ADVERTISEMENT

ರಾಜಕೀಯ ಒತ್ತಡದಲ್ಲಿ ನವಮಾಧ್ಯಮ -ಕೆ.ದೀಪಕ್‌

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 15:39 IST
Last Updated 4 ಫೆಬ್ರುವರಿ 2023, 15:39 IST
ಪತ್ರಕರ್ತರ ಸಮ್ಮೇಳನದಲ್ಲಿ ‘ನವಮಾಧ್ಯಮಗಳು ಮತ್ತು ಪತ್ರಕರ್ತರು' ಎಂಬ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಅನಂತ ಚಿನಿವಾರ ಮಾತನಾಡಿದರು
ಪತ್ರಕರ್ತರ ಸಮ್ಮೇಳನದಲ್ಲಿ ‘ನವಮಾಧ್ಯಮಗಳು ಮತ್ತು ಪತ್ರಕರ್ತರು' ಎಂಬ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಅನಂತ ಚಿನಿವಾರ ಮಾತನಾಡಿದರು   

ವಿಜಯಪುರ: ನವ ಮಾಧ್ಯಮಗಳು ರಾಜಕೀಯ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹಿರಿಯ ಪತ್ರಕರ್ತ ಕೆ.ದೀಪಕ್‌ ಮೈಸೂರು ಅಭಿಪ್ರಾಯಪಟ್ಟರು.

ಪತ್ರಕರ್ತರ ಸಮ್ಮೇಳನದಲ್ಲಿ ‘ನವಮಾಧ್ಯಮಗಳು ಮತ್ತು ಪತ್ರಕರ್ತರು' ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ನವ ಮಾಧ್ಯಮಗಳಿಂದ ನೈಜ ಪತ್ರಕರ್ತರನ್ನು ಗುರುತಿಸುವುದು ಕಷ್ಟ ಸಾಧ್ಯ ವಾಗಿದೆ ಎಂದರು.

ADVERTISEMENT

ನವ ಮಾಧ್ಯಮಗಳು ಗಾಂಧಿ ಮಾರ್ಗದಲ್ಲಿ ನಡೆಯುತ್ತಿಲ್ಲ, ಗಾಂಧಿ ನೋಟಿನ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿವೆ ಎಂದು ಆರೋಪಿಸಿದರು.

ಸಂಸ್ಥೆಗೆ ಲಾಭ ತರುವವರು ಯಶಸ್ವಿ ಪತ್ರಕರ್ತರ ಎಂದು ಗುರುತಿಸುವ ಕಾಲ ಇದಾಗಿದೆ. ಪತ್ರಿಕಾ ಸಂಪಾದಕರು ಇಂದು ಕಂಪನಿಗಳ ಸಿಇಒ ರೀತಿ ಆಗಿದ್ದಾರೆ. ನವ ಮಾಧ್ಯಮಗಳಿಂದಾಗಿ ಪತ್ರಕರ್ತರ ಹಿತಾಸಕ್ತಿ ಕಾಪಾಡುವುದು ಕಷ್ಟವಾಗಿದೆ ಎಂದು ಹೇಳಿದರು.

ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಅನಂತ ಚಿನಿವಾರ, ನವ ಮಾಧ್ಯಮಗಳಿಂದ ಸಮಾಜದಲ್ಲಿ ಇಕೋ ಚೇಂಬರ್ (ಧ್ವನಿ-ಪ್ರತಿಧ್ವನಿ) ಸಂಸ್ಕೃತಿ ಹೆಚ್ಚಳವಾಗುತ್ತಿದೆ. ಕ್ರಿಯೆಗೆ ಪ್ರತಿರೋಧವಿಲ್ಲದ, ಕ್ರಿಯೆಗೆ ತಕ್ಕಂತಹ ಪ್ರತಿಕ್ರಿಯೆಯ ಸುದ್ದಿ ಮಾತ್ರ ಲಭ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪತ್ರಿಕೆಗಳು ಹೇಳದ ಹಲವಾರು ವಿಷಯಗಳು ಸಾಮಾಜಿಕ ಜಾಲತಾಣದ ಮೂಲಕ ಮುಕ್ತವಾಗಿ ಪ್ರಕಟಗೊಳ್ಳುತ್ತಿವೆ ಎಂದರು.

ಪತ್ರಕರ್ತ ಸಂಗಮೇಶ ಮೆಣಸಿನಕಾಯಿ, ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ನಾವು ಅಪ್ ಡೇಟ್ ಆಗದಿದ್ದರೇ ಪತ್ರಿಕೋದ್ಯಮ ಜಗತ್ತಿನಲ್ಲಿ ಬದುಕುವುದು ಅಸಾಧ್ಯ ಎಂದರು.

ಡಿಜಿಟಲ್ ಮಾಧ್ಯಮಗಳಲ್ಲಿಯೂ ಹೇರಳ ಅವಕಾಶಗಳಿವೆ, ಅವುಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಕನ್ನಡಪ್ರಭ ಸಂಪಾದಕ ರವಿ ಹೆಗಡೆ ಮಾತನಾಡಿ, ಕೋವಿಡ್ ನಂತರದ ಕಾಲಘಟ್ಟದಲ್ಲಿ ಪತ್ರಿಕೆಗಳ ಪ್ರಸರಣ ಸಂಖ್ಯೆ ಕುಸಿದಿವೆ. 40 ಲಕ್ಷದಷ್ಟಿದ್ದ ಕನ್ನಡ ಪತ್ರಿಕೆಗಳ ಪ್ರಸಾರ ಸಂಖ್ಯೆ ಈಗ 15 ರಿಂದ 20 ಲಕ್ಷ ಆಸುಪಾಸಿನಲ್ಲಿವೆ. ಅದೇ ರೀತಿ ಎಲೆಕ್ಟ್ರಾನಿಕ್ ಚಾನಲ್ ಗಳ ಟಿಆರ್ ಪಿ ಕೂಡಾ ಶೇ 40 ರಷ್ಟು ಕಡಿಮೆಯಾಗಿದೆ. ಇದೇ ಹೊತ್ತಿನಲ್ಲಿ ಆನ್ ಲೈನಲ್ಲಿ ಸುದ್ದಿ ವೀಕ್ಷಣೆಯ ಸಂಖ್ಯೆ ಐದು ಪಟ್ಟು ಹೆಚ್ಚಿದೆ, ಇದು ನವಮಾಧ್ಯಮದ ಹೊಸ ಶಕ್ತಿ ಎಂದರು.

ಗೂಗಲ್ ನ್ಯೂಸ್, ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್ ಮತ್ತು ವಾಟ್ಸ್ ಅಪ್ ಗಳು ಜಗತ್ತಿನ ದೊಡ್ಡ ಸುದ್ದಿಸಂಸ್ಥೆಗಳಾಗಿ ಹೊರಹೊಮ್ಮಿವೆ. ಇವುಗಳ ಮೂಲಕವೇ ಜನ ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ ಎಂದು ಹೇಳಿದರು.

ನವಮಾಧ್ಯಮದಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ನಿಯಂತ್ರಣ ಅಗತ್ಯ ಎಂದರು.

ಪತ್ರಕರ್ತ ಲಕ್ಷ್ಮಿನಾರಾಯಣ, ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.