ನಾಲತವಾಡ: ತ್ಯಾಗ, ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ನಾಲತವಾಡ ಪಟ್ಟಣ ಸೇರಿದಂತೆ ಹೋಬಳಿಯಲ್ಲಿ ಜಿಟಿಜಿಟಿ ಮಳೆಯ ನಡುವೆ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಕೆಳಗಿನ ಮಸೀದಿ, ಜಾಲಗಾರ ಮಸೀದಿ, ಖಾಜಿ ಮಸೀದಿ, ಬಹರ ಪೇಟೆ, ನಾಡಗೌಡ ಓಣಿ ಹಾಗೂ ಸಿಕ್ಕಲಗಾರ ಮಸೀದಿ ಸೇರಿದಂತೆ ಒಂಬತ್ತು ಮಸೀದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರಿಗೆ ಕಳೆದ ಐದು ದಿನಗಳಿಂದ ನಿತ್ಯ ವಿಶೇಷ ಪೂಜೆ ನೆರವೇರಿಸಲಾಯಿತು.
ಸಾಥವಿ ಪೂಜೆ, ಗಂಧರಾತ್ರಿ ನಡೆಯುವ ವಿಶೇಷ ಪೂಜೆಗಳಲ್ಲಿ ಸರ್ವಧರ್ಮೀಯರು ಪಾಲ್ಗೊಂಡಿದ್ದರು. ಶನಿವಾರ ರಾತ್ರಿ ಕರ್ಬಲಾ ನಿಮಿತ್ತ ರಿವಾಯತ್ (ಮೊಹರಂ ಪದ) ಗಳ ಗೀತಗಾಯನ ನಡೆಯಿತು. ಹಬ್ಬದ ಕೊನೆಯ ದಿನ ಭಾನುವಾರ ದೇವರನ್ನು ವಿಸರ್ಜಿಸಲು ಹೊಳೆಗೆ ಒಯ್ಯುವ ಮುಂಚೆ ನಡೆಯುವ ಡೋಲಿ ಉತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ದೇವರಿಗೆ ಖಾರಿಕಾಯಿ ಅರ್ಪಿಸಿ ಹರಕೆ ತೀರಿಸಿದರು. ವಿಶೇಷ ಸಿಹಿ ಖಾದ್ಯ ಚೊಂಗೆ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿ ಅವುಗಳನ್ನು ಹಿಂದೂಗಳಿಗೂ ಹಂಚಿಕೊಳ್ಳುವ ಮೂಲಕ ಭಾವೈಕ್ಯ ಮೆರೆದರು.
ದುದ್ದಗಿ ಕಾಂಪ್ಲೆಕ್ಸ್, ದೇಶಮುಖ ಓಣಿಯ ಪ್ರಮುಖ ಬೀದಿಗಳಲ್ಲಿ ಒಂಬತ್ತು ಮಸೀದಿಯ ದೇವರು ಪರಸ್ಪರ ಭೇಟಿ ನೀಡುವುದನ್ನು ರಸ್ತೆಯಲ್ಲಿ, ಮಹಡಿ ಮೇಲೆ ಏರಿ ನಿಂತ ಸಾವಿರಾರು ಜನರು ಕಣ್ತುಂಬಿಕೊಂಡರು. ನಾಲತವಾಡ ಹೊರ ಪೋಲಿಸ್ ಠಾಣೆ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಿದ್ದರು.
ಶರಣರ ಮಠಕ್ಕೆ ಭೇಟಿ ಪಟ್ಟಣದ ವೀರೇಶ್ವರ ಶರಣರ ಮಠಕ್ಕೆ ಬಹರ ಪೇಟ ಮಸೀದಿಯ ಅಲಾಯಿ ದೇವರು ಭೇಟಿ ನೀಡಿ ಶರಣರ ಆಶೀರ್ವಾದ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.