
ಮುದ್ದೇಬಿಹಾಳ: ಬೆಳೆಗಳಿಗೆ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಗೆ ಮಾತ್ರವಲ್ಲದೇ ವೈಮಾನಿಕ ಕಣ್ಗಾವಲು, ಬೆಳೆ ಮೇಲ್ವಿಚಾರಣೆ, ಭೂ ಪರಿಶೀಲನೆ, ಮ್ಯಾಪಿಂಗ್, ಹಾನಿಗೊಳಗಾದ ಬೆಳೆ ಪರಿಶೀಲನೆ ಸೇರಿದಂತೆ ಪ್ರಸ್ತುತ ಕಾಲಘಟ್ಟದಲ್ಲಿ ಬೇಡಿಕೆಗೆ ತಕ್ಕಂತೆ ಕೃಷಿ ಸಂಬoದಿತ ವಿವಿಧ ಕೆಲಸಗಳಿಗೆ ಡ್ರೋನ್ ಭವಿಷ್ಯದ ಪರಿಹಾರವಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ ಹೇಳಿದರು.
ತಾಲ್ಲೂಕಿನ ಮಡಿಕೇಶ್ವರ ಗ್ರಾಮದ ಮಲ್ಲಿನಾಥ ಬಿರಾದಾರ ಇವರ ಹೊಲದಲ್ಲಿ ದಾಸೋಹಿ ರೈತ ಉತ್ಪಾದಕ ಕಂಪನಿ ಹಾಗೂ ಇಂಡಿಯನ್ ಫರ್ಟಿಲೈರ್ಸ ಕೋ-ಆಫರೇಟಿವ್ಹ್ ಲಿ., ಇವರಿಂದ ವ್ಯವಸ್ಥೆಗೊಳಿಸಲಾದ ಡ್ರೋನ್ಗೆ ಚಾಲನೆ ಮತ್ತು ಸಿಂಪರಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಕ್ಷೇತ್ರ ಭವಿಷ್ಯದ ಸವಾಲುಗಳನ್ನು ಮುಂದಿಟ್ಟುಕೊoಡು ಶಾಶ್ವತ ಡ್ರೋನ್ ಸೇವೆಯನ್ನು ಆರಂಭಿಸಿದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ದೂರದೃಷ್ಠಿಯು ಈ ಭಾಗದ ರೈತರಿಗೆ ವರವಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜೈನ್ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಮಹೇಂದ್ರ ಬಿರಾದಾರ ಮಾತನಾಡಿ ಕಾರ್ಮಿಕರ ಕೊರತೆಯನ್ನು ನೀಗಿಸಿ ಕಡಿಮೆ ಖರ್ಚಿನ ಜೊತೆ ಅಲ್ಪಾವಧಿಯಲ್ಲಿ ಹೆಚ್ಚಿನ ಪ್ರದೇಶದ ಬೆಳೆಗಳಲ್ಲಿ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಡ್ರೋನ್ ಆಧುನಿಕ ಉಪಕರಣವಾಗಿದೆ.ರೈತರನ್ನು ಅಂತಹ ಆಧುನಿಕ ಕೃಷಿ ತಂತ್ರಜ್ಞಾನಗಳಿಗೆ ತೆರದುಕೊಳ್ಳಲು ಅವಕಾಶ ಕಲ್ಪಿಸಿದ ರೈತ ಕಂಪನಿಯ ಕಾರ್ಯ ಅನನ್ಯವಾದುದು ಎಂದರು.
ಡ್ರೋನ್ಗೆ ಚಾಲನೆ ನೀಡಿದ ಪ್ರಗತಿಪರ ರೈತ ಮಡಿವಾಳಪ್ಪಗೌಡ ಬಿರಾದಾರ(ಢವಳಗಿ) ಮಾತನಾಡಿ ಸಾಂಪ್ರದಾಯಿಕ ಕೃಷಿ ಪದ್ದತಿಗಳ ಮಧ್ಯೆ ಕಾಲಾನುಕ್ರಮೇಣ ಆಧುನಿಕತೆಗಳಿಗೆ ತೆರೆದುಕೊಳ್ಳುವ ಅನಿವಾರ್ಯತೆಯನ್ನು ರೈತರಿಗೆ ಮನವರಿಕೆ ಮಾಡಿ ಬೆಳೆ ವಿಧಾನ, ತಂತ್ರಜ್ಞಾನಗಳ ಅಳವಡಿಕೆ ಮತ್ತು ಅತ್ಯುನ್ನತ ಸೌಲಭ್ಯಗಳನ್ನು ಈ ನಾಡಿಗೆ ಪರಿಚಯಿಸಿ ಯಶಸ್ವಿಗೊಳಿಸುವ ಬಹು ದೊಡ್ಡ ಜವಾಬ್ದಾರಿಯನ್ನು ನಾವೆಲ್ಲ ಸೇರಿ ಕಟ್ಟಿದ ಕಂಪನಿಯಿoದ ಯಶಸ್ವಿಯಾಗಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.
ಅಧ್ಯಕ್ಷತೆ ವಹಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಸಂಸ್ಥಾಪಕ ಅರವಿಂದ ಕೊಪ್ಪ ಮಾತನಾಡಿದರು.
ದಾಸೋಹಿ ಎಫ್.ಪಿ.ಸಿ ಉಪಾಧ್ಯಕ್ಷರಾದ ಆರ್.ಬಿ ಸಜ್ಜನ, ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾದ ಸಿ.ಆರ್ ಬಿರಾದಾರ, ನಿರ್ದೇಶಕರಾದ ಸೋಮನಗೌಡ ಬಿರಾದಾರ, ಶ್ರೀಶೈಲ ಮೇಟಿ, ಪರಸಪ್ಪ ಮೇಟಿ, ಪ್ರಗತಿಪರ ರೈತರಾದ ಶಿವನಗೌಡ ಅಲ್ಲಾಪೂರ, ನಾನಾಗೌಡ ಗು. ಪಾಟೀಲ, ಬಸನಗೌಡ ಗು. ಹಿರೇಗೌಡರ, ನಾಗನಗೌಡ ಸೋ. ಸಾರವಾಡ, ಶಿವು ನಾಗೂರ(ಬಳಗಾನೂರ), ಈರಯ್ಯ ಗು. ಬಿರಾದಾರ, ಮದನಪ್ಪಗೌಡ ಶಿ. ಮೇಟಿ,ಕಾಶೀನಾಥ ಶಿ. ಬಿರಾದಾರ, ನಾಗಯ್ಯ ಗು. ಬಿರಾದಾರ, ರಾಜಶೇಖರ ಜಲಪೂರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.