ವಿಜಯಪುರ: ಚಿತ್ರದುರ್ಗದ ಮುರುಘರಾಜೇಂದ್ರ ಶರಣರ ಮೇಲಿನ ಆಪಾದನೆ ಷಡ್ಯಂತ್ರದಿಂದ ಕೂಡಿರುವುದರಿಂದ ಅವರಿಗೆ ನೈತಿಕ ಬೆಂಬಲ ನೀಡುವುದಾಗಿ ವಿಜಯಪುರ ಜಿಲ್ಲೆಯ ಮಠಾಧೀಶರ ಒಕ್ಕೂಟ ಹೇಳಿದೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಮಠಾಧೀಶರು,ಸಾಮಾಜಿಕ ಕಳಕಳಿ ಇರುವ ಶ್ರೀಗಳ ವಿರುದ್ಧದ ಷಡ್ಯಂತ್ರ ನಡೆದಿದ್ದು, ಈ ಬಗ್ಗೆ ಸರ್ಕಾರನಿಷ್ಪಕ್ಷಪಾತ ತನಿಖೆ ನಡೆಸಬೇಕು, ಸತ್ಯಾಸತ್ಯತೆ ಬಯಲಿಗೆಳೆಯಬೇಕು ಎಂದು ಆಗ್ರಹಿಸಿದರು.
ಸಣ್ಣ ಮಕ್ಕಳನ್ನು ಬಲಿಕೊಟ್ಟು ಶ್ರೀಗಳ ವಿರುದ್ದ ಲೈಂಗಿಕ ಕಿರುಕುಳದಂತಹ ಷಡ್ಯಂತ್ರ ರೂಪಿಸಿರುವುದು ಖಂಡನೀಯ.ಒಂದು ವೇಳೆಸ್ವಾಮೀಜಿ ತಪ್ಪಿತಸ್ಥರಾದರೆ ಅವರಿಗೆ ಶಿಕ್ಷೆಯಾಗಲಿ. ಅವರು ಪೀಠ ತ್ಯಾಗ ಮಾಡಬೇಕೋ, ಬೇಡವೋ ಎಂಬುದು ಆ ಮಠದ ಭಕ್ತರಿಗೆ ಬಿಟ್ಟ ವಿಚಾರ ಎಂದರು.
ಆಲಮೇಲ ಚಂದ್ರಶೇಖರ ಶಿವಾಚಾರ್ಯ,ಬಂಥನಾಳದ ವೃಷಭಲಿಂಗ ಸ್ವಾಮೀಜಿ, ಚಡಚಣದ ಷಡಕ್ಷರಿ ಸ್ವಾಮೀಜಿ, ಸಿಂದಗಿಯ ಡಾ.ಪ್ರಭುಲಿಂಗ ಸ್ವಾಮೀಜಿ, ನಾಗಠಾಣದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಮಸಬಿನಾಳದ ಡಾ.ಸಿದ್ದರಾಮ ಸ್ವಾಮೀಜಿ, ಯಂಕಂಚಿಯ ರುದ್ರಮುನಿ ಶಿವಾಚಾರ್ಯ, ರೇವಣಸಿದ್ಧ ಶಿವಾಚಾರ್ಯ, ಅರ್ಜುಣಗಿಯ ಸಂಗನಬಸವ ಶಿವಾಚಾರ್ಯ, ತಡವಲಗದ ರಾಚೋಟೇಶ್ವರ ಶಿವಾಚಾರ್ಯ, ಅಥರ್ಗಾದ ಮುರುಘೇಂದ್ರ ಸ್ವಾಮೀಜಿ, ಆಳಂದದ ಶಿವಬಸವ ಸ್ವಾಮೀಜಿ, ಆಗರಖೇಡದ ಪ್ರಭುಲಿಂಗ ಸ್ವಾಮೀಜಿ, ದೇವರ ಹಿಪ್ಪರಗಿಯ ಶಿವಯೋಗಿ ಸ್ವಾಮೀಜಿ, ಗೋಲಗೇರಿಯ ಮುನೀಂದ್ರ ಸ್ವಾಮೀಜಿ, ಕುಮಸಗಿಯ ಶಿವಾನಂದ ಶಿವಾಚಾರ್ಯರು, ಬಸವನ ಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ, ಇಂಚಗೇರಿಯ ರುದ್ರಮುನಿ ಶಿವಾಚಾರ್ಯ, ದೇವರಹಿಪ್ಪರಗಿಯ ಮಡಿವಾಳೇಶ್ವರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.