್ಲಿಕಾರ್ಜುನ ಸೆಂಡಗೆ, ಆನಂದ ವಾಲಿಕಾರ, ಸಿ.ಪಿ.ವಗ್ಗರ ಮಾತನಾಡಿದರು.

501 ಮಹಿಳೆಯರಿಂದ ಕುಂಭ ಹೊತ್ತ ಮೆರವಣಿಗೆ, ಭೀಮಾನದಿಯಿಂದ ಎತ್ತಿನ ಗಾಡಿಯಲ್ಲಿ ಕಳಸ ಮೆರವಣಿಗೆ, ಅನ್ನ ಸಂತರ್ಪಣೆ ನಡೆಯಿತು. ವಿಠ್ಠಲ ಕಾಡಿಮಗೇರಿ, ಗೌರಿಶಂಕರ ಕಾಡಿಮಗೇರಿ, ಭೀಮಾಶಂಕರ ಜಮಾದಾರ, ನೀಲಕಂಠ ಕಾಡಿನಗೇರಿ, ಸುನೀಲ ಕ್ಷತ್ರಿ, ಭೂತಾಳಿ ಕೆಳಗಿನಮನಿ, ಸಿದ್ದು ಸೆಂಡಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.