
ವಿಜಯಪುರ: ‘ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಉಳಿಸಲು ಕಾಂಗ್ರೆಸ್ ಪಕ್ಷದಿಂದ ಜನಾಂದೋಲ ನಡೆಸಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಈಗಾಗಲೇ ಹಂತ ಹಂತವಾಗಿ ಅನುದಾನ ಕಡಿತಮಾಡುವ ಮೂಲಕ ಎನ್ಆರ್ಇಜಿ ಯೋಜನೆಯನ್ನು ಕೊಲ್ಲುವ ಕೆಲಸ ಮಾಡಿದೆ. ಯೋಜನೆಯನ್ನು ಮರಳಿ ಜಾರಿಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಜನವರಿ 22ರಿಂದ 31ರವರೆಗೆ ವಿಶೇಷ ಅಧಿವೇಶನ ಕರೆಯಲಾಗಿದೆ’ ಎಂದು ತಿಳಿಸಿದರು.
‘ಯುಪಿಎ ಸರ್ಕಾರ 2005ರಲ್ಲಿ ಎನ್ಆರ್ಇಜಿ ಜಾರಿಗೆ ತರುವ ಮೂಲಕ ಉದ್ಯೋಗದ ಹಕ್ಕನ್ನು ಸಂವಿಧಾನಾತ್ಮಕವಾಗಿ ನೀಡಿತ್ತು. ಇದರಿಂದ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಸದೃಢವಾಗಿತ್ತು. ಯೋಜನೆ ಸ್ಥಗಿತಗೊಳಿಸಿದರೆ ಗ್ರಾಮ ಪಂಚಾಯಿತಿಗಳಿಗೆ ಅನುದಾನವಿಲ್ಲದೇ ಬೀಗ ಹಾಕುವ ಪರಿಸ್ಥಿತಿ ಬರಲಿದೆ’ ಎಂದರು.
‘ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ದುಡಿಯುವ ವರ್ಗಕ್ಕೆ ಅನ್ಯಾಯ ಮಾಡಿದೆ. ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಗುತ್ತಿಗೆದಾರ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿದೆ. ನಿರುದ್ಯೋಗದ ಪ್ರಮಾಣ ಹೆಚ್ಚಳ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆ, ಕಾರ್ಮಿಕರಿಗೆ ಕನಿಷ್ಠ ವೇತನದ ರಕ್ಷಣೆ ಈ ಯೋಜನೆಯಿಂದ ಸಾಧ್ಯವಾಗದು’ ಎಂದು ಹೇಳಿದರು.
‘ಗ್ರಾಮ ಪಂಚಾಯಿತಿಗಳು ಕೇವಲ ಅನುಷ್ಠಾನಗೊಳಿಸುವ ಸಂಸ್ಥೆಗಳಾಗಲಿವೆ. ಸ್ಥಳೀಯ ಕಾಮಗಾರ ನಿರ್ಧರಿಸುವಲ್ಲಿ ಅವುಗಳ ಅಧಿಕಾರ ಮೊಟಕಾಗಲಿದೆ. ಕಾರ್ಮಿಕರ ಶೋಷಣೆ ಮತ್ತು ಒತ್ತಡ ಹೆಚ್ಚಳವಾಗಲಿದ್ದು, ಗ್ರಾಮೀಣ ಆಸ್ತಿಗಳನ್ನು ನಿರ್ಮಿಸುವಂತೆ ಜನರು ಬೇಡಿಕೆ ಇಡಲು ಸಾಧ್ಯವಾಗುವುದಿಲ್ಲ’ ಎಂದರು.
‘ಎನ್ಆರ್ಇಜಿ ಯೋಜನೆ ರಾಷ್ಟ್ರ ವ್ಯಾಪಿಯಾಗಿತ್ತು. ವಿಬಿಜಿ ರಾಮ್ ಜಿ ಯೋಜನೆಯನ್ನು ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಅನುಷ್ಠಾನಕ್ಕೆ ತರಲು ಕೇಂದ್ರ ಮುಂದಾಗಿದೆ. ಇದರಡಿ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳನ್ನು ಮಾತ್ರ ಕೈಗೆತ್ತಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.
‘ಮಾನವ ದಿನವನ್ನು 100ರಿಂದ 150ಕ್ಕೆ ಹೆಚ್ಚಿಸಲಾಗಿದ್ದು, ಕೂಲಿ ಬಗ್ಗೆ ಸ್ಪಷ್ಟಪಡಿಸಿಲ್ಲ. ಕೃಷಿ ಹಂಗಾಮಿನಲ್ಲಿ ಎರಡು ತಿಂಗಳು ಕೆಲಸ ನೀಡುವಂತಿಲ್ಲ ಎಂಬುದಾಗಿ ನಿರ್ಬಂಧ ವಿಧಿಸಲಾಗಿದೆ. ರಾಜ್ಯ ಮತ್ತು ಕೇಂದ್ರದ ಅನುದಾನದ ಪಾಲನ್ನು ಸಮನಾಗಿ ನಿಗದಿ ಪಡಿಸಿದ್ದು, ಇದು ರಾಜ್ಯಗಳಿಗೆ ಹೊರೆಯಾಗಲಿದೆ’ ಎಂದರು.
ಶಾಸಕ ವಿಠಲ ಕಟಕದೊಂಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಇದ್ದರು.
‘ಅನ್ಯಾಯದ ಯೋಜನೆಗೆ ರಾಮನ ಹೆಸರು’
‘ಆರ್ಎಸ್ಎಸ್ ಬಿಜೆಪಿಯವರು ಗಾಂಧಿ ವಿರೋಧಿಗಳು. ಹೀಗಾಗಿ ಎನ್ಆರ್ಇಜಿಯಲ್ಲಿದ್ದ ಗಾಂಧಿ ಹೆಸರು ತೆಗೆದು ರಾಮನ ಹೆಸರು ಸೇರಿಸಿದ್ದಾರೆ. ರಾಮನ ಹೆಸರಲ್ಲಿ ಬಡವರು ಕೂಲಿಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ. ವಿಬಿಜಿ ರಾಮ್ ಜಿ ಎಂಬ ಅನ್ಯಾಯದ ಯೋಜನೆಗೆ ರಾಮನ ಹೆಸರು ಇಡಲು ಹೊರಟಿದ್ದಾರೆ’ ಎಂದು ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು. ‘ಮಹಾತ್ಮ ಗಾಂಧಿ ಕೊಂದವರೇ ಆರ್ಎಸ್ಎಸ್ ಬಿಜೆಪಿಯವರು. ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಲ್ಲ. ಬ್ರಿಟೀಷರ ಏಜೆಂಟ್ ಆಗಿದ್ದವರು. ಯಾವುದೇ ಯೋಜನೆ ಮೂಲ ಹೆಸರು ಬದಲಿಸುವುದು ಸರಿಯಲ್ಲ. ಮನುವಾದಿಗಳಿಗೆ ಸಂವಿಧಾನ ರಾಷ್ಟ್ರಗೀತೆ ರಾಷ್ಟ್ರಧ್ವಜ ಬೇಕಾಗಿಲ್ಲ’ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರನ್ನು ಮಾತ್ರವಲ್ಲದೆ ಅದರ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುವ ಮೂಲಕ ಗ್ರಾಮೀಣ ಜನತೆಯ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ–ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.