
ವಿಜಯಪುರ: ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿಗೆ ಜಿಲ್ಲಾ ಸೆಷನ್ಸ್ ಕೋರ್ಟ್ ಏಳು ವರ್ಷ ಕಠಿಣ ಶಿಕ್ಷೆ ಹಾಗೂ ₹11 ಸಾವಿರ ದಂಡ ವಿಧಿಸಿದೆ.
ವಿಜಯಪುರದ ನವಬಾಗ್ನ ಮೈಬೂಬ ಜಮಾದಾರ ಎಂಬುವವರಿಗೆ 2018ರ ಡಿಸೆಂಬರ್ 3ರಂದು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿ ಸಬಿಲ್ ಬಾಗವಾನ ವಿರುದ್ಧ ಗಾಂಧಿಚೌಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಹರೀಶ್ ಎ. ಅವರು ಸಾಕ್ಷಿ ಪುರಾವೆಗಳನ್ನು ಅವಲೋಕಿಸಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ.
ಘಟನೆ ವಿವರ: ನವಬಾಗ್ನಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಮೈಬೂಬ ಜಮಾದಾರ ವ್ಯಾಪಾರ ನಡೆಯದ ಕಾರಣಕ್ಕೆ ಅದೇ ಸ್ಥಳದಲ್ಲಿ ಹೋಟೆಲ್ ಆರಂಭಿಸುತ್ತಾನೆ. ಆದರೆ, ಪಕ್ಕದಲೇ ಈ ಮೊದಲಿನಿಂದಲೂ ಹೋಟೆಲ್ ನಡೆಸುತ್ತಿದ್ದ ಸಬಿಲ್ ಬಾಗವಾನನ ವ್ಯಾಪಾರ ವಹಿವಾಟಿಗೆ ಜಮಾದಾರ ಹೋಟೆಲ್ ಆರಂಭದಿಂದ ನಷ್ಠವಾಗುತ್ತದೆ. ಈ ಹಿನ್ನೆಲೆಯಲ್ಲಿ ಜಮಾದಾರಗೆ ಹೋಟೆಲ್ ಬಂದ್ ಮಾಡುವಂತೆ ಸಬಿಲ್ ಬಾಗವಾನ ಎಚ್ಚರಿಕೆ ನೀಡುತ್ತಾನೆ. ಇಬ್ಬರ ನಡುವೆ ಜಗಳವಾಗಿ ಚಾಕು ಇರಿತವಾಗಿ, ದೂರು ದಾಖಲಾಗಿತ್ತು.
ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಮ್ ವಾದ ಮಂಡಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.