ADVERTISEMENT

ಶಾಸಕ ಯತ್ನಾಳ ಸಾಚಾ ಅಲ್ಲ: ಅಪ್ಪು ಪಟ್ಟಣಶೆಟ್ಟಿ ತರಾಟೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 14:36 IST
Last Updated 25 ಆಗಸ್ಟ್ 2021, 14:36 IST
ಅಪ್ಪು ಪಟ್ಟಣಶೆಟ್ಟಿ
ಅಪ್ಪು ಪಟ್ಟಣಶೆಟ್ಟಿ   

ವಿಜಯಪುರ: ‘ನಾಡಿನ ಮಠಾಧೀಶರು, ಸಾಹಿತಿಗಳು, ಬುದ್ಧಿಜೀವಿಗಳಿಗಿಂತ ಯತ್ನಾಳ್ತಾವೇ ಶ್ರೇಷ್ಠ ಎಂದುಕೊಂಡಿದ್ದಾರೆ. ಇನ್ನೊಬ್ಬರ ಬಗ್ಗೆ ಹಗುರವಾಗಿ, ಅಗೌರವದಿಂದ ಮಾತನಾಡಬೇಡಿ. ನೀವೇನೂ ಸಾಚ ಅಲ್ಲ’ ಎಂದು ಬಿಜೆಪಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ತಮ್ಮದೇ ಪಕ್ಷದ ಶಾಸಕ ಬಸನಗೌಡಪಾಟೀಲ ಯತ್ನಾಳ ವಿರುದ್ಧ ಹರಿಹಾಯ್ದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಶಾಸಕರಾಗಿರುವ ಬಗ್ಗೆ ಹೆಮ್ಮೆ ಇರಬೇಕು, ಸೊಕ್ಕು ಇರಬಾರದು. ಜನ ಅವಕಾಶ ನೀಡಿದ್ದಾರೆ, ಅವಕಾಶ ಸಿಕ್ಕಾದ ಸರಿಯಾದ ಪಾಠ ಕಲಿಸುತ್ತಾರೆ ಎಂದರು ಎಚ್ಚರಿಕೆ ನೀಡಿದರು.

ಒಬ್ಬ ಶಾಸಕರನ್ನು ಆಯ್ಕೆ ಮಾಡಿಕೊಂಡು ಬರುವ ಸಾಮಾರ್ಥ್ಯ ನಿಮಗಿಲ್ಲ. ವಿಜಯಪುರದಲ್ಲಿ 10 ಮಂದಿ ಪಾಲಿಕೆ ಸದಸ್ಯರು ಸಹ ನಿಮ್ಮ ಜೊತೆಗಿಲ್ಲ.‌ ಬೇರೆಯವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ, ಆರೋಪ ಮಾಡಿ, ಟೀಕೆ ಮಾಡಿ ಜನರಿಗೆ ನೀವು ಪರಿಚಯವಾಗಿದ್ದೀರೇ ಹೊರತು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿ ಯಾರಿಗೂ ಪರಿಚಯ ಮಾಡಿಕೊಂಡಿಲ್ಲ ಎಂದು ಛೇಡಿಸಿದರು.

ADVERTISEMENT

ಜಿಲ್ಲೆಯ ಜನ ನಿಮಗೆ ಏಳು ಬಾರಿ ವೋಟ್ ಹಾಕಿದ್ದಾರೆ. ಜಿಲ್ಲೆಗೆ, ಕ್ಷೇತ್ರಕ್ಕೆ ನೀವು ಮಾಡುವ ಕೆಲಸ ಬಹಳ ಇದೆ. ಅದನ್ನು ಮೊದಲು ಮಾಡಿ. ಇನ್ನೂ 20 ವರ್ಷವಾದರೂ ನೀವು ಜನರ ಉಪಕಾರ ತೀರಿಸಲು ಆಗಲ್ಲ ಎಂದರು.

ರಾಜಕೀಯಕ್ಕಾಗಿ ಗುಂಡಿನ ಮಾತು:ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವಂತೆ ನಾನು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ ತಕ್ಷಣ ಗಾಬರಿಗೊಂಡ ನೀವು ಗಣೇಶೋತ್ಸವಕ್ಕೆ ಅವಕಾಶ ನೀಡದಿದ್ದರೆ ಗುಂಡು ಹೊಡೆಸಿಕೊಳ್ಳುವ ಮಾತನಾಡುತ್ತೀದ್ದೀರಿ ಎಂದು ಅಪ್ಪು ಪಟ್ಟಣ ಶೆಟ್ಟಿ ಆರೋಪಿಸಿದರು.

ನಗರ, ಜಿಲ್ಲೆಯಲ್ಲಿ ಎಷ್ಟು ವರ್ಷಗಳಿಂದ ಗಣೇಶೋತ್ಸವಕ್ಕೆ ನೆರವು, ಬೆಂಬಲ ನೀಡಿದ್ದೀರಿ? ಮೊದಲಿನಿಂದಲೂ ಗಣೇಶೋತ್ಸವದಿಂದ ದೂರ ಇದ್ದಾರೆ. ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಗಣೇಶೋತ್ಸವ ನೆನಪಾಗಿದೆಯೇ ನಿಮಗೆ ಎಂದು ಯತ್ನಾಳ ಅವರನ್ನು ಪ್ರಶ್ನಿಸಿದರು.

ಗಣೇಶೋತ್ಸವ ಆಚರಣೆಯ ಕ್ರೆಡಿಟ್ ತೆಗೆದುಕೊಳ್ಳಲು ಶಾಸಕ ಯತ್ನಾಳ ಗಣೇಶ ಪ್ರತಿಷ್ಠಾಪನೆಗೆ ಹಣ ನೀಡುತ್ತಿದ್ದಾರೆ. ಅವಕಾಶ ನೀಡದಿದ್ದರೆ ಗುಂಡು ಹಾಕಿ ಎಂದು ಪ್ರಚೋಧನಾಕಾರಿಯಾಗಿ ಮಾತನಾಡುತ್ತಿರುವುದು ಖಂಡನೀಯ ಎಂದರು.

***

‘ಗಣೇಶೋತ್ಸವ ಸಿದ್ಧತೆ ಮಾಡಿಕೊಳ್ಳಿ’

ವಿಜಯಪುರ: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ, ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಅವಕಾಶ ಸಿಗುವ ವಿಶ್ವಾಸ ಇದೆ. ಆದರೆ, ಈ ವರೆಗೆ ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ ಎಂದು ಗಣೇಶೋತ್ಸವ ಮಹಾಮಂಡಳಿ ಅಧ್ಯಕ್ಷ ಅಪ್ಪು ಪಟ್ಟಣಶೆಟ್ಟಿ ಹೇಳಿದರು.

ಸಾರ್ವಜನಿಕ ಗಣೇಶೋತ್ಸವಕ್ಕೆ ಕೇವಲ 10 ದಿನ ಮಾತ್ರ ಇದೆ. ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಅವರು ನಗರ, ಜಿಲ್ಲೆಯ ಸಂಘ, ಸಂಸ್ಥೆಗಳನ್ನು ಕೋರಿದರು.

ರಾಜ್ಯದಲ್ಲಿ ಕೋವಿಡ್‌ ಕಡಿಮೆಯಾಗಿದೆ ರಾಜಕೀಯ ಸಭೆ, ಸಮಾರಂಭ ನಡೆಯುತ್ತಿವೆ. ನೆರೆಯ ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಿದ್ದಾರೆ. ನಮ್ಮ ಸರ್ಕಾರ ಕೂಡ ಅವಕಾಶ ಕಲ್ಪಿಸಬೇಕು.‌ ಅವಕಾಶ ಕೊಡುವ ವಿಶ್ವಾಸ ಇದೆ ಎಂದರು.

ಸಾಮಾಜಿಕ ಕಳಕಳಿ, ಧಾರ್ಮಿಕ ಆಚರಣೆ, ಯುವ ಸಮುದಾಯದ ಸಂಘಟನೆಯ ಉದ್ದೇಶದಿಂದ ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವವನ್ನು ಮಾದರಿಯಾಗಿ ಆಚರಿಸಲು ಒತ್ತು ನೀಡುತ್ತಿದ್ದೇವೆಯೇ ಹೊರತು ರಾಜಕಾರಣಕ್ಕಾಗಿ ಅಲ್ಲ ಎಂದು ಹೇಳಿದರು.

ಸರ್ಕಾರವನ್ನು ಎದುರು ಹಾಕಿಕೊಳ್ಳುವ ಉದ್ದೇಶವಿಲ್ಲ. ಆದರೂ ಸರ್ಕಾರ ಅವಕಾಶ ಕಲ್ಪಿಸಲಿ, ಬಿಡಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಿಶ್ಚಿತ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಿವಾನಂದ ಮಾನಕರ, ಪ್ರಭಾಕರ ಬೋಸ್ಲೆ, ವಿಜಯಕುಮಾರ್ ಕೋಳಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.