ADVERTISEMENT

ದೇವರಹಿಪ್ಪರಗಿ | ಪ್ರಜಾಸೌಧ: ಈಡೇರದ ಬಜೆಟ್ ಭರವಸೆ

ಕಟ್ಟಡ ಕನಸು ಈ ವರ್ಷವಾದರೂ ಈಡೇರಿತೆ?

ಅಮರನಾಥ ಹಿರೇಮಠ
Published 26 ಜನವರಿ 2026, 6:33 IST
Last Updated 26 ಜನವರಿ 2026, 6:33 IST
ದೇವರಹಿಪ್ಪರಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಪ್ರಜಾಸೌಧ ನಿರ್ಮಾಣಕ್ಕಾಗಿ ಮೀಸಲಾಗಿಟ್ಟ ಜಾಗ
ದೇವರಹಿಪ್ಪರಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಪ್ರಜಾಸೌಧ ನಿರ್ಮಾಣಕ್ಕಾಗಿ ಮೀಸಲಾಗಿಟ್ಟ ಜಾಗ   

ದೇವರಹಿಪ್ಪರಗಿ: ಒಂದೇ ಸೂರಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಲಭ್ಯವಾಗುವ ನಿಟ್ಟಿನಲ್ಲಿ ನೂತನ ತಾಲ್ಲೂಕು ಕೇಂದ್ರದಲ್ಲಿ ನಿರ್ಮಿಸಬೇಕಾಗಿದ್ದ ‘ಪ್ರಜಾಸೌಧ’ ಕಟ್ಟಡ ಕನಸು ಈಡೇರದ ಬಜೆಟ್ ಭರವಸೆಯೇನಿಸಿದೆ.

ಜಿಲ್ಲೆ ಸೇರಿದಂತೆ ರಾಜ್ಯದ 21 ನೂತನ ತಾಲ್ಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣದ ಬಗ್ಗೆ 2025ರ ಬಜೆಟ್‌ನಲ್ಲಿ ಘೋಷಿಸಿ ₹8.60 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡುವುದರ ಜೊತೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಿ ಕನಿಷ್ಠ 5 ಎಕರೆ ಸರ್ಕಾರಿ ಜಾಗದ ಲಭ್ಯತೆ, ಏಕರೂಪದ ವಿನ್ಯಾಸ ಮತ್ತು ನಿಗದಿತ ಅನುದಾನದ ಮೂಲಕ ನಿರ್ಮಾಣದ ಭರವಸೆ ಮೂಡಿಸಿತು.

ಅಂತೆಯೇ, ನೂತನ ತಾಲ್ಲೂಕು ಕೇಂದ್ರವಾದ ಪಟ್ಟಣದಲ್ಲಿ ತಹಶೀಲ್ದಾರರ ಬದಲಾವಣೆಯಿಂದಾಗಿ ಹಾಗೂ ತಾಲ್ಲೂಕು ಆಡಳಿತ 5 ಎಕರೆ ಸರ್ಕಾರಿ ಜಾಗದ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳದ ಕಾರಣ ವಿಳಂಬವಾಗಿ ಕೊನೆಗೆ ವಿಜಯಪುರ ರಸ್ತೆಯಲ್ಲಿನ ಸರ್ವೇ ನಂ. 512/*/02 ರ 3 ಎಕರೆ ಜಾಗೆಯಲ್ಲಿ ಮಿನಿ ವಿಧಾನಸೌಧಗೆ ಮೀಸಲಾಗಿಟ್ಟ ಜಾಗ ಎಂಬ ನಾಮಫಲಕದ ಅಳವಡಿಸುವುದರ ಮೂಲಕ ಪ್ರಜಾಸೌಧ ನಿರ್ಮಾಣಕ್ಕೆ ತಾಲ್ಲೂಕು ಆಡಳಿತ ಮುಂದಾಗಿ ಭರವಸೆ ಮೂಡಿಸಿತು. ಆದರೆ, ಸರ್ಕಾರದಿಂದ ಅನುದಾನ ಮಾತ್ರ ಬಿಡುಗಡೆಯಾಗಲಿಲ್ಲ.

ADVERTISEMENT

ನೂತನ ತಾಲ್ಲೂಕು ಕೇಂದ್ರದ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾರ್ಯ ಬಜೆಟ್‌ನಲ್ಲಿ ಹೇಳಿದಂತೆ ಕಳೆದ ವರ್ಷವೇ ಆರಂಭಗೊಂಡು ಪೂರ್ಣಗೊಳ್ಳಬೇಕಾಗಿತ್ತು. ಆದರೆ, ವರ್ಷ ಕಳೆದರೂ ಆರಂಭಗೊಳ್ಳದ ಬಗ್ಗೆ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಭೀಮನಗೌಡ ಸಿದರಡ್ಡಿ ಮಾತನಾಡಿ, ‘ತಾಲ್ಲೂಕು ಪ್ರಜಾಸೌಧ ಕಟ್ಟಡ ನಿರ್ಮಾಣ ಕೇವಲ ಮಾತಿಗೆ ಸೀಮಿತವಾಗಿದೆ. ಈಗ 2026ರ ಬಜೆಟ್ ಮೂಲಕವಾದರೂ ಅನುದಾನ ಒದಗಿಸಿ, ಪ್ರಜಾಸೌಧ ನಿರ್ಮಾಣ ಕಾರ್ಯ ಮಾಡಬೇಕು’ ಎಂದರು.

‘ಪಟ್ಟಣಲ್ಲಿ ದಾನ ಪಡೆದ 3 ಎಕರೆ ಜಾಗಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ತ್ವರಿತವಾಗಿ ಇಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರ ಇದನ್ನು ನಿರ್ಮಿತಿ ಕೇಂದ್ರ ಅಥವಾ ಪಿಆರ್‌ಡಿಗೆ ನೀಡಬಹುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ. ಆದಷ್ಟು ಶೀಘ್ರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ’ ಎಂದು ತಹಶೀಲ್ದಾರ್‌ ನಿಂಗಣ್ಣ ಬಿರಾದಾರ ಹೇಳಿದರು.

ಸುಸಜ್ಜಿತ ಪ್ರಜಾಸೌಧಕ್ಕೆ ಮೊದಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಾಗಿದೆ. ಅದಕ್ಕಾಗಿ ವಿನಂತಿಸಲಾಗಿದ್ದು ನಂತರವಷ್ಟೇ ಟೆಂಡರ್ ಸಹಿತ ಇತರ ಪ್ರಕ್ರಿಯೆಗಳು.
ರಾಜುಗೌಡ ಪಾಟೀಲ ಶಾಸಕ ದೇವರಹಿಪ್ಪರಗಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.