
ವಿಜಯಪುರ: ‘ಕುವೆಂಪು ರಚಿಸಿದ ನಾಡಗೀತೆ ಕನ್ನಡಿಗರ, ಕನ್ನಡ ಸಾಹಿತ್ಯದ ಶ್ರೀಮಂತ ಸಂಸ್ಕೃತಿ, ಸ್ವಾಭಿಮಾನ ಮತ್ತು ಘನತೆ, ಇತಿಹಾಸ, ಭೂಗೋಳ ವೈವಿಧ್ಯತೆಯನ್ನು ಸಾರುವ ನಮ್ಮೆಲ್ಲರ ಹೆಮ್ಮೆಯ ಗೀತೆಯಾಗಿದೆ. ಈ ಗೀತೆಗೆ ನೂರು ವರ್ಷ ಸಂದಿದ್ದು ಕನ್ನಡಿಗರಿಗೆ ಸ್ವಾಭಿಮಾನದ ಸಂಕೇತ’ ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ.ಬಿರಾದಾರ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಬುಧವಾರ ಕುವೆಂಪುರವರ ಜನ್ಮ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಹಾಗೂ ನಾಡಗೀತೆಗೆ ನೂರರ ಸಂಭ್ರಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
‘ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವೆಂದು ಬಣ್ಣಿಸುವುದರೊಂದಿಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಜೈನರಂತಹ ವಿವಿಧ ಸಮುದಾಯಗಳ ಸಹಬಾಳ್ವೆಯನ್ನು ಗೀತೆ ಸಾರುತ್ತದೆ’ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕುವೆಂಪುರವರು ಕನ್ನಡಾಂಬೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ತಂದುಕೊಡುವ ಮೂಲಕ ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.
ಪಿ.ಡಿ.ಜೆ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ ಕುಲಕರ್ಣಿ ‘ಕುವೆಂಪುರವರ ವಿಶ್ವಮಾನವ ಕಲ್ಪನೆ ಹಾಗೂ ನಾಡಗೀತೆಗೆ ನೂರರ ಸಂಭ್ರಮ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಹಕಾರಿ ಧುರೀಣ ರಾಜೇಂದ್ರ ಕೊರಡ್ಡಿ, ಪಿ ಕೆ ಪಿ ಎಸ್ ಬ್ಯಾಂಕಿನ ವ್ಯವಸ್ಥಾಪಕ ಮಲ್ಲಿಕಾರ್ಜುನ ನಾಗಶೆಟ್ಟಿ, ಬ್ಯಾಂಕಿನ ನಿರ್ದೇಶಕ ಸುಭಾಷ ಯಂಭತ್ತನಾಳ, ಮಹಮ್ಮದ ಹುಸೇನ ವಾಲಿಕಾರ, ಗುರುಲಿಂಗಪ್ಪ ನಾಟಿಕಾರ, ಸುಭಾಷ ಚವ್ವಾಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.