ತಿಕೋಟಾ: ಪ್ರತಿ ಮೂರನೇ ಶನಿವಾರ ಅಧಿಕಾರಿಗಳ ತಂಡ ನಿಗದಿಪಡಿಸಿದ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಗ್ರಾಮದ ಜನರ ಕುಂದು ಕೊರತೆಗಳನ್ನು ನೀಗಿಸುವ ಕಾರ್ಯಕ್ರಮಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು.
ತಾಲ್ಲೂಕಿನ ಹುಬನೂರ ಗ್ರಾಮದಲ್ಲಿ ಶನಿವಾರ ವಾಸ್ತವ್ಯ ಹೂಡಿ ಬೆಳಿಗ್ಗೆಯಿಂದ ಸಂಜೆಯ ವರೆಗೆ ಜನರ ಕುಂದು ಕೊರತೆಯನ್ನು ತಹಶೀಲ್ದಾರ ಸಂತೋಷ ಮ್ಯಾಗೇರಿ ಆಲಿಸಿದರು. ಕಂದಾಯ ಇಲಾಖೆ, ಪಂಚಾಯತ್ ರಾಜ್, ಭೂ ದಾಖಲೆಗಳ ಇಲಾಖೆ, ಹೆಸ್ಕಾಂ, ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆ ಸೇರಿ ಒಟ್ಟು 113 ಅರ್ಜಿಗಳನ್ನು ಸ್ವೀಕರಿಸಿದರು. ಇದರಲ್ಲಿ 35 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು. ಬಾಕಿ ಉಳಿದ 78 ಪ್ರಕರಣಗಳಿಗೆ ಸಮಯಾವಕಾಶ ತೆಗೆದುಕೊಂಡು ವಾರದೊಳಗೆ ಪರಿಹರಿಸುವ ಭರವಸೆ ನೀಡಿದರು.
ತಾಲ್ಲೂಕು ಆಡಳಿತದ ಎಲ್ಲ ಹಿರಿಯ ಅಧಿಕಾರಿಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಸುತ್ತಾಡಿ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಕೇಳಿದರು. ಸಂಧ್ಯಾ ಸುರಕ್ಷಾ ಯೋಜನೆಯಡಿ ಪ್ರತಿಯೊಬ್ಬರಿಗೂ ಸರಿಯಾಗಿ ಪ್ರತಿ ತಿಂಗಳು ಪಿಂಚಣಿ ಜಮಾ ಆಗುವ ಕುರಿತು ಸ್ವತ: ವಯಸ್ಸಾದ ಅಜ್ಜ, ಅಜ್ಜಿಯವರಿಗೆ ಮಾತನಾಡಿಸಿ ಖಚಿತಪಡಿಸಿಕೊಂಡರು.
ಗ್ರೇಡ್-2 ತಹಶಿಲ್ದಾರ್ ಎಸ್.ಎಚ್.ಅರಕೇರಿ, ಶಿರಸ್ತೆದಾರ ರಾಜು ಸುಣಗಾರ, ತಿಕೋಟಾ ಪಿಎಸ್ಐ ಬಸವರಾಜ ಬಿಸನಕೊಪ್ಪ, ತಾಲ್ಲೂಕ ಆರೋಗ್ಯ ಅಧಿಕಾರಿ ಕವಿತಾ ದೊಡಮನಿ, ಶಿಕ್ಷಣ ಸಂಯೋಜಕ ರವೀಂದ್ರ ಚಿಕ್ಕಮಠ, ವಿನೋದ ಹಂಚನಾಳ, ಸಹಾಯಕ ಕೃಷಿ ಅಧಿಕಾರಿ ಎಸ್.ಬಿ.ದೊಡಮನಿ, ಪಶು ಸಂಗೋಪನೆ ಇಲಾಖೆ ಅಧಿಕಾರಿ ಡಾ.ವಿಠೋಬಾ ಆಸಂಗಿಹಾಳ, ಸಿಆರ್ಪಿ ಮಲ್ಲಿಕಾರ್ಜುನ ಜೇವೂರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಲಮಾಣಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರೇಖಾ ಪವಾರ, ಹೆಸ್ಕಾಂ ಇಲಾಖೆ ಎಇಇ ಜಿ.ಎಸ್. ದೇಶಮುಖ, ಗ್ರಾಮ ಲೆಕ್ಕಾಧಿಕಾರಿ ಎಂ.ಬಿ.ಖಾಜಿ, ಮಧುಕರ ಸಾಹುಕಾರ ಜಾಧವ, ರಾಮಣ್ಣ ಮಾಳಿ, ಶಂಕರಗೌಡ ಪಾಟೀಲ, ರಂಗನಾಥ ಸಾಳುಂಕೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.