ಇಂಡಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ವಕೀಲರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ಪಟ್ಟಣದ ವಕೀಲರು ಹಿರಿಯ ವಕೀಲರ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಿಂದ ಪ್ರತಿಭಟನೆ ಪ್ರಾರಂಭಿಸಿದ ವಕೀಲರು, ಬಸವೇಶ್ವರ ವೃತದಲ್ಲಿ ಸುಮಾರು 5 ನಿಮಿಷಗಳ ಕಾಲ ರಸ್ತೆ ತಡೆದು ತದನಂತರ ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ಉಪವಿಭಾಗ ಅಧಿಕಾರಿಗಳಿಗೆ ವಕೀಲರ ಸಂಘದ ಅಧ್ಯಕ್ಷ ಪಿ.ಬಿ. ಪಾಟೀಲ್ ಹಾಗೂ ಹಿರಿಯ ವಕೀಲರು ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಪಿ.ಬಿ. ಪಾಟೀಲ ಮಾತನಾಡಿ, ನಾಗರಿಕರು, ಇಲಾಖೆ ಅಧಿಕಾರಿಗಳಿಗೂ ಅಥವಾ ಅದೇ ಪೊಲೀಸ್ ಇಲಾಖೆಯವರಿಗೂ ಅನ್ಯಾಯವಾದಾಗ, ನ್ಯಾಯ ಕೊಡಿಸುವ ಪ್ರಮುಖ ಪಾತ್ರ ವಕೀಲರು ಮಾಡುತ್ತಾರೆ. ಕಳೆದ ಎರಡು ದಿನಗಳ ಹಿಂದೆ ಚಿಕ್ಕಮಗಳೂರು ವಕೀಲ ಪ್ರೀತಮ್ ಎನ್.ಟಿ, ಅವರು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯ ಎಸಗಿ ಅಮಾನುಷವಾಗಿ ನಡೆದುಕೊಂಡಿದ್ದು ಖಂಡನೀಯ ಎಂದರು.
ಈ ಕುರಿತು ಅಲ್ಲಿನ ವಕೀಲರು ಪ್ರತಿಭಟನೆಗೆ ಮುಂದಾದಾಗ ಅಲ್ಲಿನ ಪೊಲೀಸ್ ಇಲಾಖೆ ಅಧಿಕಾರಿಗಳು ಕಾರಣವಿಲ್ಲದೆ ಅನೇಕ ವಕೀಲರ ಮೇಲೆ ಮೂರು ಪ್ರಕರಣ ದಾಖಲಿಸಿ ಸಂವಿಧಾನ ವಿರೋಧಿ ನೀತಿ ಪ್ರದರ್ಶನ ಮಾಡಿದ್ದಾರೆ. ಇಂತಹ ಕೆಟ್ಟ ವಿಚಾರವುಳ್ಳ ಪೊಲೀಸರ ಮೇಲೆ ಕಾನೂನು ಕ್ರಮ ಜರಗಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಎಸ್.ಬಿ. ಬೂದಿಹಾಳ, ಎಂ.ಸಿ. ಬಿರಾದಾರ, ಸೋಮು ನಿಂಬರಗಿಮಠ, ಜೆ.ಬಿ. ಬೇನೂರ, ಎಸ್.ಎಲ್. ನಿಂಬರಗಿಮಠ, ಎಂ.ಎಸ್. ತೇಲಿ, ಶ್ರೇಣಿಕರಾಜ ಪಾಟೀಲ, ಎ.ಎಂ. ಬಿರಾದಾರ, ಬಿ.ಕೆ. ಮಸಳಿ, ಡಿ.ಜೆ. ಜೋತಗೊಂಡ, ಎನ್.ಕೆ. ನಾಡಪುರೋಹಿತ, ಅನೀಲ ಜೋಶಿ, ವೀರೇಂದ್ರ ಪಾಟೀಲ, ಎಂ.ಬಿ. ಬಿರಾದಾರ, ಎಸ್.ಆರ್. ಬಿರಾದಾರ, ಪಿ.ಜಿ ನಾಡಗೌಡ, ಪ್ರದೀಪ ಮೂರಮನ, ವಾಯ್.ಎಸ್. ಪೂಜಾರಿ, ಎ.ಜಿ. ಜೋಶಿ, ಎಸ್.ಆರ್ ಮುಜಗೊಂಡ, ಎಸ್.ಜಿ. ವಾಲಿಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.