ವಿಜಯಪುರ: ದಿನದ 24 ಗಂಟೆಯೂ ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಿರುವ ಪೊಲೀಸರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಅತ್ಯವಶ್ಯವಾಗಿದೆ ಎಂದು ಐಆರ್ಬಿ ಪೊಲೀಸ್ ಬಟಾಲಿಯನ್ ಕಮಾಂಡೆಂಟ್ ಪ್ರಸನ್ನಕುಮಾರ ಹೇಳಿದರು.
ನಗರದ ಹೊರ ವಲಯದ ಅರಕೇರಿಯಲ್ಲಿ ಐಆರ್ಬಿ ಪೊಲೀಸ್ ಬಟಾಲಿಯನ್ನಲ್ಲಿ ಶುಕ್ರವಾರ ‘ಆರಕ್ಷಕರ ನಡಿಗೆ ಆರೋಗ್ಯದ ಕಡೆಗೆ’ ಎಂಬ ಘೋಷವಾಕ್ಯದಡಿಯಲ್ಲಿ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರ, ಆರೋಗ್ಯ ಉಚಿತ ತಪಾಸಣೆ ಮತ್ತು ಔಷಧ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯವನ್ನು ಲೆಕ್ಕಿಸದೇ ಸದಾ ಕರ್ತವ್ಯ ಪ್ರಜ್ಞೆಯನ್ನು ಮೆರೆಯುವ ಪೊಲೀಸರು ಇಂಥ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಹಿತಮಿತ ಆಹಾರ ಸೇವನೆಯೊಂದಿಗೆ ವಾಯುವಿಹಾರ, ಯೋಗ, ಧ್ಯಾನಗಳನ್ನೂ ರೂಢಿಸಿಕೊಳ್ಳಬೇಕು ಎಂದರು.
ಡಾ.ಅಮರೇಶ ಮಿಣಜಗಿ ಮಾತನಾಡಿ, ತಮ್ಮ ನೆಮ್ಮದಿಯನ್ನೂ ಲೆಕ್ಕಿಸದೇ ಸ್ವಾಸ್ಥ್ಯ ಸಮಾಜಕ್ಕಾಗಿ ಹಗಲಿರುಳು ದುಡಿಯುವ ಪೊಲೀಸರ ಸೇವೆ ಅನುಪಮವಾದುದು. ಪೊಲೀಸರ ಆರೋಗ್ಯದ ಸುರಕ್ಷತೆಗಾಗಿ ತಮ್ಮ ಸೇವೆ ನಿರಂತರವಾಗಿ ಇರಲಿದೆ ಎಂದರು.
ನರರೋಗ ತಜ್ಞ ಡಾ.ಹಿತೇಂದ್ರ ನಾಯಕ, ಮನೋವೈದ್ಯೆ ಡಾ.ಸೌಮ್ಯ ನಾಯಕ ಮಾತನಾಡಿದರು.
ಹೃದ್ರೋಗ ತಜ್ಞರಾದ ಡಾ.ದೀಪಕ್ ಕಡೇಲಿ, ಡಾ.ಶೀತಲ್ ನಾಯಕ, ಡಾ.ಈರಣ್ಣ ಬಂಡಿ, ಡಾ.ಸುರೇಶ ಕಾಗಲಕರರೆಡ್ಡಿ, ಡಾ.ಶಂಕರ ಬಡಿಗೇರ, ಡಾ.ಅಪೂರ್ವ ಮಾಗಿ, ಡಾ.ಅಶ್ವಿನಿ ಹೊಸಮನಿ, ಡಾ.ಅಕ್ಷಯ ಪಾಟೀಲ, ಬಸವರಾಜ ಮಾಗಿ, ಮೋಹನಕುಮಾರ ಶ್ರೀಕಂಡೆ, ಹುಸೇನ ಲಾಲಕೋಟ ಇದ್ದರು.
ಶಿಬಿರದಲ್ಲಿ 20 ಜನ ರಕ್ತದಾನ ಮಾಡಿದರು. 200ಕ್ಕೂ ಅಧಿಕ ಐಆರ್ಬಿ ಪೊಲೀಸರಿಗೆ ರಕ್ತದೊತ್ತಡ, ಮಧುಮೇಹ, ಇಸಿಜಿ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಮತ್ತಿತರ ರೋಗಗಳ ತಪಾಸಣೆ ನಡೆಸಿ ಔಷದೋಪಚಾರ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.