
ತಾಳಿಕೋಟೆ: ತಾಲ್ಲೂಕಿನ ಕಲಕೇರಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ನಡೆದ ಭ್ರಷ್ಟಾಚಾರ ಆರೋಪದ ತನಿಖೆ ನಡೆಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಸಾಗರ ಬಣ)ಕಲಕೇರಿ ವಲಯ ಹಾಗೂ ಗ್ರಾಮ ಶಾಖೆ ಸಹಯೋಗದಲ್ಲಿ ಕಲಕೇರಿಯಿಂದ ವಿಜಯಪುರದವರೆಗೆ ಪಾದಯಾತ್ರೆಗೆ ಬುಧವಾರ ಬೆಳಿಗ್ಗೆ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಚಾಲನೆ ನೀಡಲಾಯಿತು.
ಪ್ರತಿಭಟನಾ ಪಾದಯಾತ್ರೆಯು ವಿವಿಧ ಗ್ರಾಮಗಳ ಮೂಲಕ ಸಾಗಿ ಫೆ. 14ರಂದು ವಿಜಯಪುರ ನಗರಕ್ಕೆ ತಲುಪಲಿದೆ. ಅಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಸಾಗರ ಬಣ) ಕಲಕೇರಿ ವಲಯ ಸಂಚಾಲಕ ಸೋಮಶೇಖರ ಪಿ. ಬಡಿಗೇರ ಹೋರಾಟ ಸಮಿತಿಯ ಯಮನೂರಿ ಸಿಂದಗಿರಿ, ‘ಕಲಕೇರಿ ಗ್ರಾಮ ಪಂಚಾಯತಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜ. 23 ರಂದು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಧರಣಿ ಸ್ಥಳಕ್ಕೆ ತಹಶೀಲ್ದಾರ್ ಬಂದು ಮಾತುಕತೆ ನಡೆಸಿ ಒಂದು ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳು ಹೋರಾಟಗಾರರಿಗೆ ವರದಿ ನೀಡುವಂತೆ ಸೂಚನೆ ನೀಡಿದ್ದರು. ಅಲ್ಲಿಯವರೆಗೆ ಧರಣಿ ಸ್ಥಗಿತಗೊಳಿಸುವಂತೆ ತಿಳಿಸಿದ ಕಾರಣ ಧರಣಿಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿತ್ತು. ಆದರೆ ಕೊಟ್ಟ ಗಡುವು ಮುಗಿದರೂ ಯಾವುದೇ ವರದಿ ಕೊಟ್ಟಿಲ್ಲ. ಸೂಕ್ತ ಸ್ಪಂದನೆಯೂ ಸಿಕ್ಕಿಲ್ಲ. ಹೀಗಾಗಿ ಸಂಘಟನೆಯ ಪದಾಧಿಕಾರಿಗಳು ಮೊದಲೇ ನಿರ್ಣಯಿಸಿದಂತೆ ಕಲಕೇರಿ- ವಿಜಯಪುರದವರೆಗೆ ಪಾದಯಾತ್ರೆ ಪ್ರಾರಂಭಿಸಿದ್ದೇವೆ’ ಎಂದರು.
ಮಹ್ಮದ್ ಸಲೀಮ್ ಬಡೇಮ್ಮಗೊಳ, ಸಮೀರ ಮಂದೆವಾಲ, ಸಮೀರ್ ಬಿಸನಾಳ, ಪ್ರಕಾಶ ನಡುವಿನಕೇರಿ, ಅರುಣ ಪೂಜಾರಿ, ಸದ್ದಾಂ ತುಂಬಗಿ, ಬಾಬಾ ಇನಾಮದಾರ, ದೇವು ವಡ್ಡರ, ಶರೀಫ್ ಕುರ್ನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.