ADVERTISEMENT

ನಾನು ಜಾತಿವಾದಿಯಲ್ಲ; ಬಸವಣ್ಣನವರ ಅನುಯಾಯಿ: ಸಿದ್ದರಾಮಯ್ಯ ಅಭಿಮತ

ಕಾಂಗ್ರೆಸ್ ಬಹಿರಂಗ ಸಮಾವೇಶ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 17:07 IST
Last Updated 26 ಅಕ್ಟೋಬರ್ 2021, 17:07 IST
ಸಿಂದಗಿ ಪಟ್ಟಣದ ಎಚ್.ಜಿ.ಹೈಸ್ಕೂಲ್ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದಅಪಾರ  ಜನೋಸ್ತೋಮ
ಸಿಂದಗಿ ಪಟ್ಟಣದ ಎಚ್.ಜಿ.ಹೈಸ್ಕೂಲ್ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದಅಪಾರ  ಜನೋಸ್ತೋಮ   

ವಿಜಯಪುರ: ನಾನು ಜಾತಿವಾದಿಯಲ್ಲ; ಬಸವಣ್ಣನವರ ಅನುಯಾಯಿ, ಎಲ್ಲ ಸಮಾಜದ ಜನತೆಯ ಕಲ್ಯಾಣವನ್ನು ಬಯಸುವವನು. ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದೇನೆ ಎಂದು ಹೇಳುವ ಮೂಲಕ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜಾತೀವಾದಿ ಎಂಬ ಬಿಜೆಪಿ ಟೀಕೆಗೆ ಪ್ರತ್ಯುತ್ತರ ನೀಡಿದರು.

ಸಿಂದಗಿ ಪಟ್ಟಣದ ಎಚ್.ಜಿ.ಹೈಸ್ಕೂಲ್ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿಅವರು ಮಾತನಾಡಿದರು.

170 ಅಂಶಗಳ ಪ್ರಣಾಳಿಕೆಯಲ್ಲಿ 169 ಯೋಜನೆಗಳನ್ನು ಪೂರೈಸಿದ ರಾಜ್ಯದ ಏಕೈಕ ಸರ್ಕಾರ ನಮ್ಮದು. ನಾನು ಮುಖ್ಯಮಂತ್ರಿಯಾದ 1 ಗಂಟೆಯಲ್ಲಿ 5 ಯೋಜನೆಗಳನ್ನು ಪೂರ್ಣಗೊಳಿಸಿ ರಾಜ್ಯದ 4.5 ಕೋಟಿ ಜನರಿಗೆ ಅನ್ನ ನೀಡುವ ಕಾರ್ಯ ಮಾಡಿ ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಿದ್ದೇನೆ ಎಂದರು.

ADVERTISEMENT

ಬಿಜೆಪಿ 7 ಕೆಜಿ ಅಕ್ಕಿ ಕೊಡಲಿಕ್ಕೆ ದುಡ್ಡಿಲ್ಲ ಎಂದು 5 ಕೆಜಿಗೆ ಇಳಿಸಿದರು. ಕೋವಿಡ್‍ನ ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ಕುಟುಂಬಗಳ ನಿರ್ವಹಣೆಗೆ ₹ 10 ಸಾವಿರ ಹಣ ಮತ್ತು 10 ಕೆಜಿ ಅಕ್ಕಿ ನೀಡಿರಿ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೆ. ಆದರೆ, ಬಿ.ಎಸ್.ಯಡಿಯೂರಪ್ಪ ಅದನ್ನು ತಳ್ಳಿ ಹಾಕಿದರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿದರೆ ಅವರ ಗಂಟೇನು ಹೋಗುತ್ತಿತ್ತು ಎಂದು ಹೇಳಿದರು.

ಬಿಜೆಪಿ ಸರ್ಕಾರ ಸುಳ್ಳು ಹೇಳಿ ಜನತೆಗೆ ಮೊಸ ಮಾಡುತಿದೆ. ಅವರಿಗೆ ದಮ್‌ ಇದ್ರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಸವಾಲ ಹಾಕಿದರು.

ನನ್ನ ಸವಾಲು ಸ್ವೀಕರಿಸಲು ಅವರಿಗೆ ಭಯವಾಗುತ್ತಿದೆ. ರಾಜ್ಯದ ಜನ ಇದನ್ನು ಅರ್ಥೈಸಿಕೊಳ್ಳಬೇಕು ಎಂದರು.

ಸಿಂದಗಿ ಉಪ ಚುಣಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಗೆಲವು ಖಚಿತ. ಮತ ಕ್ಷೇತ್ರದ ಮೊರಟಗಿ, ತಾಂಬಾ, ಬಳಗಾನೂರ, ಆಲಮೇಲ ಸೇರಿದಂತೆ ಅನೇಕ ಹಳ್ಳಿಗಳಿಗೆ ಸಂಚಾರ ಮಾಡಿದ್ದೇನೆ ಎಲ್ಲ ಕಡೆಗಳಲ್ಲೂ ಕಾಂಗ್ರೆಸ್‌ಗೆ ಬಾರಿ ಬೆಂಬಲ ಸಿಗುತ್ತಲಿದೆ ಎಂದರು.

ಅ.30 ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ಮತ ನೀಡಿರಿ ಎಂದು ಮನವಿ ಮಾಡಿಕೊಂಡರು.

ಅಪಾರ ಜನೋಸ್ತೋಮ:ಎಚ್.ಜಿ.ಹೈಸ್ಕೂಲ್‌ ಮೈದಾನದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಪಟ್ಟಣ ಸೇರಿದಂತೆ ಕ್ಷೇತ್ರದ ಮೂಲೆಮೂಲೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿಜನ ಭಾಗವಹಿಸಿದ್ದರು.

ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ದೃವ ನಾರಾಯಣ, ಶಾಸಕ ಎಂ.ಬಿ.ಪಾಟೀಲ, ಯಶವಂತಯಗೌಡ ಪಾಟೀಲ, ಡಾ.ಅಜಯಸಿಂಗ್‌, ರಹಮಾನ್‌ ಖಾನ್‌, ಯು.ಟಿ.ಖಾದರ್‌, ಶಿವಾನಂದ ಪಾಟೀಲ, ಉಮಾಶ್ರೀ, ಅಲ್ಲಮಪ್ರಭು ಪಾಟೀಲ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಶರಣಪ್ಪ ಸುಣಗಾರ, ಡಾ.ಚನ್ನವೀರ(ಮುತ್ತು) ಮನಗೂಳಿ, ಎಸ್.ಎಂ.ಪಾಟೀಲ ಗಣಿಹಾರ, ರಾಜು ಆಲಗೂರ, ಗುರನಗೌಡ ಪಾಟೀಲ, ವಿಠ್ಠಲ ಕೊಳೂರ, ಅಯುಬ ದೇವರಮನಿ, ಪ್ರಕಾಶ ರಾಠೋಡ, ಮಲ್ಲಣ್ಣ ಸಾಲಿ ಅಪ್ಪಾಜಿ ನಾಡಗೌಡ, ಸಂತೋಷ ಹರನಾಳ, ಹಾಸೀಂಪಿರ ವಾಲಿಕಾರ, ಯೋಗಪ್ಪಗೌಡ ಪಾಟೀಲ ಇದ್ದರು.

ಉಡಿಯೊಡ್ಡಿ ಮತಯಾಚಿಸಿದ ಸಿದ್ದಮ್ಮ
ವಿಜಯಪುರ:
ದಿ.ಎಂ.ಸಿ.ಮನಗೂಳಿ ಅವರ ಪತ್ನಿ ಸಿದ್ದಮ್ಮ ಗೌಡತಿ ಮಾತನಾಡಿ, ನನ್ನ ಯಜಮಾನ ಮನಗೂಳಿ ಅವರು ನನ್ನನ್ನು ನನ್ನ ಮಕ್ಕಳನ್ನು ಹಾಗೂ ಈ ಕ್ಷೇತ್ರವನ್ನು ಬಿಟ್ಟು ಹೊಗಿದ್ದಾರೆ. ನನ್ನ ಕುಟುಂಬವನ್ನು ಎತ್ತಿ ಹಿಡಿಯಿರಿ, ನನ್ನ ಮಗ ಅಶೋಕನನ್ನು ಗೆಲ್ಲಿಸಿ ಎಂದು ಉಡಿಯೊಡ್ಡಿ ಮತ ನೀಡುವಂತೆ ಮನವಿ ಮಾಡಿಕೊಂಡರು.

ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, ನಾನು ನಮ್ಮ ತಂದೆ ದಿ.ಎಂ.ಸಿ.ಮನಗೂಳಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದೇನೆ. ಈ ಕ್ಷೇತ್ರವನ್ನು ಮಾದರಿ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.