ವಿಜಯಪುರ: ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ಜೀವನ ಸಾಗಿಸಿದರೇ ಯಾವುದೇ ರೋಗಗಳು ಬರದಂತೆ ಹಾಗೂ ನಿಯಂತ್ರಿಸಲು ಸಾಧ್ಯವಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಸಂತ ಅನ್ನಮ್ಮನವರ ಚರ್ಚ್ನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಷನ್ಸ್ ಸೊಸಾಯಿಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವಿಜಯಪುರ, ಸಮರ್ಪಣಾ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಎಚ್ಐವಿ ಸೋಂಕಿತರ ರಾಜ್ಯ ಮಟ್ಟದ ವಧುವರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿಗೆ ಹಲವಾರು ಖಾಯಿಲೆಗಳು ನೋಡುತ್ತಿದ್ದೇವೆ. ಅವುಗಳನ್ನು ನಿಯಂತ್ರಿಸಲು ಜಾಗೃತಿಯ ಜೊತೆಗೆ ನಮ್ಮಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತರ ರಾಜ್ಯ ಮಟ್ಟದ ಸಮ್ಮೇಳನ ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯ. ಇಂತಹ ಸಮಾವೇಶಗಳಿಂದ ಸುಂದರವಾದ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ ಮಾತನಾಡಿ, ಎಚ್ಐವಿ ಸೋಂಕಿತರು ಅಸ್ಪೃಶ್ಯರಲ್ಲ, ಮಾನಸಿಕವಾಗಿ, ಸಾಮಾಜಿಕವಾಗಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರೆ ಎಲ್ಲರ ಹಾಗೆ ಸದೃಢವಾದ ಜೀವನ ಸಾಗಿಸಲು ಸಾಧ್ಯವಿದೆ ಎಂದರು.
ಸಮಾವೇಶಕ್ಕೆ ಬಂದ ವಧು–ವರರು ತಮ್ಮ ಆರೋಗ್ಯದ ಬಗ್ಗೆ, ಕುಟುಂಬದ ಬಗ್ಗೆ ಕಾಳಜಿ ಹೊಂದಿರಬೇಕು. ಆರೋಗ್ಯ ನಿರ್ವಹಣೆಯಲ್ಲಿ ಸರಿಯಾಗಿ ಕಾಳಜಿ ತೋರುವ ಮೂಲಕ ಜೀವನ ನಡೆಸಬೇಕು ಎಂದು ಶುಭ ಹಾರೈಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಮಾತನಾಡಿ, ಪ್ರತಿ ವರ್ಷ ಇಲಾಖೆ ಹಾಗೂ ಜಿಲ್ಲೆಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಧುವರರ ಸಮಾವೇಶ ಮಾಡುತ್ತಿದ್ದೇವೆ. ಇದರಿಂದ ಅನೇಕ ಎಚ್ಐವಿ ಸೋಂಕಿತರಿಗೆ ಅನುಕೂಲವಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುವುದು ಎಂದರು.
ಪೀಟರ್ ಅಲೇಕ್ಸಾಂಡರ್, ಪೂಜಾ ಟೆಲಿವಿಜನ್ ಮಾಲೀಕರಾದ ವಿಜಯಕುಮಾರ ಚವ್ಹಾಣ, ಅನೌಪಚಾರಿಕ ಸಂಸ್ಥೆಯ ಕೆವಿಎನ್ ಪಾಧರ, ಸಮರ್ಪಣಾ ಸಂಸ್ಥೆಯ ಯೋಜನಾ ನಿರ್ದೇಶಕ ರಾಮದಾಸ, ಎಆರ್ಟಿ ಕೇಂದ್ರ ವೈದ್ಯಾಧಿಕಾರಿ ಶ್ವೇತಾ ಸನದಿ, ಬಾಬುರಾವ ತಳವಾರ, ರವಿ ಕಿತ್ತೂರ, ವಿಜಯಕುಮಾರ ಕಾಂಬಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.