ವಿಜಯಪುರ: ಜ್ಞಾನಕ್ಕಿಂತ ಮಿಗಿಲಾದ ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು ನರ್ಮದಾ ಬಚಾವೋ ಆಂದೋಲನದ ರೂವಾರಿ, ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿದರು.
ನಗರದ ಸಿಎನ್ಎಫ್ ಸಂಸ್ಥೆಯಸಂಗಮೇಶ ಬಬಲೇಶ್ವರ ಅವರು ಕೈಗೊಂಡಿರುವ ‘ಜ್ಞಾನ ಜೋಳಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತಮ್ಮ ಬಳಿಯಿದ್ದ ಪುಸ್ತಕವನ್ನು ಜ್ಞಾನ ಜೋಳಿಗೆಗೆ ಹಾಕುವುದರ ಮೂಲಕ ಶುಭ ಹಾರೈಸಿ ಅವರು ಮಾತನಾಡಿದರು.
ಜ್ಞಾನ ಜೋಳಿಗೆ ಮೂಲಕ ಪುಸ್ತಕಗಳನ್ನು ಸಂಗ್ರಹಿಸಿ, ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ನೀಡುತ್ತಿರುವುದು ನಿಜಕ್ಕೂ ಅಭಿಮಾನದ ಸಂಗತಿ ಎಂದರು.
ಗ್ರಾಮೀಣ ಭಾಗದ ಮಕ್ಕಳ ಜ್ಞಾನದಾಹವನ್ನು ತಣಿಸುವ ಸಿಎನ್ಎಫ್ ಸಂಸ್ಥೆಯ ಜ್ಞಾನ ಯಜ್ಞ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಜ್ಞಾನ ಜೋಳಿಗೆ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಜ್ಞಾನ ಜೋಳಿಗೆ ಕಾರ್ಯಕ್ಕೆ ನಾಡಿನಾದ್ಯಂತ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಹಿತ್ಯಾಸಕ್ತರು, ಶಿಕ್ಷಕರು, ಸಾಹಿತಿಗಳು ತಾವು ಓದಿ ಎತ್ತಿಟ್ಟಿರುವ ಪುಸ್ತಕಗಳನ್ನು ಜ್ಞಾನ ಜೋಳಿಗೆ ದಾಸೋಹ ಮಾಡುವಂತೆ ಅವರು ಮನವಿ ಮಾಡಿದರು.
ಸಿಎನ್ ಎಫ್ ವಿಭಾಗದ ಮುಖ್ಯಸ್ಥ ಟಿಯೋಲ್ ಮಾಚಾಡೊ ಆಲ್ವಿನ್, ಸಿದ್ಧಲಿಂಗ ಬಾಗೇವಾಡಿ, ಭರತ್ ರೆಡ್ಡಿ, ಚಂದ್ರಶೇಖರ್ ಗಂಟೆಪ್ಪಗೋಳ, ಭರತ್ ಕುಮಾರ್, ರವಿ ಕೆಂಗನಾಳ ಉಪಸ್ಥಿತರಿದ್ದರು.
ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಹಾಗೂ ಜ್ಞಾನ ಜೋಳಿಗೆ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಪರವಾಗಿ ಸಂಗಮೇಶ ಬಬಲೇಶ್ವರ ಅವರು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ಸತ್ಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.