ಸಿಂದಗಿ: ಗ್ರಾಮ ದೇವತೆ ನೀಲಗಂಗಾದೇವಿ ಜಾತ್ರೆ ಗುರುವಾರ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವಕ್ಕೆ ಸಾರಂಗಮಠದ ಪೀಠಾಧ್ಯಕ್ಷ ಡಾ. ಪ್ರಭು ಸಾರಂಗದೇವ ಶ್ರೀ ಚಾಲನೆ ನೀಡಿದರು. ದೇವಸ್ಥಾನದ ಧರ್ಮದರ್ಶಿ ಸಿದ್ಧರಾಮಪ್ಪ ಪವಾಡಿ (ದೇವರಮನಿ) ಇದ್ದರು.
ವಾದ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ಪಟ್ಟಣದಲ್ಲಿ ಸಾಗಿ ಬಂದಿತು. ಭಕ್ತರು ರಸ್ತೆಯುದ್ದಕ್ಕೂ ನಿಂತುಕೊಂಡು ಪಲ್ಲಕ್ಕಿ ದರ್ಶನ ಪಡೆದರು. ಪಲ್ಲಕ್ಕಿ ಮುಂಚೂಣಿಯಲ್ಲಿ ಛತ್ರ– ಚಾಮರ, ನಂದಿಕೋಲ ರಾರಾಜಿಸುತ್ತಿದ್ದವು. ಪುರವಂತರ ಸೇವೆ ನಡೆಯಿತು.
ಮಹಿಳೆಯರು ಕೈಯಲ್ಲಿ ಆರತಿ ಹಿಡಿದುಕೊಂಡು ಪಲ್ಲಕ್ಕಿ ಜೊತೆ ಸಾಗಿದರು. ಪಲ್ಲಕ್ಕಿ ಹಳೆಯ ಬಜಾರದಲ್ಲಿನ ಬಸವಣ್ಣ ದೇವರ ದೇವಸ್ಥಾನಕ್ಕೆ ತಲುಪಿದ ನಂತರ ಅಲ್ಲಿ ಭಕ್ತರು ದೇವಸ್ಥಾನದ ಸುತ್ತಲೂ ಉರಳು ಸೇವೆ ಭಕ್ತಿ ಸೇವೆ ಸಲ್ಲಿಸಿದರು.
ದೇವಿಯ ಜಾತ್ರೆಯ ಹಿನ್ನೆಲೆಯಲ್ಲಿ ಉಪವಾಸ ವ್ರತ ಕೈಗೊಂಡಿದ್ದ ಮಹಿಳೆಯರು ಇಂದು ದೇವಿಯ ದರ್ಶನದ ನಂತರ ವ್ರತ ಅಂತ್ಯಗೊಳಿಸಿದರು. ಇಡೀ ಪಟ್ಟಣದಾದ್ಯಂತ ಭಕ್ತಿಯ ಪರಾಕಾಷ್ಟೆ ಕಂಡು ಬಂದಿತು. ಬೆಳಿಗ್ಗೆಯಿಂದ ಸಂಜೆಯವರೆಗೂ
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.